- ನರೇಗಾ ಕೂಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ
- ದೆಹಲಿಯ ಜಂತರ್ ಮಂತರ್ನಲ್ಲಿ ಫೆ.13ರಿಂದ ನಡೆಯುತ್ತಿರುವ ಹೋರಾಟ
ನರೇಗಾ ಕೂಲಿ ಕಾರ್ಮಿಕರು ಕೇಂದ್ರ ಸರ್ಕಾರ ನರೇಗಾ ಯೋಜನೆಗೆ 2023–24ನೇ ಸಾಲಿನ ಬಜೆಟ್ ನಲ್ಲಿ ಕೇವಲ 60,000 ಕೋಟಿ ಅನುದಾನ ಮೀಸಲಿಟ್ಟಿದ್ದು, ಇದನ್ನು 150,000 ಕೋಟಿಗೆ ಹೆಚ್ಚಿಸಬೇಕು ಹಾಗೂ ಗ್ರಾಕೂಸ್ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ” ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಮತ್ತು ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದನ್ನು ವಿರೋಧಿಸಿ ರಾಯಚೂರಿನ ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆ (ಗ್ರಾಕೂಸ್) ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕೇಂದ್ರ ಸರ್ಕಾರದ 2023-24 ಸಾಲಿನ ಬಜೆಟ್ನಲ್ಲಿ ನರೇಗಾ ಕಾಯ್ದೆ (ಯೋಜನೆ)ಗೆ ಕೇವಲ 60,000 ಕೋಟಿ ಹಣ ಮೀಸಲಿಟ್ಟಿದೆ. ಇದರಿಂದ ಕೂಲಿಕಾರ್ಮಿಕರಿಗೆ ಕೇವಲ 20ರಿಂದ 30 ದಿನಗಳ ಕೆಲಸ ಮಾತ್ರ ಸಿಗುತ್ತದೆ. ಇದನ್ನು 150,000 ಕೋಟಿಗೆ ಹೆಚ್ಚಿಸಬೇಕು” ಎಂದು ಮನವಿ ಮಾಡಿದರು.
“2022-23ನೇ ಸಾಲಿನಲ್ಲಿ ಕೂಲಿ ಕಾರ್ಮಿಕರಿಗೆ ಬರಬೇಕಾಗಿದ್ದ ಕೂಲಿ ಹಣವು 2-3 ತಿಂಗಳು ವಿಳಂಬವಾಗಿ ನೀಡಿದ್ದಾರೆ. ಆದರೆ, ಪ್ರಸಕ್ತ ವರ್ಷದಲ್ಲಿ ಕೂಲಿ ಹಣವನ್ನು 7 ದಿನಗಳ ಒಳಗಡೆ ಕೊಡಬೇಕು, ಇಲ್ಲವೆಂದರೆ ಕೂಲಿ ಹಣದ ಜೊತೆ ನಷ್ಟ ಪರಿಹಾರ ಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? : ಬೆಳಗಾವಿ | ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನರೇಗಾ ಕಾರ್ಮಿಕರ ಪ್ರತಿಭಟನೆ
“ನರೇಗಾ ಯೋಜನೆಯು ಕೋವಿಡ್ ಸಮಯದಲ್ಲಿ ಹಾಗೂ ನಂತರದ ದಿನಗಳಲ್ಲಿ ಹಳ್ಳಿ ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದೆ. ಆದ್ದರಿಂದ ಪ್ರತಿ ಕುಟುಂಬಕ್ಕೂ ವರ್ಷದಲ್ಲಿ 200 ದಿನಗಳ ಕೆಲಸ ನೀಡಬೇಕು” ಎಂದು ಮನವಿ ಮಾಡಿದರು.
“ನರೇಗಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ದೆಹಲಿಯ ಜಂತರ್ ಮಂತರ್ ನಲ್ಲಿ ಫೆ.13ರಿಂದ ನರೇಗಾ ಸಂಘರ್ಷ ಮೋರ್ಚ (ದೇಶದ ಎಲ್ಲಾ ರಾಜ್ಯಗಳ ನರೇಗಾ ಕಾರ್ಮಿಕರ ಒಕ್ಕೂಟ) ಧರಣಿ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ” ಎಂದು ಕಿಡಿ ಕಾರಿದರು.
ಧರಣಿಯಲ್ಲಿ ಹೋರಾಟಗಾರ್ತಿ ಮಾರೆಮ್ಮ, ಗುರುರಾಜ, ಗೋವಿಂದ, ಕೊಂಡಯ್ಯ, ವಿದ್ಯಾ ಪಾಟೀಲ, ಮಂದಕಲ್, ಬಸವರಾಜ, ಶಿವರಾಮ ರೆಡ್ಡಿ, ಉಮೇಶ, ಆಂಜಿನೇಯ ಸೇರಿದಂತೆ ಹಲವರು ಹಾಜರಿದ್ದರು.