- ಮಡಿಕೇರಿ ಕ್ಷೇತ್ರದಿಂದ ಡಾ. ಮಂತರ್ಗೌಡಗೆ ಟಿಕೆಟ್ ನೀಡಿದ ಕಾಂಗ್ರೆಸ್
- ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ಗೆ ಪರೋಕ್ಷ ಬೆಂಬಲ
ಕೊಡಗಿನವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಹೊರ ಜಿಲ್ಲೆಯ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಹಾಗಾಗಿ, ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಎ ಜೀವಿಜಯ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, “ರಾಜಕಾರಣದಲ್ಲಿ ಅನೇಕ ಬಾರಿ ಎಡವಿ ತಪ್ಪು ದಾರಿಯಲ್ಲಿ ನಡೆದಿದ್ದೇನೆ. ಜನತೆ ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಲ್ಲ. ಕಾಂಗ್ರೆಸ್ನಿಂದ ಪ್ರಾರಂಭವಾದ ಸಕ್ರಿಯ ರಾಜಕಾರಣದಿಂದ ದೂರವಾಗಿ ರಾಜೀನಾಮೆ ನೀಡಿದ್ದೇನೆ. ಇಂತಹ ನಿರ್ಧಾರಕ್ಕೆ ಬರಲು ಕಾರಣರಾದ ಕೆಪಿಸಿಸಿ ಅಧ್ಯಕ್ಷರಿಗೆ ಧನ್ಯವಾದ” ಎಂದು ಕುಟುಕಿದ್ದಾರೆ.
“ಯಾವ ಪಕ್ಷದ ಹಂಗೂ ನನಗಿಲ್ಲ. ತತ್ವಗಳು ಸಿದ್ಧಾಂತಗಳು ಮಾಯವಾಗಿದೆ. ಬೇರೆ ಜಿಲ್ಲೆಯ ಅಭ್ಯರ್ಥಿ ಬೇಡ ಎಂದಿದ್ದೆ. ನನ್ನ ಪತ್ರಕ್ಕೆ ಕವಡೆ ಕಾಸಿನ ಬೆಲೆ ಸಿಕ್ಕಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ತಂದೆ ಒಂದು ಪಕ್ಷ, ಮಗ ಮತ್ತೊಂದು ಪಕ್ಷ. ಕೊಡಗಿನವರೇ ಇಲ್ಲಿ ಗೆಲ್ಲಬೇಕು. ನನಗೆ ಅಥವಾ ಚಂದ್ರಮೌಳಿಗೆ ಟಿಕೆಟ್ ಕೊಡಬೇಕು ಎನ್ನುವ ಶಿಫಾರಸು ಇತ್ತು. ಆದರೆ, ನಮ್ಮ ಅಭಿಪ್ರಾಯ ಆಲಿಸದೆ ಹೊರಗಿನವರಿಗೆ ಟಿಕೆಟ್ ಕೊಟ್ಟರು. ನಮ್ಮಂತಹವರು ರಾಜಕಾರಣ ಮಾಡಲು ಸಾಧ್ಯವಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನನಗೆ ಕರೆ ಮಾಡಿದ್ದರು. ಆದರೆ, ಪಕ್ಷದ ವಿಚಾರದ ಬಗ್ಗೆ ಏನೂ ಮಾತನಾಡಿಲ್ಲ. ಅಲ್ಲದೇ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಆಕಸ್ಮಿಕವಾಗಿ ಸಿಕ್ಕರು. ಕೊನೆ ಚುನಾವಣೆ ಎಂದರು. ಶಾಸಕರಾಗುವುದು ಬಿಜೆಪಿಗೆ ಮಾತ್ರವಲ್ಲ ಎಲ್ಲರಿಗೂ ನೀವೇ ಶಾಸಕರು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದೆ, ಅವರು ಒಪ್ಪಿದರು. ಅವರಿಗೆ ಬೆಂಬಲ ಕೊಟ್ಟರೆ ತಪ್ಪೇನು ಎಂಬ ಭಾವನೆ ಇದೆ” ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ಗೆ ಬೆಂಬಲ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | 40% ಕಮಿಷನ್ ಹೊಡೆದ್ರಲಾ, ಅದೇ ಬಿಜೆಪಿ ಸಾಧನೆ: ಜಮೀರ್ ಅಹ್ಮದ್ ಖಾನ್
ಕೊಡಗಿನಲ್ಲಿ ಕಾಂಗ್ರೆಸ್ನ ಭದ್ರಕೋಟೆಗೆ ಮೊದಲು ಪೆಟ್ಟು ನೀಡಿದ್ದೇ ಬಿ ಎ ಜೀವಿಜಯ. 1983 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಂದಿನ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರನ್ನು ಮಣಿಸಿ ಗಮನ ಸೆಳೆದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಿ ವಿ ಜೀವಿಜಯ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಈ ಬಾರಿ ಡಾ. ಮಂತರ್ ಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಇದರಿಂದ ಬೇಸರಗೊಂಡಿರುವ ಜೀವಿಯ ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿದ್ದಾರೆ.