“ಪ್ರಧಾನಿ ನರೇಂದ್ರ ಮೋದಿ ನನ್ನ ಕೈಗೆ ಸಿಕ್ಕರೆ ಕಾಲಲ್ಲಿರೋದು ತೆಗೆದು ಹೊಡಿತಿನಿ” ಎಂದು ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿಎಸ್ ಮಂಜುನಾಥ್ ಕಿಡಿಕಾರಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಹರಿಶ್ಚಂದ್ರ ಘಾಟ್ ಬಳಿ ಶನಿವಾರ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿ ಎಸ್ ಮಂಜುನಾಥ್ ಭಾಷಣದುದ್ದಕ್ಕೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿ, “10 ವರ್ಷ ಅಡುಗೆ ಅನಿಲದ ಬೆಲೆ ಹೆಚ್ಚಿಸಿದವರು ಈಗ ನೂರು ರೂಪಾಯಿ ಇಳಿಸಿದ್ದಾರೆ. ಇದನ್ನು ಜೆಡಿಎಸ್ ಕಾಂಗ್ರೆಸ್
ಪ್ರಶ್ನಿಸುವುದಿಲ್ಲ. ಬಿಜೆಪಿ ಮೊದಲೇ ಕೇಳಲ್ಲ, ನಾನು ಕಾಂಗ್ರೆಸ್ ಎಂದು ಹೇಳಲ್ಲ, ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಪ್ರಶ್ನಿಸುತ್ತಿದ್ದೇನೆ. ನೀವು ಇದನ್ನು ಪ್ರಶ್ನೆ ಮಾಡಬೇಕಿದೆ. ಚುನಾವಣೆ ಬಂದಿದೆ ಅಂತ ನೂರು ರೂಪಾಯಿ ಕಡಿಮೆ ಮಾಡಿರುವವರು ಹೇಗೆ ಸಾವಿರಾರು ರೂಪಾಯಿ ದೋಚಿದ್ದಾರೆಂದು ಮರೆಯಬಾರದು” ಎಂದು ಹೇಳಿದರು.
“21 ಮಂದಿ ಕಾರ್ಪೋರೇಟ್ ಕುಳಗಳ ₹11.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿಗೆ ರೈತರ ಬಡವರ ಸಾಲ ಮನ್ನಾ ಮಾಡಿ ಎಂದರೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುತ್ತಾರೆ. ಇವರಿಗೆ ಬಡವರ ಕಲ್ಯಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್ಪಿ ನಿಖಿಲ್ ಬಿ
“ದೇಶದ ಚಿತ್ರಣವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಸುಳ್ಳನ್ನೇ ಆಸ್ತಿಯನ್ನಾಗಿಸಿಕೊಂಡಿರುವ ಬಿಜೆಪಿಯವರು ಬೀದಿಯಲ್ಲಿ ನಿಂತು ಸುಳ್ಳು ಹೇಳಿದಾಕ್ಷಣ ಕಾಂಗ್ರೆಸ್ ಪಕ್ಷದ ಸಾಧನೆಗಳಿಗೆ ಧಕ್ಕೆಯಾಗದು” ಎಂದರು.