ಸರ್ಕಾರಿ ಶಾಲೆಗಳ ನಿರ್ವಹಣೆಯನ್ನು, ಸರ್ಕಾರ ಕಾರ್ಪೊರೇಟ್ ದಾನಿಗಳಿಗೆ ನೀಡಿರುವುದು ಖಂಡನೀಯ ಎಂದು ಎಐಡಿಎಸ್ಒ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.
“ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಖಾಸಗಿ ಕಂಪನಿಗಳು ನೀಡುವ ಸಿಎಸ್ಆರ್ ಅನುದಾನ ಹೆಚ್ಚಿಸಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಉನ್ನತೀಕರಿಸಿ ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸಮಿತಿ ರಚಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವವುದು ಖಂಡನೀಯ” ಎಂದರು.
“ಕಾರ್ಪೊರೇಟ್ ದಾನಿಗಳ ಮೇಲೆ ಅವಲಂಬಿತರಾಗಿ ಸರ್ಕಾರಿ ಶಾಲೆಗಳಿಗೆ ಹಣಕಾಸು ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರದ ಈ ಧೋರಣೆ ಒಳ್ಳೆಯ ಬೆಳವಣಿಗೆಯಂತೆ ಕಾಣುತ್ತಿಲ್ಲ” ಎಂದು ಆರೋಪಿಸಿದರು.
ದೇಶದ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಸರ್ಕಾರದ ಮೂಲ ಜವಾಬ್ದಾರಿ. ಶಿಕ್ಷಣಕ್ಕೆ ಹಣಕಾಸು ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಕಳೆದ ತಿಂಗಳು ಮಳೆಯ ಪ್ರಭಾವಕ್ಕೆ ಮತ್ತಷ್ಟು ದಯನೀಯ ಸ್ಥಿತಿ ತಲುಪಿದೆ. ಶಾಲೆಗಳ ದುರಸ್ತಿಗೆ ಹಣ ಬೇಕು. ಆದರೆ ಕಾರ್ಪೋರೇಟ್ ಕಂಪನಿಗಳು ಕೊಡುವ ದಾನದ ಹಣವಲ್ಲ. ಈ ರಾಜ್ಯದ ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದ ಸರ್ಕಾರಿ ಶಾಲೆಗಳ ನಿರ್ವಹಣೆ ನಡೆಯಲಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ 48 ಕಡೆ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ: ಕಂತೆ ಕಂತೆ ನೋಟು, ಅಕ್ರಮ ಆಸ್ತಿ ವಶಕ್ಕೆ
“ಕಾರ್ಪೋರೇಟ್ ಕಂಪನಿಗಳು ಹಣ ನೀಡಿ ಸರ್ಕಾರಿ ಶಾಲೆಗಳ ಮೇಲೆ ಹಕ್ಕು ಸಾಧಿಸುವ ಕನಿಷ್ಠ ಅವಕಾಶವನ್ನೂ ರಾಜ್ಯ ಸರ್ಕಾರ ನೀಡಬಾರದು. ಸರ್ಕಾರಿ ಸಂಸ್ಥೆಗಳಿಗೆ ನೀಡುವ ಹಣಕಾಸನ್ನು ಕ್ರಮೇಣವಾಗಿ ಕಡಿತಗೊಳಿಸಿ ಸ್ವಯಂ-ಹಣಕಾಸು ಸಂಸ್ಥೆಗಳನ್ನಾಗಿ ಮಾಡುವುದು ಎನ್ಇಪಿ-2020ರ ಮುಖ್ಯ ಶಿಫಾರಸುಗಳಲ್ಲೊಂದು. ಎನ್ಇಪಿ 2020ನ್ನು ರಾಜ್ಯದಲ್ಲಿ ತಿರಸ್ಕರಿಸುತ್ತಿರುವ ಸರ್ಕಾರ ಈ ನೀತಿಯನ್ನೂ ಕೈಬಿಡಬೇಕು” ಎಂದು ಎಐಡಿಎಸ್ಒ ರಾಜ್ಯ ಸಮಿತಿ ಪರವಾಗಿ ಆಗ್ರಹಿಸಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಪ್ರಕಟಣೆಗೆ ತಿಳಿಸಿದ್ದಾರೆ.