ಚಿತ್ರದುರ್ಗ | ಮದ್ಯದಂಗಡಿ ಬಂದ್‌ ಮಾಡುವಂತೆ ಆಗ್ರಹ

Date:

ಜೆಜೆ ಹಟ್ಟಿಯ ಮದ್ಯದ ಅಂಗಡಿಯನ್ನು ಬಂದ್ ಮಾಡಬೇಕು. ಇಲ್ಲವೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿಯಿಂದ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜೆ ಜೆ ಹಟ್ಟಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

“ಚಿತ್ರದುರ್ಗ ನಗರದ ಜೆ ಜೆ ಹಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ವಾಸವಾಗಿದ್ದು, ಇಂದು ಇದರ ಸಮೀಪದಲ್ಲಿಯೇ ಇರುವ ಉಮಾಪತಿ ಸಮುದಾಯ ಭವನದಲ್ಲಿ ಕಾರ್ತಿಕ್ ರೆಸಿಡೆನ್ಸಿ (ಬಾರ್ ಅಂಡ್ ರೆಸ್ಟೋರೆಂಟ್)ನಲ್ಲಿ ಸಿಎಲ್-7. ಮದ್ಯದಂಗಡಿ ತಲೆಯೆತ್ತಿದೆ. ಇಲ್ಲಿ ಜೆ ಜೆ ಹಟ್ಟಿಯ ಯುವಕರು ಬೆಳಿಗ್ಗೆಯಿಂದ ಸಂಜೆವರೆಗೂ ಈ ಮದ್ಯದಂಗಡಿಯಲ್ಲಿ ಕುಳಿತು ಮದ್ಯ ಸೇವಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಕೆಲಸಗಳಿಗೆ ಹೋಗುತ್ತಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಿಲ್ಲ. ಕುಡಿದು ಮನೆಗೆ ಬಂದು ಕುಟುಂಬಸ್ಥರೊಂದಿಗೆ ಗಲಾಟೆ ಮಾಡುತ್ತಾರೆ. ಇಲ್ಲಿನ ಮನೆಗಳಲ್ಲಿ ನೆಮ್ಮದಿ ಹಾಳಾಗಿ ಹೋಗಿದೆ. ಹೆಣ್ಣುಮಕ್ಕಳ ಗೋಳು ಹೇಳತೀರದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕುಡಿದು ಬಂದು ಪ್ರತಿನಿತ್ಯ ಅಕ್ಕ-ಪಕ್ಕದವರೊಂದಿಗೆ ಜಗಳವಾಡುತ್ತಾರೆ. ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಕುಡಿಯುತ್ತಿದ್ದಾರೆ. ಚಿಕ್ಕ ವಯಸ್ಸಿನ ಯುವಕರು ಕುಡಿದು ಸಾವನಪ್ಪುತ್ತಿದ್ದಾರೆ. ಇದರಿಂದ ದಲಿತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕುಡಿತದಿಂದ ಗಂಡನನ್ನು ಕಳೆದುಕೊಂಡಿದ್ದು, ಈಗ ಮಗನೂ ಅರ್ಧ ಸತ್ತಂತಾಗಿದ್ದಾನೆ” ಎಂದು ವೃದ್ಧೆ ಸುಶೀಲಮ್ಮ ಆತಂಕ ವ್ಯಕ್ತಪಡಿಸಿದರು.

