2014-15ರಲ್ಲಿ ರಾಜ್ಯ ಸರ್ಕಾರ ಬಾಗಲಕೋಟೆ ಜಿಲ್ಲೆಗೆ ಘೋಷಣೆ ಮಾಡಿರುವ ಸರ್ಕಾರಿ ವೈದ್ಯಕೀಯ (ಮೆಡಿಕಲ್) ಕಾಲೇಜು ಕಾರ್ಯಾರಂಭಕ್ಕೆ 2024-25ರ ಆಯ-ವ್ಯಯದಲ್ಲಿ ಸೂಕ್ತ ಅನುದಾನ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ.
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲೆಗೆ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆಯಿಂದ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿತು.
2014-15ರಲ್ಲಿ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಳುಗಡೆ ಜಿಲ್ಲೆ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ, ನಿಮ್ಮ ಸರ್ಕಾರದ ನಿರ್ಲಕ್ಷ್ಯದಿಂದ ನಿಮ್ಮ ಅವಧಿ ಮುಗಿದರೂ ಒಂದೇ ಒಂದು ರೂಪಾಯಿ ಅನುದಾನವನ್ನು ಕೂಡಾ ಒದಗಿಸಲಿಲ್ಲ.
2018ರ ವಿಧಾನಸಭೆ ಚುನಾವಣೆಯ ನಂತರ ಬಂದ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾಗಿದ್ದ, ಶಿವಾನಂದ ಪಾಟೀಲರಿಗೆ ಮತ್ತು ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ವತಿಯಿಂದ ಶೀಘ್ರ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಮಾಡಲಾಯಿತು.
ತದನಂತರ ಅಸ್ತಿತ್ವಕ್ಕೆ ಬಂದ ಭಾಜಪಾ ಸರ್ಕಾರದ ಅವಧಿಯಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಾಗಲಕೋಟೆ ಜಿಲ್ಲೆಯಾದ್ಯಂತ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ, ಪತ್ರ ಚಳುವಳಿ, ಪಾದರಕ್ಷೆ ಪಾಲಿಷ್ ಮಾಡಿ ದೇಣಿಗೆ ಸಂಗ್ರಹಸಿ ಸರ್ಕಾರಕ್ಕೆ ತಲುಪಿಸುವುದು, ಬಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಸರ್ಕಾರಕ್ಕೆ ತಲುಪಿಸುವಂತಹ ಅತ್ಯಂತ ಪರಿಣಾಮಕಾರಿ ಹೋರಾಟಗಳನ್ನು ಮಾಡಿದ್ದು ಸದರಿ ಅಭಿಯಾನ ಮತ್ತು ಹೋರಾಟಗಳಿಗೆ ಜಿಲ್ಲೆಯ ಜನತೆ ಭೂತಪೂರ್ವ ಬೆಂಬಲ ಕೂಡ ನೀಡಿದ್ದಾರೆ.
ಮುಖ್ಯಮಂತ್ರಿಗಳೇ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನಮ್ಮ ಸರ್ಕಾರ ಬಂದ ಕೂಡಲೇ ಮೊದಲ ಆಯ-ವ್ಯಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾನ ಒದಗಿಸಿ ಗುದ್ದಲಿ ಪೂಜೆಗೂ ಬರ್ತೀನಿ ಹಾಗೆ ಉದ್ಘಾಟನೆಗೂ ನಾನೇ ಬರ್ತೀನಿ ಅಂತ ಚುನಾವಣೆ ಪ್ರಚಾರ ಭಾಷಣದಲ್ಲಿ ನೀವೇ ಭರವ ನೀಡಿದ್ದಿರಿ. ಅತಿ ಹೆಚ್ಚು ಆಕಾಂಕ್ಷೆ ಮತ್ತು ನಿರೀಕ್ಷೆಗಳೊಂದಿಗೆ ಜಿಲ್ಲೆಯ ಮತದಾರರು ತಮ್ಮನ್ನು ಬೆಂಬಲಿಸಿದ್ದರು. ಆದರೆ, ರಾಜ್ಯ ಸರ್ಕಾರದ 2023-2024 ನೇ ಸಾಲಿನ ಆಯವಯ ಬಾಗಲಕೋಟೆ ಜನತೆ ನಿರೀಕ್ಷೆಗಳನ್ನು ಹಿಸಿಗೊಳಿಸಿದವು.
ಆದಕಾರಣ ರಾಜ್ಯ ಸರ್ಕಾರ 2024-25ರ ಆಯಾ ವೈಯದಲ್ಲಿ ಮುಳುಗಡೆಯಿಂದ ಭಾದಿತರಾಗಿರುವ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾಂಗಕ್ಕೆ ಅವಶ್ಯಕ ಅನುದಾನ ಒದಗಿಸಬೇಕೆಂದು, ಇಲ್ಲವಾದರೆ ಜನಪ್ರತಿನಿಧಿಗಳ ಮನೆಗಳ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ್ ಧರ್ಮಂತಿ, ಬಸವರಾಜ್ ಅಂಬಿಗೇರ್, ಗಣೇಶ್ ನಾಯಕ್, ಮುಂತಾದವರು ಇದ್ದರು.