ಸಾವಿರಾರು ಹೆಣ್ಣುಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು, ಅದರ ವಿಡಿಯೊ ಮಾಡಿಕೊಂಡ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆತ ಜರ್ಮನಿಗೆ ತೆರಳಿರುವ ಸುದ್ದಿ ಬಂದಿದೆ. ಇದು ಪೊಲೀಸ್ ಇಲಾಖೆಯ ಬಹುದೊಡ್ಡ ಲೋಪ. ಆತನಿಗೆ ವಿದೇಶಕ್ಕೆ ತೆರಳಲು ಸಹಕರಿಸಿದವರು ಸಂತ್ರಸ್ತರಿಗೆ ನ್ಯಾಯ ಕೊಡಿಸುವರೇ?
ಚುನಾವಣೆಯ ಈ ಹೊತ್ತಲ್ಲೇ ದೇಶವೇ ಬೆಚ್ಚಿ ಬೀಳುವಂತಹ ಪ್ರಕರಣವೊಂದು ಬಯಲಾಗಿದೆ. ಅದೂ ದೇಶದ ಆತ್ಮವೆಂದೇ ಕರೆಯುವ ಸಂಸತ್ತಿನ ಸದಸ್ಯ ಹಾಸನದ ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡ. ದೇಶ ಕಂಡ ಕರ್ನಾಟಕದ ಏಕೈಕ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ಸಾವಿರಾರು ಹೆಣ್ಣುಮಕ್ಕಳ ಜೊತೆ ಬಲವಂತದ ಸೆಕ್ಸ್ ಮಾಡಿ ತಾನೇ ವಿಡಿಯೊ ರೆಕಾರ್ಡ್ ಮಾಡಿಟ್ಟುಕೊಂಡಿರುವುದು ಹಾದಿ ಬೀದಿಯಲ್ಲಿ ಸಿಕ್ಕ ಪೆನ್ಡ್ರೈವ್ ಮೂಲಕ ಈಗ ಸಾರ್ವಜನಿಕಗೊಂಡಿದೆ. ಆತಂಕಕಾರಿ ವಿಚಾರ ಏನೆಂದರೆ, ಆ ವಿಡಿಯೊದಲ್ಲಿರುವ ಹೆಣ್ಣುಮಕ್ಕಳ ಮುಖವನ್ನು ಬ್ಲರ್ ಕೂಡಾ ಮಾಡದೇ ವಾಟ್ಸಪ್ಗಳಲ್ಲಿ ಹಂಚಿಕೆ ಮಾಡಲಾಗಿದೆ. ವಿಡಿಯೊದಲ್ಲಿ ಕೆಲಸದವರಿಂದ ಹಿಡಿದು ಪೊಲೀಸ್ ಸಿಬ್ಬಂದಿಯವರೆಗೆ ಅನೇಕ ಮಹಿಳೆಯರಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ 18ನೇ ಲೋಕಸಭೆಗೆ ಸ್ಪರ್ಧಿಸಿದ್ದ ಈತನ ವಿರುದ್ಧ ಕಳೆದ ವರ್ಷವೇ ಬಿಜೆಪಿಯ ದೇವರಾಜೇಗೌಡ ಎಂಬವರು ಸೆಕ್ಸ್ ವಿಡಿಯೊ ಇರುವ ಬಗ್ಗೆ ಹೇಳಿಕೆ ನೀಡಿದ್ದರು. ಅದು ಇರುವ ಬಗ್ಗೆ ಗೊತ್ತಿದ್ದೇ ಪ್ರಜ್ವಲ್ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು. ಆದರೆ, ಮತದಾನಕ್ಕೆ ನಾಲ್ಕು ದಿನ ಇರುವಾಗ ಹಾಸನದ ಬೀದಿ ಬೀದಿಯಲ್ಲಿ ಪೆನ್ಡ್ರೈವ್ ಬಿದ್ದು ಸಿಕ್ಕಿದೆ. ಅದರಲ್ಲಿ ಕ್ಷೇತ್ರದ ಸಂಸದನ ಕಾಮಕೇಳಿಯ ದೃಶ್ಯಗಳು ಇರುವುದು ಗೊತ್ತಾದ ನಂತರ ಮಹಿಳಾ ಆಯೋಗ ಗುರುವಾರ ಸರ್ಕಾರಕ್ಕೆ ಪತ್ರ ಬರೆದು ಎಸ್ಐಟಿ ಮೂಲಕ ತನಿಖೆ ಮಾಡಿಸುವಂತೆ ಒತ್ತಾಯಿಸಿತ್ತು. ಶುಕ್ರವಾರ ಮತದಾನ ಮುಗಿಯುತ್ತಿದ್ದಂತೆ ಶನಿವಾರ ಸಿದ್ದರಾಮಯ್ಯ ಅವರು ಎಸ್ಐಟಿ ರಚನೆ ಮಾಡುವಂತೆ ಆದೇಶ ನೀಡಿದ್ದಾರೆ. ಆ ಹೊತ್ತಿಗಾಗಲೇ ಆರೋಪಿ ಪ್ರಜ್ವಲ್ ದೇಶ ಬಿಟ್ಟಾಗಿದೆ. ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಲ್ಯಾಂಡ್ ಆಗಿದ್ದಾರೆ ಎಂದು ಪೊಲೀಸರೇ ಹೇಳಿದ್ದಾರೆ.
ಎಸ್ಐಟಿ ರಚನೆ ಮಾಡಿರುವ ಸರ್ಕಾರದ ಕ್ರಮವನ್ನು ಶ್ಲಾಘಿಸಿ ಎಚ್ ಡಿ ಕುಮಾರಸ್ವಾಮಿ ಅವರು “ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಪ್ರಜ್ವಲ್ ದೇಶ ಬಿಟ್ಟು ಹೋದರೆ ನಾನೇನು ಮಾಡಲಿ ಎಂದು ಕೇಳಿದ್ದಾರೆ. ಹಾಗಿದ್ದರೆ ಪಕ್ಷದ ಅಧ್ಯಕ್ಷರಾಗಿ ಕುಮಾರಸ್ವಾಮಿ ಅವರಿಗೆ ಈ ವಿಚಾರದಲ್ಲಿ ಎಳ್ಳಷ್ಟೂ ಜವಾಬ್ದಾರಿ ಬೇಡವೇ? ಕುಟುಂಬ, ಪಕ್ಷದ ಮಾನ ಹರಾಜು ಹಾಕೋದಲ್ಲದೇ ಸಾವಿರಾರು ಹೆಣ್ಣುಮಕ್ಕಳ ಮಾನ ಹರಾಜು ಹಾಕಿರುವ ಪಕ್ಷದ ಏಕೈಕ ಸಂಸದನಿಗೆ ತನಿಖೆಗೆ ಸಹಕರಿಸುವಂತೆ, ದೇಶ ಬಿಟ್ಟು ಹೋಗದಂತೆ ತಡೆಯಬೇಕಿತ್ತು ಅಲ್ವಾ?
ಏಪ್ರಿಲ್ 22ರಂದು ವಿಡಿಯೊಗಳಿರುವ ಪೆನ್ಡ್ರೈವ್ ಬಹಿರಂಗಗೊಂಡಿದೆ. 26ರಂದು ಮತದಾನ ನಡೆದಿದೆ. 27ರಂದು ಆ ವ್ಯಕ್ತಿ ದೇಶ ಬಿಟ್ಟು ಹೋದ ನಂತರ, 28ರಂದು ಕುಮಾರಸ್ವಾಮಿ, ಜಿ ಟಿ ದೇವೇಗೌಡ ಹೇಳಿಕೆ ನೀಡುತ್ತಾರೆ. ಅಂದರೆ ಆತನನ್ನು ವಿದೇಶಕ್ಕೆ ಕಳುಹಿಸಿ ನಿರಾಳರಾದ ನಂತರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆರೋಪಿಯನ್ನು ವಿದೇಶಕ್ಕೆ ಕಳುಹಿಸಿರುವುದರಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರ ಪಾತ್ರ ಇಲ್ಲವೇ ಎಂಬ ಪ್ರಶ್ನೆ ಉಂಟಾಗಿದೆ.
