ಬೆಂಗಳೂರಿನ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕನ ಸಾವು ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯದಲ್ಲಿ ಇರಿಸಲಾಗಿದ್ದ ಠೇವಣಿಯನ್ನೂ ಬಿಎಂಟಿಸಿಗೆ ಹಿಂದಿರುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.
ನಗರದ ಪೀಣ್ಯ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಟಿ ಭೋಜರಾಜ 2008ರಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಬಿಎಂಟಿಸಿ ಕೆಲಸದ ಒತ್ತಡ ಕಾರಣವೆಂದು ಪರಿಹಾರಕ್ಕಾಗಿ 2016ರಲ್ಲಿ ಮೃತನ ತಾಯಿ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
“ಕೆಲಸದ ಒತ್ತಡ ಮತ್ತು ಆಯಾಸದ ಪರಿಣಾಮ ಉಸಿರಾಟದ ತೊಂದರೆಯಿಂದ 21 ವರ್ಷದ ಭೋಜರಾಜ ಬಳಲುತ್ತಿದ್ದರು. ಅವರಿಗೆ ಉತ್ತಮ ಚಿಕಿತ್ಸೆ ನೀಡಿದರೂ, ಬದುಕುಳಿದಿಲ್ಲ. ಅವರ ಸಾವಿಗೆ ಕೆಲಸದ ಒತ್ತಡವೇ ಕಾರಣವಾಗಿದ್ದು, ಬಿಎಂಟಿಸಿ ಪರಿಹಾರ ಕೊಡಿಸಬೇಕು” ಎಂದು ದಾವೆಯಲ್ಲಿ ವರಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಅರ್ಜಿದಾರರಿಗೆ ಒಟ್ಟು 10,10,660 ರೂ. ಪರಿಹಾರ ಪಾವತಿಸಬೇಕೆಂದು ಬಿಎಂಟಿಸಿಗೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಬಿಎಂಟಿಸಿ, “ಚಾಲಕ ಮೃತಪಡುವ ಮುನ್ನ ಎರಡು ತಿಂಗಳಿಂದಲೂ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿದ್ದಾರೆ. ಅವರು ಸರಿಯಾಗಿ ಉದ್ಯೋಗಕ್ಕೆ ಹಾಜರಾಗದೇ ಇರುವುದಕ್ಕೆ ದಾಖಲೆಗಳಿವೆ. ಹಾಗಾಗಿ, ಪರಿಹಾರ ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು” ಎಂದು ಮನವಿ ಮಾಡಿತ್ತು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು ಅಂದು-ಇಂದು – 1 | ಬದಲಾಗುತ್ತಿರುವ ಬೆಂದಕಾಳೂರು ಹಿಂದೆ ಹೇಗಿತ್ತು; ಇಲ್ಲಿ ನೋಡಿ!
ಬಿಎಂಟಿಸಿಯ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್.ಎಸ್. ಸಂಜಯ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, “ಚಾಲಕ ಭೋಜರಾಜ್ ಉದ್ಯೋಗಕ್ಕೆ ಸರಿಯಾಗಿ ಹಾಜರಾಗಿಲ್ಲ. ಹೀಗಾಗಿ, ಅವರು ಕೆಲಸದ ವೇಳೆ ಮೃತಪಟ್ಟಿದ್ದಾರೆ ಎಂಬುದನ್ನು ಪರಿಗಣಿಸಲಾಗದು” ಎಂದು ಹೇಳಿದ್ದು, ಪರಿಹಾರದ ಆದೇಶವನ್ನು ರದ್ದುಪಡಿಸಿದೆ. ಅಲ್ಲದೆ, ಠೇವಣಿ ಇರಿಸಲಾಗಿದ್ದ ಹಣವನ್ನು ಬಿಎಂಟಿಸಿಗೆ ಹಿಂದಿರುಗಿಸುವಂತೆ ಸೂಚನೆ ನೀಡಿದೆ.