ದುರುಗೇಶಪ್ಪ ಮಾತನಾಡಿ, “ಬಾರ್‌ನವರು ಅಪ್ರಾಪ್ತರಿಗೂ ಕೂಡ ಮದ್ಯಮಾರಾಟ ಮಾಡುತ್ತಿದ್ದಾರೆ. ಅಪ್ರಾಪ್ತರು ಮದ್ಯಪಾನದ ಚಟಕ್ಕೆ ದಾಸರಾಗಿದ್ದಾರೆ. ಈ ಮದ್ಯದಂಗಡಿ ಇರುವ ರಸ್ತೆಯು ದಟ್ಟ ಜನಸಂದಣಿ ಹೊಂದಿದೆ. ಕುಡುಕರು ಬಾರ್‌ನಲ್ಲಿ ಕುಡಿದು ತೇಲಾಡುತ್ತ ರಸ್ತೆಯಲ್ಲಿ ನಡೆದು ಮನೆಗೆ ಬರುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಬಾರ್‌ ಮುಂಭಾಗದಲ್ಲಿ ಕಲ್ಯಾಣ ಮಂಟಪವಿದೆ. ಇಲ್ಲಿ ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಆದರೆ ಕುಡುಕರು ಅಶ್ಲೀಲವಾಗಿ ಬೈದಾಡುತ್ತಾ, ಓಲಾಡುತ್ತ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಡೆದಾಡುವುದರಿಂದ ಸಾರ್ವಜನಿಕರಿಗೆ ಬಹಳ ಕಿರಿಕಿರಿ ಉಂಟಾಗುತ್ತಿದೆ. ಕೀರ್ತಿ ಹಾಸ್ಪಿಟಲ್‌ಗೆ ಮತ್ತು ಪೆಟ್ರೋಲ್ ಬಂಕ್‌ಗೆ ಹೋಗುವವರಿಗೂ ತೊಂದರೆ ಆಗುತ್ತಿದೆ. ಸಂಚಾರಕ್ಕೂ ಅಡೆತಡೆ ಆಗುತ್ತಿದೆ” ಎಂದು ಆರೋಪಿಸಿದರು.

“ಮದ್ಯದಂಗಡಿ ಆವರಣದ ಮುಂಭಾಗದಲ್ಲೇ “ದ್ವಾರಕಾ ಇನ್ ಲಾಡ್ಜ್” ಇದೆ. ಈ ಲಾಡ್ಜ್‌ಗೆ ಅಪ್ರಾಪ್ತ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಬರುತ್ತಾರೆ. ಇಲ್ಲಿ ಬಂದು ಮದ್ಯ ಸೇವಿಸುತ್ತಾರೆ. ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆಂದು ಸ್ಥಳೀಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ” ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪ್ರೊ.ಮಹೇಶಪ್ಪ ಮಾತನಾಡಿ, “ಕಳೆದ 40 ವರ್ಷಗಳ ಹಿಂದೆ ದಸಂಸ ಸಂಸ್ಥಾಪಕ ಬಿ ಕೃಷ್ಣಪ್ಪ ಅವರ ಮುಂದಾಳತ್ವದಲ್ಲಿ ರಾಜ್ಯಾದಾದ್ಯಂತ “ಹೆಂಡ-ಬೇಡ, ಸಾರಾಯಿ-ಬೇಡ, ಹೋಬಳಿಗೊಂದು ವಸತಿ ಶಾಲೆ ಕೊಡಿ” ಎಂಬ ಘೋಷ ವಾಕ್ಯದೊಂದಿಗೆ ಮಾಡಿದ ಹೋರಾಟದ ಪ್ರತಿಫಲವಾಗಿ ಇಂದು ಹೆಂಡ-ಸಾರಾಯಿ ಸಂಪೂರ್ಣವಾಗಿ ನಿಂತಿವೆ. ವಸತಿ ಶಾಲೆಗಳು ಪ್ರಾರಂಭಿಸಲ್ಪಟ್ಟಿವೆ ಎನ್ನುವುದು ಇತಿಹಾಸ” ಎಂದು ಸ್ಮರಿಸಿದರು.

“ಕಾರ್ತಿಕ್ ರೆಸಿಡೆನ್ಸಿ (ಬಾರ್ ಅಂಡ್ ರೆಸ್ಟೋರೆಂಟ್) ಸಿ.ಎಲ್-7 ಮದ್ಯದಂಗಡಿಯ ಸಿ ಎಲ್ -7 ಸನ್ನದು ಷರತ್ತಿನ ಅನ್ವಯ, ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿರುವ ಗ್ರಾಹಕರಿಗೆ ಮಾತ್ರ ಊಟದ ಜೊತೆಗೆ ಮದ್ಯಪಾನ ಸೇವಿಸಲು ಅವಕಾಶ ಕಲ್ಪಿಸಬೇಕು. ಲಾಡ್ಜ್‌ನಲ್ಲಿ ವಾಸ್ತವ್ಯವಿಲ್ಲದ ಹೊರಗಿನ ಗ್ರಾಹಕರಿಗೆ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಆದರೆ ಇವರು ಕಾನೂನು ಉಲ್ಲಂಘಿಸಿ ಹೊರಗಿನ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಸ್ಥಳದಲ್ಲಿಯೇ ಕುಳಿತು ಮದ್ಯಪಾನ ಸೇವಿಸಲು ಅವಕಾಶ ಕಲ್ಪಿಸಿರುತ್ತಾರೆ. ಇದು ಸಿಎಲ್-7 ಸನ್ನದು ಷರತ್ತಿನ ಉಲ್ಲಂಘನೆ ಆಗಿರುತ್ತದೆ” ಎಂದು ಆರೋಪಿಸಿದರು.

