ನಿಮ್ಮ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ. ರೈತರಿಗೆ ಪರಿಹಾರ ಕೊಡಿಸುವುದರ ಜೊತೆಗೆ ಗೋಮಾಳದಲ್ಲಿ ಹಾಗೂ ದಲಿತರ ಸಾಗುವಳಿ ಜಮೀನುಗಳಲ್ಲಿ ಫಲವತ್ತಾದ ಮಣ್ಣನ್ನು ತೆಗೆಯುವ ಅಕ್ರಮ ದಂಧೆಕೋರರನ್ನು ಮಟ್ಟಹಾಕಿ ಅವರ ಮೇಲೆ ಕೇಸ್ ದಾಖಲಿಸಬೇಕು ಎಂದು ಬಿಡಿಎಎಸ್ಎಸ್ ರಾಜ್ಯಾಧ್ಯಕ್ಷ ಡಾ. ಪ್ರಕಾಶ್ ಬಿರಾವರ್ ಆಗ್ರಹಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ತಾಲೂಕು ಕಚೇರಿಗೆ ಪ್ರತಿಭಟನಾಕಾರರು ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಕಾಶ್ ಬಿರಾವರವರನ್ನು ಕರೆಸಿ ರೈತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ನಂತರ ಪ್ರತಿಭಟನೆ ಹಿಂಪಡೆದು ಮಾತನಾಡಿದರು.
“ಅಕ್ರಮವಾಗಿ ಮಣ್ಣು ತೆರವುಗೊಳಿಸುವುದನ್ನು ತಡೆದು, ಅಕ್ರಮ ಸಾಗಣೆ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದರ ಮುಖಾಂತರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಷ್ಟ್ರೀಯ ಅಯುರ್ವೇದ ದಿನಾಚರಣೆ
ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ದಲಿತಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ವಧರ್ಮದ ಶಾಂತಿಯ ಪೀಠ ಶ್ರೀರಾಂಮೂರ್ತಿ ಸ್ವಾಮೀಜಿ ಹಾಗೂ ರಾಜ್ಯ ಕಾರ್ಯಧ್ಯಕ್ಷ ಕೆ ತಿಮ್ಮರಾಜ, ಪರಿವರ್ತನಾವಾದ ಜಿಲ್ಲಾಧ್ಯಕ್ಷ ಹೆಗ್ಗೆರೆ ಮಂಜುನಾಥ್, ಭರಂಪುರ ಕಣುಮಪ್ಪ, ತಾಲೂಕು ಅಧ್ಯಕ್ಷ ಚಂದ್ರಣ್ಣ ಘಾಟ್, ಬಿಡಿಎಸ್ಎಸ್ ತಾಲೂಕು ಅಧ್ಯಕ್ಷ ಮಂಜುನಾಥ್, ಸಿದ್ದಾರ್ಥ್, ಭರಮಪುರ ಗ್ರಾಮ ಪಂಚಾಯತಿ ಸದಸ್ಯ ರಂಗಸ್ವಾಮಿ, ಮಂಜುನಾಥ್, ನಾಗಮ್ಮ, ಗೌರಮ್ಮ ಗಂಗಮ್ಮ, ಮಮತಾ, ಬೋವಿ ಹನುಮಂತ ಸೇರಿದಂತೆ ಇತರರು ಇದ್ದರು.