- ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಓಲೇಕಾರ್ ಏಕೆ ಅನರ್ಹವಾಗಿಲ್ಲ: ಪ್ರಶ್ನೆ
- ರಾಜ್ಯಪಾಲರು, ಸಭಾಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು
ಕರ್ನಾಟಕದಲ್ಲಿ ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರೂ ಸಿ. ಓಲೇಕಾರ್ ಅವರನ್ನು ಏಕೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಿಲ್ಲ ಎಂದು ಸ್ವಪಕ್ಷದ ಕಾರ್ಯಕರ್ತರೇ ಈಗ ಪ್ರಶ್ನಿಸುತ್ತಿದ್ದಾರೆ.
ನೆಹರು ಓಲೇಕಾರ್ ಅವರನ್ನು ವಿಧಾನಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ ರಾಜ್ಯಪಾಲರು, ಸ್ಪೀಕರ್ ಕಾಗೇರಿ, ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಯನಾಡು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿರುವ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯೊಳಗೂ ನೆಹರು ಓಲೇಕಾರ್ ಶಾಸಕ ಸ್ಥಾನದ ಅನರ್ಹತೆಗೆ ಕೂಗು ಕೇಳಿಬಂದಿರುವುದು ಕುತೂಹಲ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಕೆಲವರಿಗೆ ಟಿಕೆಟ್ ತಪ್ಪಬಹುದು, ಪಕ್ಷ ಬಿಟ್ಟು ಹೋಗಲೂಬಹುದು: ಜಗದೀಶ್ ಶೆಟ್ಟರ್
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ನೆಹರೂ ಓಲೇಕರ್ ವಿರುದ್ಧ ಕಳೆದ ಫೆಬ್ರವರಿ 13ರಂದು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎರಡು ವರ್ಷ ಶಿಕ್ಷೆ ಪ್ರಕಟವಾಗಿತ್ತು. ನ್ಯಾಯಾಲಯ ನೀಡಿದ ಶಿಕ್ಷೆಯ ಆದೇಶಕ್ಕೆ ಇನ್ನೂ ಹೈಕೋರ್ಟ್ ನಿಂದ ತಡೆಯಾಜ್ಞೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನಿಯಮದಂತೆ ನೆಹರು ಓಲೇಕಾರ್ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ದೂರಿನಲ್ಲಿ ಸಂತೋಷ್ ರೆಡ್ಡಿ ಮನವಿ ಮಾಡಿದ್ದಾರೆ.