- ಲೋಕಾಯುಕ್ತಕ್ಕೆ ದೂರು ನೀಡಿರುವ ಬಿಜೆಪಿ ವಕ್ತಾರ ಎನ್.ಆರ್ ರಮೇಶ್
- ಕಾನ್ವರ್ಜೇನ್ಸಿ ಹೆಸರಲ್ಲಿ ₹150 ಕೋಟಿಗೂ ಹೆಚ್ಚು ಹಣ ದುರ್ಬಳಕೆ ಆರೋಪ
ಎತ್ತಿನ ಹೊಳೆ ಯೋಜನೆಯಲ್ಲಿ ಅಕ್ರಮ ನಡೆದಿದೆ. ಅಕ್ರಮ ಅವ್ಯವಹಾರದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ ಎಂ ಶಿವಲಿಂಗೇಗೌಡ ಭಾಗಿಯಾಗಿದ್ದಾರೆಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್ ರಮೇಶ್ ಲೋಕಾಯುಕ್ತದಲ್ಲಿ ಎರಡು ದೂರು ದಾಖಲಿಸಿದ್ದಾರೆ.
ದಾಖಲೆ ಸಮೇತ ಕರ್ನಾಟಕ ಲೋಕಾಯಕ್ತ ಕಚೇರಿಗೆ ರಮೇಶ್ ದೂರು ನೀಡಿದ್ದಾರೆ. “ಶಾಸಕ ಶಿವಲಿಂಗೇಗೌಡ ಅವರು ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಎತ್ತಿನ ಹೊಳೆ ಯೋಜನೆಯ ಕಾನ್ವರ್ಜೇನ್ಸಿ ಹೆಸರಿನಲ್ಲಿ ₹150 ಕೋಟಿಗೂ ಹೆಚ್ಚು ಹಣ ದುರ್ಬಳಕೆ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್ ರಮೇಶ್, “ಶಾಸಕ ಶಿವಲಿಂಗೇಗೌಡ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ತುಮಕೂರು ವಿಭಾಗದ ಮುಖ್ಯ ಎಂಜಿನಿಯರ್ ಮಾಧರ್, ಅಧೀಕ್ಷಕ ಎಂಜಿನಿಯರ್ ಆನಂದ್ ಕುಮಾರ್, ಹಾಸನ ವಿಭಾಗದ ಕಾರ್ಯಪಾಲಕ ಎಂಜನಿಯರ್ ರಘುನಾಥ್, ಅರಸೀಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಘು ಸೇರಿದಂತೆ ಅನೇಕರ ವಿರುದ್ಧ ದೂರು ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
“ಕೆಟಿಟಿಪಿ ಕಾಯ್ದೆಯ ಪ್ರಕಾರ ₹1 ಲಕ್ಷಕ್ಕೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಇ-ಪ್ರೋಕ್ಯೂರ್ಮೆಂಟ್ ವಿಧಾನದಲ್ಲಿ ಟೆಂಡರ್ ಆಹ್ವಾನಿಸಬೇಕಿತ್ತು. ನಿಯಮಾನುಸಾರ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿಗಳ ನಿರ್ವಹಣೆಯ ಗುತ್ತಿಗೆಯನ್ನು ನೀಡಬೇಕಿತ್ತು. ಆದರೆ, ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಂದು ಕೋಟಿಯಿಂದ ಐದು ಕೋಟಿ ರೂಪಾಯಿಗಳ ವರೆಗಿನ ಎಲ್ಲ ಕಾಮಗಾರಿಗಳನ್ನು ನಡೆಸಲಾಗಿದೆ. ನಿಯಮಾನುಸಾರ ಟೆಂಡರ್ ಕರೆಯದೆ ಕೆಆರ್ಐಡಿಎಲ್ ಸಂಸ್ಥೆಯ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶ ಮಾಡಿಕೊಡಲಾಗಿದೆ” ಎಂದು ದೂರಿದ್ದಾರೆ.
“ಅದರಲ್ಲೂ ಪ್ರಮುಖವಾಗಿ ಎಸ್ಸಿ-ಎಸ್ಟಿ ಯೋಜನೆಗಳನ್ನು ಆಯಾ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲೇ ಮಾಡಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“ಬಿಡುಗಡೆಯಾಗುವ ಅನುದಾನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಲುವಾಗಿಯೇ, ನಿಯಮಾನುಸಾರ ಟೆಂಡರ್ ಕರೆಯದೇ ನೇರವಾಗಿ ಕೆಆರ್ ಐಡಿಎಲ್ ಸಂಸ್ಥೆಗೆ ಕಾಮಗಾರಿಗಳ ನಿರ್ವಹಣೆಯ ಕಾರ್ಯವನ್ನು ವಹಿಸಲಾಗುವ ಸತ್ಯ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ರುಜುವಾತಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನರೇಗಾ ಕೂಲಿ ಕಾರ್ಮಿಕರ ಸಂಘಟನೆಯಿಂದ ಅನಿರ್ದಿಷ್ಟಾವಧಿ...
“ಮನರೇಗಾ ಮೂಲಕ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಅನುದಾನ ಮತ್ತು ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ವಿವೇಚನೆಯ ಅನುದಾನದ ಮೂಲಕ ಬಿಡುಗಡೆಯಾಗುವ ಅನುದಾನಗಳನ್ನು ಒಗ್ಗೂಡಿಸಿ ಕಾನ್ವರ್ಜೇನ್ಸಿ ಹೆಸರಿನಲ್ಲಿ ಪ್ರೆಡ್ ಮೂಲಕ ತಮಗಿಷ್ಟ ಬಂದ ಹಾಗೆ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2018-2023ರ ಅವಧಿಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳನ್ನು ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಕಳೆದ ಐದು ವರ್ಷಗಳಲ್ಲಿ ನರೇಗಾ ಯೋಜನೆಯ ಅನುಷ್ಠಾನಕ್ಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಬಿಡುಗಡೆಯಾಗಿರುವ ₹150 ಕೋಟಿಗೂ ಹೆಚ್ಚು ಮೊತ್ತದ ಅನುದಾನಗಳ ಪೈಕಿ, ಶೇ. 50ಕ್ಕೂ ಹೆಚ್ಚು ಹಣವನ್ನು ಶಾಸಕ ಶಿವಲಿಂಗೇಗೌಡರು ತಮ್ಮ ಆಪ್ತ ಮತ್ತು ವಂಚಕ ಅಧಿಕಾರಿಗಳ ಸಹಕಾರದಿಂದ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿರುವುದರಿಂದ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು” ಎಂದು ರಾಜ್ಯ ಸರ್ಕಾರವನ್ನು ರಮೇಶ್ ಒತ್ತಾಯಿಸಿದ್ದಾರೆ.