ಮೋದಿ ಅಮಿತ್ ಶಾ ಮಾತನಾಡಲಿ
ಆರೋಪಿಗೆ ಟಿಕೆಟ್ ಕೊಟ್ಟ ಜೆಡಿಎಸ್, ಪ್ರಚಾರ ನಡೆಸಿದ ರಾಜ್ಯದ ಬಿಜೆಪಿ ನಾಯಕರು, ಪ್ರಧಾನಿ ಮೋದಿ, ಅಮಿತ್ ಶಾ ಇವರೆಲ್ಲರೂ ಉತ್ತರದಾಯಿಗಳು. ಯಾಕೆಂದರೆ ಮೈತ್ರಿ ಘೋಷಣೆಯಾದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ದೇವರಾಜೇಗೌಡ ಪತ್ರ ಬರೆದು ಪ್ರಜ್ವಲ್ ಮೈತ್ರಿ ಅಭ್ಯರ್ಥಿಯಾದರೆ ಪಕ್ಷಕ್ಕೆ ಮುಜುಗರ ಆಗುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿದ್ದರು. ಈ ವಿಷಯ ಬಿಜೆಪಿ ಹೈಕಮಾಂಡ್ಗೂ ತಲುಪಿತ್ತು ಎನ್ನಲಾಗುತ್ತಿದೆ. ಹಾಸನ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬದಲಾಗಬೇಕು ಎಂಬ ಕೂಗು ಸ್ಥಳೀಯ ಮಟ್ಟದಲ್ಲಿ ಕೇಳಿ ಬಂದಿತ್ತು. ಪ್ರಜ್ವಲ್ ಬದಲು ಬೇರೆ ಯಾರಿಗೆ ಟಿಕೆಟ್ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕೋರ್ ಕಮಿಟ್ ಸಭೆ ನಡೆಸುತ್ತಿದ್ದರೆ ಅತ್ತ ಎಚ್ ಡಿ ದೇವೇಗೌಡರು ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದರು. ಅಲ್ಲಿಗೆ ಅಭ್ಯರ್ಥಿ ಯಾರು ಎಂಬ ಚರ್ಚೆಗೆ ತೆರೆ ಬಿದ್ದಿತ್ತು. ಈಗ ಮೈತ್ರಿ ಅಭ್ಯರ್ಥಿಯ ಮೇಲೆ ಕೇಳಿ ಬಂದಿರುವ ಆರೋಪ ಅಂತಿಂತದ್ದಲ್ಲ. ಅದು ಇಡೀ ದೇಶ ಮಾತ್ರವಲ್ಲ ವಿಶ್ವದಲ್ಲಿಯೇ ಅಪರೂಪದ ಪ್ರಕರಣ.
ದೇಶ ಬಿಡದಂತೆ ತಡೆಯದಿರುವುದು ಬಹು ದೊಡ್ಡ ಲೋಪ: ಬಿ ಕೆ ಶಿವರಾಮ್
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ನಿವೃತ್ತ ಐಪಿಎಸ್ ಅಧಿಕಾರಿ ಬಿ ಕೆ ಶಿವರಾಮ್, “ಆರೋಪಿಯನ್ನು ದೇಶ ಬಿಡದಂತೆ ತಡೆಯುವ ಕೆಲಸ ಆಗಬೇಕಿತ್ತು. ಇಂಟಲಿಜೆನ್ಸ್ ನವರು ಸ್ವಲ್ಪ ಅಲರ್ಟ್ ಆಗಬೇಕಿತ್ತು. ಸರ್ಕಾರ ಎಸ್ಐಟಿ ರಚನೆಗ ಮಾಡಲು ಚುನಾವಣೆ ಮುಗಿಯುವವರೆಗೆ ಕಾಯಬಾರದಿತ್ತು. ಇದು ಈ ಪ್ರಕರಣದ ದೊಡ್ಡ ಲೋಪ” ಎಂದು ಹೇಳಿದರು.
