ರೈತರ ಬೇಡಿಕೆಗೆ ತಕ್ಕಂತೆ ಎಲ್ಲ ಬಗೆಯ ಬೀಜಗಳು ದೊರೆಯುವಂತೆ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು. ದಾಸ್ತಾನು ಖಾಲಿಯಾಗುವ ಸಂಭವ ಇದ್ದಲ್ಲಿ ಎರಡು ದಿನಗಳ ಮುಂಚಿತವಾಗಿ ಮೇಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಬೇಕು ಎಂದು ಶಾಸಕ ಅಶೋಕ ಪಟ್ಟಣ ತಿಳಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯಯುತವಾಗಿ ವರ್ತಿಸಬೇಕು. ಇಲಾಖೆಯ ಸವಲತ್ತುಗಳ ಮಾಹಿತಿ ನೀಡಬೇಕು. ಒಂದು ವೇಳೆ ರೈತರಿಂದ ದೂರುಗಳು ಕೇಳಿ ಬಂದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಅಶೋಕ ಪಟ್ಟಣ ಎಚ್ಚರಿಕೆ ನೀಡಿದ್ದಾರೆ
“ರೈತರಿಂದ ಬರುವ ಸಲಹೆ ಸೂಚನೆಗಳನ್ನು ಪಡೆದು ನನಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು” ಎಂದು ತಿಳಿಸಿದರು.
“ಬೀಜಗಳ ಗುಣಮಟ್ಟದ ಬಗ್ಗೆ ಖಾತರಿ ಮಾಡಿಕೊಂಡಿರಬೇಕು. ಒಂದು ವೇಳೆ ಕಳಪೆ ಬೀಜ ವಿತರಣೆ ಮಾಡಿ ರೈತರ ಜಮೀನಿಲ್ಲಿ ಬೀಜಗಳು ಸರಿಯಾಗಿ ನಾಟದೇ ಹೋದಲ್ಲಿ ಅದನ್ನು ಪರೀಕ್ಷಿಸಲು ವಿಫಲರಾಗುವ ಅಧಿಕಾರಿಗಳೇ ರೈತರ ಸಂಪೂರ್ಣ ನಷ್ಟವನ್ನು ತುಂಬಿಕೊಡಬೇಕಾಗುತ್ತದೆ” ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್ ಎಫ್ ಬೆಳವಟಗಿ ಮಾತನಾಡಿ, “ಕೆಲವು ಪ್ರದೇಶಗಳಲ್ಲಿ ಮುಂಗಾರು ಮಳೆಯಾಗಿದೆ. ವಾಡಿಕೆಯ ಮಳೆಯಾಗಿದೆ. 19 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸೇರಿ 93 ಅಧಿಕೃತ, ಮಾರಾಟಗಾರರಿಂದ ರೈತರಿಗೆ ಎಲ್ಲಡೆ ಬೀಜ ರಸಗೊಬ್ಬರ ದೊರೆಯುವಂತೆ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಹೆಳಿದ್ಧಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ರೈತ ಸಂಘ ಆಗ್ರಹ
ರೈತ ಮುಖಂಡ ರಾಮನಗೌಡ ಪಾಟೀಲ ಮಾತನಾಡಿ, “ರೈತರ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಬದ್ಧರಾಗಿದ್ದಾರೆ. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಅಥವಾ ರೈತರು ಶಾಸಕರ ಗಮನಕ್ಕೆ ತಂದಲ್ಲಿ ಸರ್ಕಾರದ ಮಟ್ಟದಲ್ಲಿ ಅದನ್ನು ಪರಿಹರಿಸುತ್ತಾರೆಂಬ ವಿಶ್ವಾಸವಿದೆ” ಎಂದರು.
ಚಂದರೆಗ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಅಡಗಿದನಿ, ಕೃಷಿ ಅಧಿಕಾರಿ ಎಂ ವೈ ಚೆನ್ನಿ, ರಮೇಶ ದಾಸರ, ಸೋಮು ಹಲಗಲಿಮಠ, ರೈತ ಮುಖಂಡರು ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.