- ಗ್ಯಾರಂಟಿ ಯೋಜನೆ ಜಾರಿಗೆ ತರಲು ವಾರ್ಷಿಕವಾಗಿ 52 ಸಾವಿರ ಕೋಟಿ ರೂ ಅಂದಾಜು
- ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ಮುಖ್ಯಮಂತ್ರಿ ಸಭೆ, ಅಂದಾಜು ಪಟ್ಟಿ ಸಲ್ಲಿಕೆ
ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ವಾರ್ಷಿಕವಾಗಿ 52 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಧಿಕಾರಿಗಳು ಪ್ರಾಥಮಿಕ ಅಂದಾಜು ಪಟ್ಟಿ ಸಲ್ಲಿಸಿದ್ದಾರೆ.
ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಯೋಜನೆಗಳನ್ನು ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿತ್ತು. ಈ ಗ್ಯಾರಂಟಿಗಳನ್ನು ಘೋಷಿಸುವಾಗ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಜೂನ್ 1ರಂದು ಪೂರ್ಣಪ್ರಮಾಣದ ಸಚಿವರೊಂದಿಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಯವರು ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸುವಂತೆ ತಿಳಿಸಿದ್ದಾರೆ.
ಯಾವ ಗ್ಯಾರಂಟಿಗೆ ಎಷ್ಟು ಹಣ ಬೇಕು
ಅನ್ನಭಾಗ್ಯ ಯೋಜನೆಗೆ 10 ಸಾವಿರ ಕೋಟಿ
ಸದ್ಯದ ಮಾಹಿತಿ ಪ್ರಕಾರ ಅನ್ನಭಾಗ್ಯದ ಯೋಜನೆಯನ್ನು 1.3 ಕೋಟಿ ಕುಟಂಬಗಳು ಪ್ರಯೋಜನ ಪಡೆಯುತ್ತಿವೆ. ಈ ಕುಟುಂಬಗಳ 4.30 ಕೋಟಿ ಜನರಿಗೆ ತಲಾ ಹತ್ತು ಕೆ.ಜಿ ಅಕ್ಕಿ ವಿತರಿಸಬೇಕು. ಇದಕ್ಕೆ ವಾರ್ಷಿಕವಾಗಿ ತಗಲುವ ವೆಚ್ಚ 10 ಸಾವಿರ ಕೋಟಿ.
ಗೃಹಲಕ್ಷ್ಮಿ ಯೋಜನೆಗೆ 24 ಸಾವಿರ ಕೋಟಿ
ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂ. ಕೊಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳನ್ನೇ ಲೆಕ್ಕಕ್ಕೆ ಪರಿಗಣಿಸಿದರೆ ವಾರ್ಷಿಕವಾಗಿ 24 ಸಾವಿರ ಕೋಟಿ ಬೇಕಾಗುತ್ತದೆ.
ಯುವನಿಧಿ ಯೋಜನಗೆ 1,200 ಕೋಟಿ
ಈ ವರ್ಷ ಪದವಿ ಮುಗಿಸಿಕೊಂಡು ಹೊರಬಂದವರಿಗೆ ಸೀಮಿತವಾಗಿ ಯುವನಿಧಿ ಜಾರಿಗೆ ತಂದರೂ ವಾರ್ಷಿಕವಾಗಿ 1,200 ಕೋಟಿ ಬೇಕಾಗುತ್ತದೆ. ಇನ್ನು, ಎಂಜನಿಯರಿಂಗ್ ಪದವೀಧರರು, ಸ್ನಾತಕೋತ್ತರ ಮತ್ತು ಪಿಎಚ್ಡಿ ಪದವೀಧರರನ್ನು ಈ ವ್ಯಾಪ್ತಿಗೆ ಪರಿಗಣಿಸಿದರೆ ಅಂದಾಜು ಮೊತ್ತ ಹೆಚ್ಚಾಗಬಹುದು.
ಮಹಿಳೆಯರಿಗೆ ಉಚಿತ ಪ್ರಯಾಣ
ಈ ಯೋಜನೆಯನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಪ್ರಯಾಣದ ದೂರದ ಮಿತಿ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎನ್ನುವ ಮಾಹಿತಿ ಇದೆ. ಅಂತಿಮವಾಗಿ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ಗೃಹಜ್ಯೋತಿ ಯೋಜನೆಗೆ 12 ಸಾವಿರ ಕೋಟಿ
ಪ್ರತಿ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಸರ್ಕಾರ ಗ್ಯಾರಂಟಿ ಮಾತು ಹೇಳಿದೆ. ಸದ್ಯಕ್ಕೆ ರಾಜ್ಯದಲ್ಲಿ 2.14 ಕೋಟಿಯಷ್ಟು ಗೃಹಬಳಕೆ ವಿದ್ಯುತ್ ಸಂಪರ್ಕಗಳಿವೆ. ಇದೆಲ್ಲದಕ್ಕೂ ಉಚಿತ ವಿದ್ಯುತ್ ನೀಡಿದರೆ ವಾರ್ಷಿಕವಾಗಿ 12,038 ಕೋಟಿ ಬೇಕಾಗಬಹುದು.
ಈ ಎಲ್ಲ ವಿಚಾರಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಯೋಜನೆಗಳನ್ನು ಯಾವ ರೀತಿ ಜಾರಿಗೊಳಿಸಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.