“ಅತ್ಯಂತ ಹೆಚ್ಚು ನೀಲಿ ಚಿತ್ರಗಳ ಕ್ಯಾಸೆಟ್ ಸೀಝ್ ಮಾಡಿದ ದಾಖಲೆ ನನ್ನ ಹೆಸರಲ್ಲಿದೆ. ಆದರೆ ಈ ವಿಡಿಯೊಗಳು ಅವುಗಳಿಗಿಂತ ಕೆಟ್ಟದಾಗಿವೆ. ಆತ ಕೆಲಸದ ಮಹಿಳೆ, ಅಜ್ಜಿ, ಯುವತಿ ಯಾರನ್ನೂ ಬಿಟ್ಟಿಲ್ಲ. ಹೀಗೆ ಸಾವಿರಾರು ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವ ಪ್ರಕರಣಗಳು ಜಗತ್ತಿನಲ್ಲೇ ವಿರಳ. ಇದು ಭಾರತದ ಮಟ್ಟಿಗೆ ಅತಿದೊಡ್ಡ ಸೆಕ್ಸ್ ಸ್ಕ್ಯಾಂಡಲ್” ಎಂದು ಹೇಳಿದರು.
***
ವಿದೇಶಕ್ಕೆ ಹೋಗಲು ಸಹಕರಿಸಿದವರು ಯಾರು?
ಈಗ ಜನರಲ್ಲಿ ಪ್ರಶ್ನೆ ಉದ್ಭವಿಸುವುದು ಸಹಜ. ಇಷ್ಟು ದೊಡ್ಡ ಆರೋಪ ಬಂದಿರುವ ಪ್ರಭಾವಿ ವ್ಯಕ್ತಿ ದೇಶ ಬಿಡುವ ಸಂಭವವನ್ನು ಯಾರು ಬೇಕಾದರೂ ಊಹಿಸಬಲ್ಲರು. ಆದರೆ ಈತನ್ನು ಅಷ್ಟು ಸುಲಭವಾಗಿ ವಿದೇಶಕ್ಕೆ ತೆರಳಲು ಸಹಕರಿಸಿದವರು ಯಾರು? ಮೈತ್ರಿ ಮಾಡಿಕೊಂಡ ಕಾರಣ ಕಳಂಕ ತಮಗೂ ಅಂಟುತ್ತದೆ, ಬಂಧನವಾದರೆ ಎರಡನೇ ಹಂತದ ಮತದಾನಕ್ಕೆ ಪರಿಣಾಮ ಬೀರಬಹುದು, ಎರಡೂ ಪಕ್ಷದ ನಾಯಕರು ಪ್ರಚಾರ ನಡೆಸುವುದಕ್ಕೆ ತೊಂದರೆಯಾಗಬಹುದು ಎಂಬ ಮುಂದಾಲೋಚನೆಯಿಂದ ಎರಡೂ ಪಕ್ಷಗಳು ಸೇರಿ ಆರೋಪಿಯನ್ನು ದೇಶ ಬಿಡುವಂತೆ ಕಾರ್ಯತಂತ್ರ ರೂಪಿಸಿವೆ ಎಂಬ ಅನುಮಾನ ಕಾಡುತ್ತಿದೆ.
ಸಂತ್ರಸ್ತ ಇಬ್ಬರು ಮಹಿಳೆಯರು ಮಹಿಳಾ ಆಯೋಗದ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಲ್ಲಿ ಅಪ್ಪ ಎಚ್ ಡಿ ರೇವಣ್ಣ ಮತ್ತು ಮಗ ಪ್ರಜ್ವಲ್ ಇಬ್ಬರೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈಗ ರೇವಣ್ಣ ಅವರ ಬಂಧನವಾಗಬೇಕು. ಮಗ ದೇಶ ಬಿಟ್ಟಂತೆ ಅಪ್ಪನೂ ದೇಶ ಬಿಟ್ಟರೆ ಪ್ರಕರಣ ತನಿಖೆ ವಿಳಂಬವಾಗಿ ಹಳ್ಳ ಹಿಡಿಯುವ ಸಾಧ್ಯತೆಯಿದೆ.
