ಬಿಜೆಪಿಯ ಆಂತರಿಕ ವ್ಯವಹಾರಗಳಲ್ಲಿ ಬಿ.ಎಲ್ ಸಂತೋಷ್ ಮೂಗು ತೂರಿಸುವುದನ್ನು ತಡೆಯದಿದ್ದರೆ, ರಾಜ್ಯದಲ್ಲಿ ಬಿಜೆಪಿ ನಾಶವಾಗುತ್ತದೆ ಎಂದು ಹಿರಿಯೂರು ತಾಲೂಕು ಪಂಚಾಯತಿ ಮಾಜಿ ಸದಸ್ಯ ಜೆಜೆ ಹಳ್ಳಿ ಜಯರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಾತನಾಡಿದ ಅವರು, “ಯಡಿಯೂರಪ್ಪ ಅವರು ಸೈಕಲ್ನಲ್ಲಿ ತಿರುಗಿ ಪಕ್ಷ ಕಟ್ಟಿದ್ದರು. ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆರ್ಎಸ್ಎಸ್ನ ಬಿ.ಎಲ್ ಸಂತೋಷ್ ಮಾಡಿದರು. ಯಡಿಯೂರಪ್ಪ ಕಣ್ಣೀರು ಹಾಕುವಂತೆ ಮಾಡಿದರು” ಎಂದು ಕಿಡಿಕಾರಿದ್ದಾರೆ.
“ಉತ್ತರ ಕರ್ನಾಟಕದ ಪ್ರಭಾವಿಗಳಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದರು. ಅವರು ಪಕ್ಷ ತೊರೆಯುವಂತೆ ಮಾಡಿದರು. ಚುನಾವಣೆ ವೇಳೆ, ಯಡಿಯೂರಪ್ಪ ಮತ್ತು ಲಿಂಗಾಯತರ ಅಗತ್ಯವಿಲ್ಲ, ಹಿಂದುತ್ವದ ಹೆಸರಿನಲ್ಲಿ ಮುಂದೆ ಹೋಗುತ್ತೇವೆಂದು ಉದ್ಧಟತನ ತೋರಿದರು. ಹೀಗಾಗಿ, ಚುನಾವಣೆಯಲ್ಲಿ ಮುಣ್ಣು ಮುಕ್ಕಿದರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲೂ ಸಂತೋಷ್ ಕೈಗೆ ಪಕ್ಷದ ಚುಕ್ಕಾಣಿ ನೀಡಿದರೆ, ಬಿಜೆಪಿಗೆ ಹೀನಾಯ ಪರಿಸ್ಥಿತಿ ಬರುತ್ತದೆ. ರಾಜ್ಯದಲ್ಲಿ ಸಂತೋಷ್ ಅವರ ಮಾತಿಗೆ ಮನ್ನಣೆ ಕೊಡದೆ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಂದೆ ಹೋಗಬೇಕು” ಎಂದು ಅವರು ಹೇಳಿದ್ದಾರೆ.