ಬೆಂಗಳೂರು ನಗರದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ 400ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಕಬ್ಬನ್ ಪಾರ್ಕ್ ಒಂದರಲ್ಲಿಯೇ 50ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ನಗರಾದ್ಯಂತ ಸುಮಾರು 1,600ಕ್ಕೂ ಅಧಿಕ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿವೆ. ಈ ಸಂಬಂಧ ಬಿಬಿಎಂಪಿಗೆ 600ಕ್ಕೂ ಅಧಿಕ ದೂರುಗಳು ಬಂದಿವೆ.
ನಾಗರಿಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗಾಗಲೇ 200ಕ್ಕೂ ಹೆಚ್ಚು ಕಡೆ ಮರಗಳ ತೆರವು ಕಾರ್ಯಾಚರಣೆ ನಡೆಸಿದೆ. 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡು ದಿನದ ಮಳೆಗೆ ತತ್ತರಿಸುತ್ತಿರುವ ತ್ಯಾಜ್ಯ ವಿಲೇವಾರಿಗೆ ಪೌರಕಾರ್ಮಿಕರು ಪರದಾಟ ನಡೆಸುತ್ತಿದ್ದು, ಹಲವು ಪ್ರಮುಖ ರಸ್ತೆಗಳು ತಿಪ್ಪೆಗುಂಡಿಗಳಂತಾಗಿವೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ವ್ಯಾಪ್ತಿಯಲ್ಲಿ ಬರೋಬ್ಬರಿ 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಅಪಾರ ನಷ್ಟವಾಗಿದೆ. ಮರಗಳು, ಮರದ ಕೊಂಬೆಗಳಂತೆ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ, ನಗರದ ವ್ಯಾಪ್ತಿಯಲ್ಲೇ ಸುಮಾರು 140ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ. ಸುಮಾರು 20 ಟ್ರಾನ್ಸ್ ಫಾರ್ಮಾರ್ಗಳು ಸುಟ್ಟು ಕರಕಲಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಯಲಹಂಕ: ಭಾನುವಾರ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ರಾಜಾನುಕುಂಟೆಯ ಅದ್ದೆ ವಿಶ್ವನಾಥಪುರ ಗ್ರಾಮದಲ್ಲಿ ಕೊಯ್ಲಿಗೆ ಬಂದಿದ್ದ ಮಾವಿನ ಕಾಯಿಗಳು ನೆಲಕಚ್ಚಿವೆ.
ಹೆಸರಘಟ್ಟ ಹೋಬಳಿಯ ಅದ್ದೆ ವಿಶ್ವನಾಥಪುರ ಗ್ರಾಮದ ರೈತರುಗಳಾದ ಸಂಪಂಗಿರಾಮಯ್ಯ ಮತ್ತು ರಾಮಯ್ಯ ಅವರ 9 ಎಕರೆ ತೋಟದಲ್ಲಿ ಬೆಳೆದಿದ್ದ ಮಾವಿನ ಬೆಳೆಗೆ ಹಾನಿಯಾಗಿ ಕಾಯಿಗಳು ಉದುರಿದ್ದು, ಅಪಾರ ನಷ್ಟವಾಗಿದೆ. ಅರಕೆರೆ ಗ್ರಾಮದ ಮಂಜುನಾಥ್ ಎಂಬುವರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆಗೂ ಹಾನಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಾಳಿ-ಮಳೆಗೆ ನೆಲಕಚ್ಚಿದ 546 ವಿದ್ಯುತ್ ಕಂಬಗಳು
ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಸಂದ್ರ ಗ್ರಾಮದಲ್ಲಿ ಗೋಪಾಲ್ ಎಂಬುವರಿಗೆ ಸೇರಿದ ಪಾಲಿಹೌಸ್ ಬಿರುಗಾಳಿಗೆ ಹಾರಿದ್ದು, ಹನಿಯೂರಿನ ಕೆಲ ಮನೆಗಳ ಶೀಟ್ಗಳೂ ಹಾರಿವೆ.
ತಾಲೂಕು ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಣ್ಣ ಸೋಮವಾರ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
“ಕಳೆದ ಮೂರ್ನಾಲ್ಕು ವರ್ಷಗಳಿಂದ ಫಸಲ್ ಬಿಮಾ ಯೋಜನೆಯಡಿ, ಬೆಳೆವಿಮೆ ಪಾವತಿ ಮಾಡುತ್ತಿದ್ದೆ. ಆದರೆ, 2-3 ವರ್ಷಗಳಿಂದ ಬೆಳೆ ಹಾನಿಯಾದರೂ ಪರಿಹಾರ ಬಂದಿರಲಿಲ್ಲ. ಹಾಗಾಗಿ ಈ ಬಾರಿ ವಿಮೆ ಹಣ ಪಾವತಿಸಿರಲಿಲ್ಲ” ಎಂದು ರೈತ ಸಂಪಂಗಿರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.