ಹಿಂದೂ ಹೆಣ್ಣುಮಕ್ಕಳ ರಕ್ಷಣೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ, ಹಿಂದುತ್ವದ ಕಾರ್ಯಕರ್ತರು ಹಾಸನದ ಪ್ರಕರಣದಲ್ಲಿ ಎರಡೂವರೆ ಸಾವಿರ ಹಿಂದೂ ಹೆಣ್ಣುಮಕ್ಕಳ ಮಾನ ಹರಾಜಾದರೂ ಮೌನವಾಗಿರುವುದು ಅಚ್ಚರಿ ಮೂಡಿಸಿದೆ. ಹುಬ್ಬಳ್ಳಿಯ ನೇಹಾ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದರೂ ಕೊಲೆ ನಡೆದ ತಕ್ಷಣ ಆಕೆಯ ಮನೆಗೆ ಬಿಜೆಪಿ ನಾಯಕರು ಮೆರವಣಿಗೆ ಹೊರಟಿದ್ದೃು. ಅವರಷ್ಟೇ ಅಲ್ಲ, ಬಿಜೆಪಿಯ ನಾಯಕರಾದ ಅರವಿಂದ ಬೆಲ್ಲದ್, ಪ್ರಲ್ಹಾದ್ ಜೋಶಿ, ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಮಾಳವಿಕಾ ಅವಿನಾಶ್, ಚಿತ್ರ ನಟಿ ಹರ್ಷಿಕಾ ಪೂಣಚ್ಚ, ಪ್ರಥಮ್ ಹೀಗೆ ಹಲವರು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಆರೋಪಿಯನ್ನು ಕೊಲೆ ಮಾಡಿದ ಒಂದೇ ಗಂಟೆಯಲ್ಲಿ ಬಂಧಿಸಿದ್ದರೂ ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆ ಎಂಬ ಹುಸಿ ಆರೋಪ ಮಾಡಿದ್ದರು. ಕೊಲೆ, ಅತ್ಯಾಚಾರದ ಆರೋಪಿ ಮುಸ್ಲಿಂ ಆಗಿದ್ದರೆ ಬಿಜೆಪಿಯ ನಾಯಕರಿಗೆ ಸಮರ್ಥಕರಿಗೆ ಭಾರೀ ಖುಷಿ ಕೊಡುತ್ತದೆ. ಆದರೆ, ತಮ್ಮದೇ ಮೈತ್ರಿ ಪಕ್ಷದ ಸಂಸದನೊಬ್ಬನಿಂದ ಎರಡೂವರೆ ಸಾವಿರ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ನಡೆದಿದ್ದರೂ, ಅದರ ವಿಡಿಯೊ ಮಾಡಿಟ್ಟುಕೊಂಡಿದ್ದ ವಿಕೃತಕಾಮಿಯ ವಿರುದ್ಧ ಯಾರೊಬ್ಬರೂ ಗುಟುರು ಹಾಕುತ್ತಿಲ್ಲ. ಮೈತ್ರಿ ಪಕ್ಷಗಳ ಸ್ತ್ರೀವಿರೋಧಿ ಧೋರಣೆ ಬಹಿರಂಗಗೊಂಡಿದೆ.
ಈಗ ಎಸ್ಐಟಿ ತಂಡ ಹೊಳೆನರಸೀಪುರಕ್ಕೆ ತೆರಳಿ ಸ್ಥಳ ಮಹಜರು ನಡೆಸಲು ಮುಂದಾಗಿದೆ. ಆದರೆ ಮುಖ್ಯ ಆರೋಪಿಯೇ ದೇಶ ಬಿಟ್ಟಾಗಿದೆ. ಈಗ ಆ ಸಾವಿರಾರು ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಹಿಸಿಕೊಂಡು ರಾಜ್ಯದ ಬೇಟಿಯರನ್ನು ಬಚಾವ್ ಮಾಡಬೇಕಿದೆ. ಆರೋಪಿಯನ್ನು ದೇಶ ಬಿಡಲು ಸಹಕರಿಸಿದವರು ಯಾರು? ಸರ್ಕಾರದ ಪ್ರಭಾವಿಗಳ ಪಾತ್ರವೇನಾದರೂ ಇದೆಯಾ ಎಂಬ ಅನುಮಾನವೂ ಕಾಡುತ್ತಿದೆ.