ಸರ್ವಜನಾಂಗಕ್ಕೆ ಮೀಸಲಾತಿ ಕೊಟ್ಟ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡುವ ಮನಸ್ಥಿತಿಯಿಂದ ಹೊರ ಬಂದಾಗ ಮಾತ್ರ ಸಂವಿಧಾನ ಅರ್ಥವಾಗುತ್ತದೆ ಎಂದು ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ಹೇಳಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ಗ್ರಾಮಕ್ಕೆ ಬೃಹತ್ ಬೈಕ್ ಜಾಥ ಮೂಲಕ ಸಂವಿಧಾನ ರಥ ಆಗಮಿಸಿದ ವೇಳೆ ಜಾಥಾಕ್ಕೆ ಸ್ವಾಗತಿಸಿ ಮಾತನಾಡಿದರು.
“ಸಂವಿಧಾನ ಎಂಬ ಮಹಾನ್ ಗ್ರಂಥವು ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಆದರೆ ಕೆಲ ಸಂಕುಚಿತ ಮನೋಭಾವ ಹೊಂದಿರುವ ವ್ಯಕ್ತಿಗಳು ದಲಿತ ಎಂಬ ಕಾರಣಕ್ಕೆ ಇಂದಿಗೂ ಅಂಬೇಡ್ಕರ್ ಅವರನ್ನು ಕೀಳರಿಮೆಯಲ್ಲಿ ಕಾಣುವುದು ಸರಿಯಲ್ಲ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳದವರಿಂದ ಅಪಪ್ರಚಾರ ನಡೆಯುತ್ತಿದೆ. ಶೇ.50 ಮೀಸಲಾತಿಯಲ್ಲಿ ಎಸ್ಸಿ/ಎಸ್ಟಿಗೆ ಕೇಲವ ಶೇ.20ರಷ್ಟು ಮೀಸಲಾತಿ ಇದ್ದು, ಶೇ.30ರಷ್ಟು ಮೀಸಲಾತಿಯನ್ನು ಯಾರಿಗೆ ನೀಡಿದ್ದಾರೆಂಬುದನ್ನು ಅರಿತುಕೊಳ್ಳುತ್ತಿಲ್ಲ. ಅದಕ್ಕಾಗಿ ಜಾಗೃತಿ ಅಗತ್ಯವಾಗಿದೆ” ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನಕುಮಾರ್ ಮಾತನಾಡಿ, “ಅಂಬೇಡ್ಕರ್ ಅವರು ನಮಗಾಗಿ ಓಟು ಮಾಡುವ ನೋಟು ಚಲಾಯಿಸುವ ಅಷ್ಟೆ ಅಲ್ಲದೆ, ಸೂಟು ಬೂಟು ಧರಿಸಿ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಹಕ್ಕು ಕೊಟ್ಟಿದ್ದಾರೆ. ಅದನ್ನು ಮರೆತ ಕೆಲವರು ಅಂಬೇಡ್ಕರ್ ಕಂಡರೆ ದೂರ ಸರಿಯುವುದು ಯಾಕೆಂದು ಅರ್ಥ ಆಗುತ್ತಿಲ್ಲ. ಅವರು ಕೊಟ್ಟ ಭಿಕ್ಷೆಯಿಂದ ಮೀಸಲಾತಿ ಪಡೆದು ಅಧಿಕಾರ ಅನುಭವಿಸಿದ ವ್ಯಕ್ತಿಗಳೇ ಅವರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಜಾಥವು ತಾಲೂಕಿನಲ್ಲಿ ಹೆಚ್ಚಿನ ಅರಿವು ಮೂಡಿಸಿ ಸಂಚಲನ ಸೃಷ್ಟಿಸಿದೆ. ಜತೆಗೆ ಅನೇಕ ಮನಸುಗಳಿಗೆ ಅರಿವು ಮೂಡಿಸಿದೆ. ಈಗಲಾದರೂ ಸಂವಿಧಾನವನ್ನು ಓದುವಂತಹ ಅಭ್ಯಾಸ ಮಾಡಿದರೆ ಒಳ್ಳೆಯ ಬೆಳವಣಿಗೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ ಸತೀಶ್ ಮಾತನಾಡಿ, “ಸಂವಿಧಾನಕ್ಕೂ ಜಾತಿ ಸಂಕೋಲೆ ಅಂಟಿಕೊಂಡಿದೆ. ಪಟ್ಟಭದ್ರ ಹಿತಾಸಕ್ತಿಗಳು ಶೋಷಿತ ಸಮುದಾಯಗಳನ್ನು ಮೂಢನಂಬಿಕೆಗೆ ತಳ್ಳುತ್ತಾರೆ. ಆದರೆ ನೀವು ಜಾಗೃತವಾಗಿ ಸಂವಿಧಾನದ ಕಡೆ ನಡೆಯಬೇಕಿದೆ. ಕೇವಲ ಬಾಯಿಯಲ್ಲಿ ಮಾತ್ರ ಅಂಬೇಡ್ಕರ್ ತತ್ವ ಬೋಧನೆ ಮಾಡಿ, ಮನೆಯಲ್ಲಿ ಮನುವಾದ ಪೋಷಣೆ ಮಾಡಿದರೆ ಅರ್ಥವೇನು? ಇಂತಹ ಇಬ್ಬಂಗಿ ನೀತಿ ಬಿಟ್ಟು ಹೊರಬಂದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ” ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಬೀರೇಂದ್ರ ಕುಮಾರ್ ಮಾತನಾಡಿ, “ನಾಲ್ಕು ದಿನಗಳಿಂದ 22 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಸಂಚಾರ ಮಾಡಿದ ಜಾಗೃತಿ ರಥವು ಇಂದು ಕೊನೆಯದಾಗಿ ಅಸಗೋಡು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕೆ ತಲುಪಿದೆ. ನಾಲ್ಕು ದಿನಗಳ ಜಾಗೃತಿ ಜಾಥದಲ್ಲಿ ಅಂಬೇಡ್ಕರ್ ಚಿಂತಕರು, ಪ್ರಗತಿಪರ ಹೋರಾಟಗಾರರು, ಶಿಕ್ಷಕರು, ಉಪನ್ಯಾಸಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂವಿಧಾನ ಕುರಿತು ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ತಾಲೂಕಿನಲ್ಲಿ ಇದೊಂದು ಉತ್ತಮ ಕಾರ್ಯವಾಗಿ ಉಳಿದಿದೆ. ನಮಗೆ ಅಗತ್ಯ ಸಲಹೆ ಸಹಕಾರ ನೀಡಿದ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಹಾಗೂ ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒ, ಪಟ್ಟಣ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗೂ ಎಲ್ಲ ಶಾಲಾ ಕಾಲೇಜಿನ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು, ಮಾಧ್ಯಮ ಸ್ನೇಹಿತರು, ಸಂಘ ಸಂಸ್ಥೆ ಮುಖಂಡರು, ಹಲವು ಗ್ರಾಮಗಳ ನಾಗರಿಕರು ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಿರುವುದು ಅಭಿನಂದನೀಯ” ಎಂದರು.
ಜಾಥಕ್ಕೂ ಮುನ್ನ ಅಸಗೋಡು ದಲಿತ ಸಂಘರ್ಷ ಸಮಿತಿ ಶಾಖೆಯ ಪದಾಧಿಕಾರಿಗಳು ಬೃಹತ್ ಬೈಕ್ ಜಾಥಾ ನಡೆಸುವ ಮೂಲಕ ಸ್ವಾಗತಿಸಿಕೊಂಡು, ಜಗಳೂರು ಗಡಿ ದಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಶಾಲಾ ಶಿಕ್ಷಕರು ಸಂವಿಧಾನ ಕುರಿತು ಮಾತನಾಡಿದರೆ, ಕೆಲವರು ಕವನಗಳನ್ನು ವಾಚಿಸಿದರು. ವಿದ್ಯಾರ್ಥಿಗಳು ಅಂಬೇಡ್ಕರ್ ಜಾಗೃತಿ ಗೀತೆ ರೂಪಕ ಮಾಡಿದ್ದು ವಿಶೇಷವಾಗಿತ್ತು.
ಈ ಸುದ್ದಿ ಓದಿದ್ದೀರಾ? ಮೈಸೂರು | ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಅನ್ಯಾಯ ಪ್ರಶ್ನಿಸುತ್ತಿದೆ ಕರ್ನಾಟಕ
ಜಾಥಾದಲ್ಲಿ ಅಸಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಸದಸ್ಯರುಗಳಾದ ಸಾಹುಕಾರ್ ಬಸವರಾಜ್, ರವಿಕುಮಾರ್, ಬಸವರಾಜಪ್ಪ ಅಭಿವೃದ್ಧಿ ಅಧಿಕಾರಿ ಮರುಳಸಿದ್ದಪ್ಪ, ಅಸಗೋಡು ಪರುಶುರಾಮ್, ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಮಹಾಬಲೇಶ್ವರ, ಸೋಮಣ್ಣ ಕೌಲಾಪುರೆ, ರುಬಿಯಾ ಬಾನು, ಸಿಬ್ಬಂದಿ ವೆಂಕಟೇಶ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕುಬೇಂದ್ರಪ್ಪ, ವಿದ್ಯಾರ್ಥಿ ಮುಖಂಡ ಮಾದಿಹಳ್ಳಿ ಮಂಜುನಾಥ್ ಹಾಗೂ ಗ್ರಾಮಸ್ಥರು ಇದ್ದರು.