ಬಳ್ಳಾರಿ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ನಗರದ 425 ಮರಗಳನ್ನು ಕಟಾವು ಮಾಡುವ ಕ್ರಮವನ್ನು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಮುಖಂಡರು ವಿರೋಧಿಸಿದ್ದಾರೆ. ಕಂಪ್ಲಿ ಶಿರಸ್ತೇದಾರ್ ಪಂಪಾಪತಿ ಮೂಲಕ ಬಳ್ಳಾರಿ ವಿಭಾಗದ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಸೈಯ್ಯದ್ ವಾರೀಶ್, “ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿ ಬಿಸಿಲನಾಡು ಎಂದು ಖ್ಯಾತಿ ಪಡೆದಿದೆ. ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿನ ಏರುಪೇರಿನಿಂದಾಗಿ ಬಿಸಿಲಿನ ತಾಪಮಾನವು ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಗರದ ಮರಗಳನ್ನು ಕಟಾವು ಮಾಡುತ್ತಿರುವುದು ಶೋಚನೀಯ” ಎಂದರು.
“ಬಳ್ಳಾರಿಯ ಅರಣ್ಯ ಇಲಾಖೆಯ ಅಧಿಕಾರಿಗಳ ಶ್ರಮದಿಂದ ಸಮಾರು 425 ಜಾತಿಯ ಮರಗಳನ್ನು ಬೆಳೆಸಿ ಅವುಗಳನ್ನು ಜೋಪನ ಮಾಡಿ, ಈಗ ಅಭಿವೃದ್ಧಿ ಹೆಸರಿನಲ್ಲಿ ಎಲ್ಲ ಮರಗಳನ್ನು ಕಟಾವು ಮಾಡುತ್ತಿರುವುದರಿಂದ ಇಲಾಖೆಯ ಶ್ರಮ ವ್ಯರ್ಥವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಪ್ರಪಂಚ ಮುಂದುವರೆದಂತೆ ಹೊಸ ಹೊಸ ಆವಿಷ್ಕಾರಗಳೂ ಹೊರಹೊಮ್ಮುತ್ತಿವೆ. ಅವುಗಳನ್ನೂ ಸಹ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ. ಈಗೀನ ಹೊಸ ಯುಗದಲ್ಲಿ ಎಲ್ಲವೂ ಸಾಧ್ಯ. ಮರಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸುವ ಕ್ರಮವೂ ಈಗ ಸಾಧ್ಯವಾಗಿದೆ” ಎಂದು ತಿಳಿಸಿದರು.
“ಬಿಎಂಆರ್ಸಿಎಲ್ ಅಭಿವೃದ್ಧಿ ಕಾಮಗಾರಿಗಾಗಿ 2017-18ರಲ್ಲಿ ಸಮಾರು 300 ಮರಗಳನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಾಯದೊಂದಿಗೆ ಬೇರೆಡೆ ಸ್ಥಳಾಂತರಿಸಿ, ಮರುಕಸಿ ಮಾಡಲಾಯಿತು. ಅವುಗಳಲ್ಲಿ ಶೇ.75 ರಿಂದ 85ರಷ್ಟು ಮರಗಳು ಮರು ಜೀವ ಪಡೆದುಕೊಂಡು ಹೆಮ್ಮರಗಳಾಗಿ ಬೆಳೆಯುತ್ತಿವೆ” ಎಂದರು.
“ಬಳ್ಳಾರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಯ ವಿವಿಧ ಜಾತಿಯ ಸಮಾರು 425 ಮರಗಳನ್ನು ತೆರವುಗೊಳಿಸಲು ಕೋರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಲ್ಲಿಸಿರುವ ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭಾರೀ ಮಳೆ; ನೆಲಕ್ಕುರುಳಿದ 400ಕ್ಕೂ ಅಧಿಕ ವಿದ್ಯುತ್ ಕಂಬ, ಮರಗಳು
“ಬಳ್ಳಾರಿ ಅರಣ್ಯಾಧಿಕಾರಿಗಳು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಾಯದೊಂದಿಗೆ ಒಂದೂ ಮರವನ್ನು ಕಟಾವು ಮಾಡದೆ ಎಲ್ಲ ಮರಗಳನ್ನು ಬೇರೆಡೆಗೆ ಸಾಗಿಸುವ ಮೂಲಕ ಅವುಗಳ ರಕ್ಷಣೆ ಕಾರ್ಯ ಕೈಗೊಳ್ಳಬೇಕು” ಎಂದು ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಪದಾಧಿಕಾರಿ ಸಂಘಟನಾ ಕಾರ್ಯದರ್ಶಿ ಹೆಚ್. ವೆಂಕಟೇಶ್, ಖಜಾಂಚಿ ರೋಶನ್, ಬಿ. ಹೆಚ್.ಎಂ. ಗುರು ಶಾಂತ ಶಾಸ್ತ್ರಿ, ಬಿ ಹೆಚ್ ಎಂ ಯಶ್ವಂತ್ ಸೇರಿದಂತೆ ಇತರರು ಇದ್ದರು.