- ಪ್ರಜಾಪ್ರಭುತ್ವ ಹಿಂದೆದೂ ಕಾಣದಷ್ಟು ಅಪಾಯಕ್ಕೆ ಒಳಗಾಗಿದೆ: ಆನಂದ್ ಶರ್ಮಾ
- ಕಡಿಮೆ ಅವಧಿಯಲ್ಲಿ ಹೆಚ್ಚು ಆಸ್ತಿ ಗಳಿಸಿರುವ ಆದಾನಿ ಸಂಸ್ಥೆ ಮೇಲೆ ತನಿಖೆ ಯಾಕಿಲ್ಲ?
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಚರ್ಚೆಗೆ ಎತ್ತಿರುವ ವಿಷಯಗಳು ಬಿಜೆಪಿಯ ನಿದ್ದೆಗೆಡಿಸಿದೆ. ಈ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಚರ್ಚೆಗೆ ಹೆದರಿದರೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂದು ಜನರೇ ನಿರ್ಧರಿಸುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ರಾಹುಲ್ ಗಾಂಧಿ ಅವರ ಬಗ್ಗೆ ಲಂಡನ್ನಲ್ಲಿ ವಿದೇಶಗಳು ಭಾರತಕ್ಕೆ ನೆರವಾಗಿ ಎಂದು ಕೇಳಿದ್ದಾರೆ ಎಂಬ ಸುಳ್ಳನ್ನು ಹೇಳಿದರು. ಸಂಸತ್ತು ಇರುವುದೇ ಚರ್ಚೆ ಮಾಡಲು. ಆದರೆ ಈ ವಿಚಾರವಾಗಿ ಸಂಸತ್ತಿನಲ್ಲಿ ಉತ್ತರ ನೀಡಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡುತ್ತಿಲ್ಲ”ಎಂದರು.
“ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಹಿಂದೆದೂ ಕಾಣದಷ್ಟು ಅಪಾಯಕ್ಕೆ ಒಳಗಾಗಿದೆ. 1952ರಲ್ಲಿ ಆರಂಭವಾದ ದಿನದಿಂದ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲಾಗುತ್ತಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸುವ ಕೆಟ್ಟ ಸಂಸ್ಕೃತಿ ಆರಂಭವಾಗಿದೆ. ಯಾವುದೇ ಚರ್ಚೆಗೆ ಆಡಳಿತ ಪಕ್ಷ ಅವಕಾಶ ನೀಡದೆ ಇರುವುದು ಕಂಡಾಗ ಈ ಬಿಜೆಪಿ ಸರ್ಕಾರ ಎಷ್ಟು ಭಯಭೀತವಾಗಿದೆ ಎಂಬುದು ತಿಳಿಯುತ್ತೆ” ಎಂದು ಹೇಳಿದರು.
मैं सच्चाई बोलता हूं, देश की ख़ातिर बोलता हूं। और आखिरी दम तक सच के रास्ते पर ही चलूंगा।
— Rahul Gandhi (@RahulGandhi) March 25, 2023
प्रधानमंत्री जी, बताइए #20000CroreKiskeHain pic.twitter.com/LO0tsYZTlk
“ದೇಶದ ಅತಿ ದೊಡ್ಡ ವ್ಯಾಪಾರ ಸಂಸ್ಥೆ ಅದಾನಿ ಸಮೂಹದ ವಿರುದ್ಧ ಪ್ರಶ್ನೆ ಮೂಡಿದೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಈ ಸಂಸ್ಥೆ ಮೇಲೆ ಅಕ್ರಮ ಹಣಕಾಸು ವ್ಯವಹಾರ ಸೇರಿದಂತೆ ಅನೇಕ ಆರೋಪ ಕೇಳಿ ಬಂದಿದೆ. 45 ಸಾವಿರ ಕೋಟಿಯಷ್ಟು ಹಣ ಅಕ್ರಮವಾಗಿ ಬಂದಿದ್ದು, ಇದರ ಮೂಲವನ್ನು ಪ್ರಶ್ನಿಸಬಾರದೇ? ಈ ಪ್ರಕರಣಗ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಮಾಡಬೇಕಲ್ಲವೇ? ಭಾರತ ಜಿ20 ಶೃಂಗಸಸಭೆ ನಡೆಯುವ ಸಮಯದಲ್ಲಿ ಈ ಆರೋಪ ಬಂದಿರುವಾಗ ತನಿಖೆ ಯಾಕೆ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದರು.
“ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿರುವ ರೀತಿ ಖಂಡನೀಯ. ಇಂತಹ ಅನರ್ಹತೆ ಹಿಂದೆಂದೂ ಆಗಿರಲಿಲ್ಲ. ಮಾರ್ಚ್ 13, 2019ರಲ್ಲಿ ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯವನ್ನು ಟೀಕೆ ಮಾಡಿರಲಿಲ್ಲ. ಹೀಗಾಗಿ ಕ್ರಿಮಿನಲ್ ಮಾನಹಾನಿಗೆ ಅವಕಾಶವೇ ಇರಲಿಲ್ಲ. ರಾಹುಲ್ ಗಾಂಧಿ ಅವರು ನೀರವ್ ಮೋದಿ ಹಾಗೂ ಲಲತಿ ಮೋದಿ ಅವರ ಕುರಿತಾಗಿ ಮಾಡಿರುವ ಭಾಷಣವಾಗಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ರಾಜಕೀಯ ಸತ್ ಪರಂಪರೆಯ ರಾಜ್ಯದಲ್ಲಿ ನಡೆಯಬೇಕಿದೆ ಮುಕ್ತ, ನ್ಯಾಯಸಮ್ಮತ ಚುನಾವಣೆ
ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಶ್ನೆ
“ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ 1,2,3,4 ನಲ್ಲಿ ಯಾವ ಅಪರಾಧಕ್ಕೆ ಅನರ್ಹತೆ ಮಾಡಲಾಗುವುದು ಎಂದು ವಿವರಣೆ ನೀಡಲಾಗಿದೆ. ಇಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೊದಲೇ ಅನರ್ಹತೆ ಮಾಡಲಾಗಿದೆ. ಹೀಗಾಗಿ ಈ ಅನರ್ಹತೆ ಊರ್ಜಿತವಾಗುವುದಿಲ್ಲ. ಭಾರತದ ಸಂವಿಧಾನದ ಪ್ರಕಾರ ಸಂಸತ್ತಿನ ಮುಖ್ಯಸ್ಥರು ರಾಷ್ಟ್ರಪತಿಗಳು, ಅವರು ಅನರ್ಹತೆಯ ಕುರಿತು ತೀರ್ಮಾನ ಮಾಡಬೇಕು. ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ರಾಷ್ಟ್ರಪತಿಗಳಿಗೆ ಅನರ್ಹತೆಯ ಪ್ರಸ್ತಾವನೆ ಸಲ್ಲಿಕೆಯಾಗದೇ ಅನರ್ಹತೆ ಮಾಡಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಮುಂದಿನ ಒಂದು ತಿಂಗಳು ದೇಶದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಇದು ಕೇವಲ ಒಂದು ಪಕ್ಷದ ನಾಯಕರ ಪ್ರಶ್ನೆಯಲ್ಲ. ಇದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಶ್ನೆಯಾಗಿದೆ” ಎಂದು ಹೇಳಿದರು.