ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಮೂವರು ಸ್ನೇಹಿತರು ಸಮುದ್ರಪಾಲಾಗಿದ್ದ ಹಿನ್ನೆಲೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಂದು ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.
ಭಾರೀ ಗಾಳಿ ಬೀಸಿದ ಪರಿಣಾಮ, ಬೃಹತ್ ಅಲೆಗಳಿಗೆ ಸಿಲುಕಿದ ನಾಗರಾಜ್ ಮತ್ತು ಮಿಲನ್ ಮೃತದೇಹ ಪತ್ತೆಯಾಗಿವೆ. ಲಿಖಿತ್ ಎಂಬಾತನಿಗಾಗಿ ಹುಡುಕಾಟ ಮುಂದುವರೆದಿದೆ.
ಪೋರ್ಕೋಡಿ ಅಂಬೇಡ್ಕರ್ ನಗರ ಕಾಲೊನಿ ನಿವಾಸಿಗಳಾದ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಮತ್ತು ಮಿಲನ್ (20) ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿ ನಾಗರಾಜ್ (24) ಸ್ನೇಹಿತರು. ಇವರೊಂದಿಗೆ ಮನೋಜ್ ಮತ್ತು ಪುನೀತ್ ಸೇರಿ ಒಟ್ಟು ಐವರು ಭಾನುವಾರ ಬೈಕ್ನಲ್ಲಿ ಪಣಂಬೂರು ಬೀಚ್ಗೆ ತೆರಳಿದ್ದರು. ಲಿಖಿತ್ ಮೊದಲು ಸಮುದ್ರ ಅಲೆಗೆ ಸಿಲುಕಿದ್ದು, ಅವರನ್ನು ಬದುಕಿಸಲು ಮಿಲನ್ ಹೋಗಿದ್ದು, ಇಬ್ಬರನ್ನೂ ರಕ್ಷಿಸಲು ನಾಗರಾಜ್ ಸಮುದ್ರದಾಳಕ್ಕೆ ಇಳಿದಿದ್ದರು. ಬಳಿಕ ಮೂವರೂ ಸಮುದ್ರದಲೆಗೆ ಸಿಲುಕಿ ನಾಪತ್ತೆಯಾಗಿದ್ದರು.
ಈಜಲು ಹೋಗಿ ಸಮುದ್ರಪಾಲಾಗಿರುವ ಲಿಖಿತ್ ಪ್ರಥಮ ಪಿಯುಸಿ ಪರೀಕ್ಷೆಯನ್ನು ಬರೆದಿದ್ದ. ಮಾರ್ಚ್ 30ಕ್ಕೆ ಫಲಿತಾಂಶ ಪ್ರಕಟವಾಗಲಿತ್ತು. ರಜೆಯಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುವುದಾಗಿ ಲಿಖಿತ್ ಹೇಳಿಕೊಂಡಿದ್ದ. ರಾಣಿ ಮತ್ತು ಮಣಿಕಂಠ ದಂಪತಿಯ ಏಕೈಕ ಪುತ್ರ ಲಿಖಿತ್ ಓದಿನಲ್ಲೂ ಮುಂದಿದ್ದ ಎಂದು ತಿಳಿದುಬಂದಿದೆ.
ಮಿಲನ್ ಅಣ್ಣ ಮೋಹನ್ ಜೊತೆ ವಾಸವಾಗಿದ್ದು, ರೋಸಾ ಮಿಸ್ರಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದ. ನಾಗರಾಜ್ ಮಂಗಳೂರಿನ ಮಾತಾ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಫಕೀರ ಮತ್ತು ಅನುಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಈತ ಕೊನೇಯವ. ಈತನಿಗೆ ಈಜು ಗೊತ್ತಿತ್ತು. ಆದರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
“ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಸಮುದ್ರ ಪ್ರಕ್ಷುಬ್ದತೆ ಮುಂದುವರಿದಿರುವ ಕಾರಣ ವಾಟರ್ ಸ್ಪೋರ್ಟ್ಸ್ ಅನ್ನು ಬೀಚ್ ಟೂರಿಸಂ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ” ಎಂದು ಜೀವರಕ್ಷಕರು ತಿಳಿಸಿದ್ದಾರೆ.
“ಸೋಮವಾರ ಬೆಳಗ್ಗಿನಿಂದ ಬರುವ ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ದೂರದ ಊರುಗಳಿಂದ ಬೀಚ್ ನೋಡಲು ಬಂದವರು ನಿರಾಸೆಗೆ ಒಳಗಾದರೆ, ಕೆಲವರು ರಕ್ಷಣಾ ತಂಡದ ಕಣ್ಣು ತಪ್ಪಿಸಿ, ನೀರಾಟಕ್ಕೆ ಇಳಿಯುತ್ತಿದ್ದರು. ಕೆಲವರು ಕಣ್ಗಾವಲು ಇದ್ದ ಪ್ರದೇಶದಿಂದ ಮುಂದಕ್ಕೆ ಹೋಗುವುದು ಸಿಬ್ಬಂದಿಗಳಿಗೆ ತಲೆನೋವು ತಂದೊಡ್ಡಿದೆ. ಪದೇ ಪದೆ ಎಚ್ಚರಿಕೆ ನೀಡಿದರೂ ಯುವಕರು ಪಾಲಿಸದ ಕಾರಣ ದುರ್ಘಟನೆಗಳು ಸಂಭವಿಸುತ್ತಿವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೇಸಿಗೆಯ ತಾಪ ಹೆಚ್ಚಳ; ಬೆಂಕಿ ಅವಘಡ ಪ್ರಕರಣಗಳ ಏರಿಕೆ
“ಬೇಸಿಗೆ ರಜೆಯಲ್ಲಿ ಪ್ರವಾಸಿಗರು ಕರಾವಳಿಗೆ ಹೆಚ್ಚಾಗಿ ಬರುವುದು ಸಹಜ. ಈ ಸಂದರ್ಭ ಬೀಚ್ಗೆ ಲಗ್ಗೆ ಇಡುತ್ತಾರೆ. ಈ ಹಿನ್ನೆಲೆಯಲ್ಲಿ ಜೀವರಕ್ಷಕರ ತಂಡದ ಹೆಚ್ಚಳದ ಜೊತೆಗೆ ಪ್ರಥಮ ಚಿಕಿತ್ಸಾ ಕೊಠಡಿ, ತುರ್ತು ಸಾಗಾಟ ವಾಹನ ಸಹಿತ ಅಗತ್ಯ ಕ್ರಮಗಳ ಹೆಚ್ಚಳವೂ ಆಗಬೇಕಾಗಿದೆ” ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.