ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಕರ್ತವ್ಯಲೋಪ ಎಸಗಿದ್ದಾರೆಂಬ ಆರೋಪದ ಮೇಲೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ತಾಲೂಕಿನ ಲಕ್ಷ್ಮಿಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಮಚಂದ್ರ ಮತ್ತು ಒಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಸ್ ಅಶೋಕ್ ಅಮಾನತಾಗಿರುವ ಶಿಕ್ಷಕರು. ಅವರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಆದೇಶ ಹೊರಡಿಸಿದ್ದಾರೆ.
ಇಬ್ಬರು ಶಿಕ್ಷಕರು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕಾರಣಿಗಳಿಂದ ಸನ್ಮಾನ ಸ್ವೀಕರಿಸಿದ್ದಾರೆ. ಸರ್ಕಾರಿ ನೌಕರರಾಗಿದ್ದು, ಶಾಲಾ ಮಕ್ಕಳಿಗೆ ಪಾಠ ಮಾಡದೆ ಮಕ್ಕಳ ಭವಿಷ್ಯಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಎನ್.ಎಸ್ ಲೋಕೇಸ್ ದೂರು ನೀಡಿದ್ದರು.
ಆರೋಪಕ್ಕೆ ಪೂರಕವಾಗಿ ರಾಜಕೀಯ ಪಕ್ಷಗಳೊಂದಿಗೆ ಶಿಕ್ಷಕರಿಬ್ಬರು ಗುರುತಿಸಿಕೊಂಡು ,ಸನ್ಮಾನ ಸ್ವೀಕರಿಸುತ್ತಿರುವ ಪೋಟೋ ಮತ್ತು ವಿಡಿಯೋವನ್ನು ಮೈಸೂರು ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಿದ್ದರು.
ಆರೋಪಗಳನ್ನು ಪರಿಶೀಲಿಸಿದ ಬಳಿಕ, ಕರ್ನಾಟಕ ನೌಕರ ನಡಾವಳಿ ಸಂಹಿತೆ 2021ರ 3(1-5) ನಿಯಮಾವಳಿ ಹಾಗೂ ಜನತಾ ಪ್ರತಿನಿಧಿ ಕಾಯ್ದೆ-1951ಯ ಅನುಸಾರ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.