ಸಂವಿಧಾನದ ಆಶಯ ಮತ್ತು ಮೌಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಿಂದ “ಸಂವಿಧಾನ ಜಾಗೃತಿ ಜಾಥಾ”ವನ್ನು ಹಮ್ಮಿಕೊಂಡಿದ್ದು, ಚಿತ್ರದುರ್ಗ ಜಿಲ್ಲಾದ್ಯಂತ ಸಂವಿಧಾನ ಜಾಥಾಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚರಿಸುತ್ತಿರುವ “ಸಂವಿಧಾನ ಜಾಗೃತಿ ಜಾಥಾ” ಕುರಿತು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಲವು ಅಧಿಕಾರಿಗಳೊಂದಿಗೆ ಕೈಗೊಂಡ ಸಭೆಯಲ್ಲಿ ಮಾಹಿತಿ ಪಡೆದು, ಮಾತನಾಡಿದರು
“ಭಾರತದ ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ ಜನವರಿ 26ರ ಗಣರಾಜ್ಯೋತ್ಸವದಂದು ಜಿಲ್ಲಾ ಉಸುವಾರಿ ಸಚಿವ ಡಿ ಡಿ ಸುಧಾಕರ್ ಅವರು “ಸಂವಿಧಾನ ಜಾಗೃತಿ ಜಾಥಾ”ಕ್ಕೆ ಚಾಲನೆ ನೀಡಿದ್ದರು. ಎಲ್ಇಡಿ ವಾಹನದೊಂದಿಗೆ, ಬುದ್ಧ, ಬಸವ, ಅಂಬೇಡ್ಕರ್ ಪುತ್ಥಳಿಯನ್ನು ಒಳಗೊಂಡಿರುವ ವಿಶೇಷ ವಾಹನದ ಜಾಥಾ ಮೂಲಕ ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ” ಎಂದರು.
“ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪ್ರದರ್ಶಿಸುವ ಎಲ್ಇಡಿ ಪರದೆ ಹೊಂದಿರುವ ಸ್ತಬ್ಧಚಿತ್ರವು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫೆಬ್ರವರಿ 23ರವರೆಗೆ ಸಂಚರಿಸಲಿದೆ” ಎಂದು ಹೇಳಿದರು.
“ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಪೂರ್ವ ನಿಗದಿತ ಮಾರ್ಗದಲ್ಲಿ ಪ್ರತಿದಿನ ಸಂಚರಿಸುತ್ತಿದೆ. ಕಳೆದೆರಡು ದಿನಗಳಿಂದ ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ” ಎಂದು ಹೇಳಿದರು.
“ಎಲ್ಲೆಡೆ ಪೂರ್ಣ ಕುಂಭ ಹೊತ್ತ ಮಹಿಳೆಯರು ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷ ಬೈಕ್ ಜಾಥಾಗಳನ್ನೂ ಕೂಡ ಆಯೋಜಿಸಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿಯೂ ಆಕರ್ಷಕ ಸಂವಿಧಾನ ಜಾಗೃತಿ ಸ್ಥಬ್ಧಚಿತ್ರ ಜನರ ಮನಸ್ಸನ್ನು ಗೆಲ್ಲುವುದರೊಂದಿಗೆ ಸಂವಿಧಾನದ ಮಹತ್ವ ಸಾರುತ್ತಿದೆ. ಸ್ಥಬ್ದಚಿತ್ರ ಸಾಗುವಲ್ಲೆಲ್ಲಾ ಜನಸ್ಪಂದನೆ ಅಭೂತಪೂರ್ವವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಕುವೆಂಪು ಅವರಿಗೆ ಅವಮಾನವಾಗುವಂತೆ ಸರ್ಕಾರ ಆದೇಶ ಮಾಡಿಲ್ಲ: ಶಾಸಕ ಬಾಲಕೃಷ್ಣ
“ಜಾಗೃತಿ ಜಾಥಾ ಸಂದರ್ಭದಲ್ಲಿಯೇ ಗ್ರಾಮ, ಪಟ್ಟಣಗಳಲ್ಲಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಕಾರ್ಯ ವಿಶೇಷವಾಗಿ ಜರುಗುತ್ತಿದೆ. ಸಂವಿಧಾನ ಜಾಗೃತಿ ಜಾಥಾ ಸಾಗುವ ಮಾರ್ಗಗಳಲ್ಲಿ ಸಾರ್ವಜನಿಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂವಿಧಾನದ ಮಹತ್ವ ಅರಿಯುವಂತಾಗಬೇಕು” ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಆಶಯ ವ್ಯಕ್ತಪಡಿಸಿದರು.