ಬೀದರ್ ಜಿಲ್ಲೆಯ ಭಾಲ್ಕಿ ಗಡಿ ಭಾಗದಲ್ಲಿ 109 ವರ್ಷಗಳ ಕಾಲ ಗಂಧದಂತೆ ಬದುಕು ಸವೆಸಿದ ಡಾ. ಚನ್ನಬಸವ ಪಟ್ಟದ್ದೇವರು ಬಸವತತ್ವವನ್ನು ಕೇವಲ ಉಪದೇಶ ಮಾಡಲಿಲ್ಲ, ಬದಲಾಗಿ ನಿಜ ಜೀವನದಲ್ಲಿ ಆಚರಣೆಗೆ ತಂದು ನುಡಿದಂತೆ ನಡೆದಿದ್ದರು ಎಂದು ಶಾಸಕ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ, ವಚನ ಜಾತ್ರೆ-2023 ಮತ್ತು ಡಾ. ಚನ್ನಬಸವ ಪಟ್ಟದ್ದೇವರ 24ನೇ ಸ್ಮರಣೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಚನ್ನಬಸವ ಪಟ್ಟದ್ದೇವರು ಮಾತಿನ ಸ್ವಾಮೀಜಿ ಆಗಿರಲಿಲ್ಲ. ಬರೀ ಭಾಷಣ ಮಾಡಲಿಲ್ಲ. ಅವರು ಸತ್ಯಶುದ್ಧ ಕಾಯಕದ ಸ್ವಾಮೀಜಿ ಆಗಿದ್ದರು. ಮಾತಿನ ಸದ್ದು ದೂರ ಕೇಳಿಸುತ್ತದೆ. ಆದರೆ, ಕೆಲಸದ ಸದ್ದು ಇನ್ನೂ ದೂರ ಕೇಳಿಸುತ್ತದೆ. ಮಾತು ಅಳಿಸಿ ಹೋಗಬಹುದು, ಆದರೆ ಮಾಡಿದ ಕೆಲಸ ಅಚ್ಚಳಿಯದಂತೆ ಉಳಿಯುತ್ತದೆ. ಅಂತಹ ಕೆಲಸ ಈ ಭಾಗದಲ್ಲಿ ಪಟ್ಟದ್ದೇವರು ಮಾಡಿದ್ದರು” ಎಂದು ಸ್ಮರಣೆ ಮಾಡಿದರು.
“ಪಟ್ಟದ್ದೇವರು ಬಸವಣ್ಣ ವಿಚಾರಧಾರೆಯನ್ನು ಬದುಕಿನುದಕ್ಕೂ ಪಾಲಿಸಿದರು. ಶ್ರೀಮಠದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದರು. ಬಸವಕಲ್ಯಾಣ ಅನುಭವ ಮಂಟಪಕ್ಕೆ ಶ್ರೀಗಳು ಹೊಸ ಆಯಾಮ ನೀಡಿದರ ಪರಿಣಾಮ ಇಂದು ಪಾರ್ಲಿಮೆಂಟ್ ಪರಿಕಲ್ಪನೆ ಉಳಿದಿದೆ. ಅವರ ಚಿಂತನೆ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಬದುಕು ಸಾಗಿಸೋಣ” ಎಂದು ಕರೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಬೆಂಗಳೂರಿನ ಖ್ಯಾತ ಚಿಂತಕ ಡಾ. ಸಿದ್ಧನಗೌಡ ಪಾಟೀಲ್ ಮಾತನಾಡಿ, “ಬಸವ ತತ್ವಗಳನ್ನು ಶಾಲಾ – ಕಾಲೇಜು ಪಠ್ಯದಲ್ಲಿ ಸೇರಿಸುವ ಕೆಲಸ ಆಗಬೇಕು” ಎಂದು ಆಶಿಸಿದರು.
ಕೌಠಾ ಬಸವಯೋಗಾಶ್ರಮದ ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಮಾತನಾಡಿ, “ಡಾ. ಚನ್ನಬಸವ ಪಟ್ಟದ್ದೇವರು ತಮ್ಮ ಇಡೀ ಜೀವನವನ್ನು ಬಸವತತ್ವಕ್ಕೆ ಮೀಸಲಿಟ್ಟು ಬಸವಮಯ ಬದುಕು ಸಾಗಿಸಿದರು. ಇತ್ತೀಚೆಗೆ ಬಸವತತ್ವದ ಬಗ್ಗೆ ಉಪದೇಶ ಹೇಳುವರು ಹೆಚ್ಚಾಗಿದ್ದಾರೆ. ಅದರಂತೆ ನಡೆಯುವರು ಅತ್ಯಂತ ವಿರಳ. ಹಾಗಾಗಿ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಲು ಬಸವತತ್ವದ ತರಬೇತಿ ನೀಡುವುದು ಅಗತ್ಯವಾಗಿದೆ” ಎಂದು ತಿಳಿಸಿದರು.
“ಬಸವಣ್ಣನವರ ತತ್ವ, ಚಿಂತನೆಗಳನ್ನು ಡಾ. ಚನ್ನಬಸವ ಪಟ್ಟದ್ದೇವರು ತಮ್ಮ ಬದುಕಿನುದ್ದಕ್ಕೂ ಪಾಲಿಸಿದರು. ಬಸವಣ್ಣ ಅವರ ವಿಚಾರಧಾರೆಗಳು ನಮ್ಮೆಲ್ಲರಿಗೆ ದಾರಿದೀಪ ಆಗಿವೆ” ಎಂದು ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು
ಬಿಜೆಪಿ ಮುಖಂಡ ಗುರುನಾಥ ಕೊಳ್ಳುರು ಅವರು ಬಸವ ಗುರುವಿನ ಪೂಜೆ ನೆರವೇರಿಸಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ವಿ ಸಿದ್ದರಾಮಣ್ಣ ಶರಣರು ಷಟಸ್ಥಲ ಧ್ವಜರೋಹಣ ನೆರವೇರಿಸಿದರು. ಹಿರಿಯ ಪತ್ರಕರ್ತ ರಾಹುಲ ಬೆಳಗಲಿ ಗ್ರಂಥ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದರು. ಅಕ್ಕ ಗಂಗಾಂಬಿಕೆ ತಾಯಿ, ಉಳಿವಿಯ ಶರಣ ಬಸವ ಸ್ವಾಮೀಜಿ, ಮೈತ್ರಾದೇವಿ ತಾಯಿ, ಮಹಾದೇವಮ್ಮ ತಾಯಿ ಸಮ್ಮುಖ ವಹಿಸಿದರು. ಬುಡಾ ಅಧ್ಯಕ್ಷ ಬಾಬು ವಾಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿ.ಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಾಣ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ ಸೇರಿದಂತೆ ಇತರರು ಇದ್ದರು.