ಬಳ್ಳಾರಿ ನಗರದ ಶ್ರೀರಾಂಪುರ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಗೆ ಕಾಂಪೌಂಡ್ಗೆ ಗೇಟ್ ಇಲ್ಲದೆ, ಸಂಜೆಯ ನಂತರ ಶಾಲೆಯ ಮೈದಾನವು ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ. ಶಾಲೆಯ ಆವರಣದಲ್ಲಿ ಸ್ವಚ್ಛತೆ ಇಲ್ಲದೆ, ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ ಎಂಬ ಆರೋಪ ಕೇಳಿಬಂದಿದೆ.
ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರುಜ 500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ತೆಲುಗು ಮಾಧ್ಯಮದಲ್ಲಿ ತರಗತಿಗಳಿವೆ. ಆದರೆ, ಶಾಲೆಯ ಆವರಣ ಸ್ವಚ್ಛವಾಗಿಲ್ಲದೆ ಇರುವುದರಿಂದ ಮುಂದಿನ ದಿನಗಳಲ್ಲಿ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿದೆ.
ಸಂಜೆ ಶಾಲೆ ಮುಗಿದ ನಂತರ ಶಾಲೆಯ ಆವರಣದಲ್ಲಿ ಯುವಕರು ಮೋಜು-ಮಸ್ತಿ ಮಾಡುತ್ತಿದ್ದಾರೆ. ಅಲ್ಲದೆ, ಅನೈತಿಕ ಚಟುವಟಕೆಗಳಳೂ ನಡೆಯುತ್ತಿವೆ ಎಂದ ಆರೋಪಗಳಿವೆ.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕೆ ಹೆಚ್ಚಿನ ಜನರು ಬರುವುದರಿಂದ ದಟ್ಟಣೆಯಾಗುತ್ತದೆ. ಚುನಾವಣೆ ಮುಗಿದ ನಂತರ ಕಾಂಪೌಂಡ್ ಮತ್ತು ಗೇಟ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ, ಇದ್ದ ಕಾಂಪೌಂಡ್ಅನ್ನು ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಯ ಆಯುಕ್ತರು, ನಿರ್ಮಿತಿ ಕೇಂದ್ರದ ಮುಖ್ಯ ಇಂಜಿನಿಯರ್ ಅಧಿಕಾರಿಗಳು ಹೊಡೆದು ಹಾಕಿದ್ದರು. ಆದರೆ, ಈಗ ಕಾಂಪೌಂಡ್ ನಿರ್ಮಾಣ ಮಾಡಲಾಗಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯ ವಿರುಪಾಕ್ಷಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಯ ಕಾಂಪೌಂಡ್ ಹೊಡೆದಿರುವುದರಿಂದ ಸಂಜೆಯ ವೇಳೆ ಹಂದಿ, ದನ ಕರುಗಳ ಓಡಾಟ ಹೆಚ್ಚಾಗಿದೆ. ಅವುಗಳು ಮಲ ಮೂತ್ರ ವಿಸರ್ಜನೆ ಮಾಡುವ ಪರಿಣಾಮ ಸ್ವಚ್ಛತೆ ಇಲ್ಲವಾಗಿದೆ. ಇಂತಹ ವಾತಾವರಣದಲ್ಲಿ ಮಕ್ಕಳಿಗೆ ಪಾಠ ಮಾಡೋದು ಕಷ್ಟವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.