“ಈ ಸನ್ನದುದಾರರು ಬೆಳಗಿನ ಜಾವದಲ್ಲಿಯೇ ಮದ್ಯದಂಗಡಿ ತೆರೆದು ಮದ್ಯ ಮಾರಾಟವನ್ನು ಮಾಡುತ್ತಿದ್ದಾರೆ. ದಲಿತ ಕಾಲೋನಿಯ ಯುವಕರು ಆ ವೇಳೆಯಲ್ಲಿಯೇ, ಮದ್ಯ ಸೇವನೆ ಮಾಡುತ್ತಿದ್ದು, ವ್ಯಸನಕ್ಕೆ ಬಲಿಯಾದ ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ, ದಿಕ್ಕು ತಪ್ಪುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ಎಲ್ಲ ಹಿನ್ನೆಲೆಯಲ್ಲಿ ಮಾನವೀಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಈ ಮದ್ಯದಂಗಡಿಯನ್ನು ಬಂದ್ ಮಾಡಿಸಬೇಕು. ಇಲ್ಲವೇ ಸ್ಥಳಾಂತರಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಕೊಬ್ಬರಿ ಖರೀದಿ ಕೇಂದ್ರ ಶೀಘ್ರ ಆರಂಭಿಸದಿದ್ದರೆ ಮಾರ್ಚ್11ಕ್ಕೆ ತೀವ್ರ ಹೋರಾಟ: ರೈತ ಸಂಘದ ಜಿಲ್ಲಾಧ್ಯಕ್ಷ ಎಚ್ಚರಿಕೆ

“ನಮ್ಮ ಮನವಿಗೆ ತಕ್ಷಣ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸುತ್ತೇವೆ. ಕಳೆದ 40 ವರ್ಷಗಳ ಹಿಂದೆ ಮಾಡಿದಂತಹ ಹೋರಾಟವನ್ನು ಮುಂದುವರಿಸಲಾಗುವುದು” ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರುಗಳಾದ ಚಿಕ್ಕಣ್ಣ, ರಾಮು ಗೋಸಾಯಿ, ಟಿ ರಾಮು, ಹನುಮಂತಪ್ಪ ಗುಬ್ಬಿ, ಶಶಿಕುಮಾರ್, ಮಲ್ಲಿಕಾರ್ಜುನ್, ಹೊಯ್ಸಳ, ಹನುಮಂತಪ್ಪ ದುರ್ಗ, ರವಿ, ಕೌನ್ಸಿಲರ್ ನಸ್ರುಲ್ಲಾ ಹಾಗೂ ಕಾರ್ಯಕರ್ತರು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸದ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ

ಚಾಮರಾಜನಗರ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ...

ಹಾಸನ ಪೆನ್ ಡ್ರೈವ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಿ: ಕುಶಾಲಾ ಸ್ವಾಮಿ

ಹಾಸನ ಸೇರಿದಂತೆ ರಾಜ್ಯದಾದ್ಯಂತ ಓಡಾಡುತ್ತಿರುವ ಸಾವಿರಾರು ಅಶ್ಲೀಲ ವಿಡಿಯೋಗಳುಳ್ಳ ಪೆನ್ ಡ್ರೈವ್,...

ಚಾಮರಾಜನಗರ | ಮತಗಟ್ಟೆ ಧ್ವಂಸ ಮಾಡಿದ ಇಂಡಿಗನತ್ತ ಗ್ರಾಮದಲ್ಲಿ ಏ.29ರಂದು ಮರು ಮತದಾನ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ...

ಬೆಂಗಳೂರು | ಅಬ್ಬರದ ಜನಜಾಗೃತಿ ನಡುವೆಯೂ ಕರ್ತವ್ಯ ಮರೆತ ನಗರದ ಮಂದಿ: ಅದೇ ಹಳೆ ಕಥೆ

ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದೆ....