ಕೃಷಿ ಮಾಡಲು ಪಂಪ್ ಸೆಟ್ ಬಳಸುವ ರೈತರು ಸಬ್ಸಿಡಿ ಪಡೆಯಲು ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಆರ್ಇಸಿ) ಆದೇಶವನ್ನು ರದ್ದುಪಡಿಸ ಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
“ಪಂಪ್ಸೆಟ್ಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸಲಾಗುವುದು ಎಂದು ಕೆಆರ್ಇಸಿ ಆದೇಶದಲ್ಲಿ ರೈತರಿಗೆ ಎಚ್ಚರಿಕೆ ನೀಡಲಾಗಿದೆ. ಹೀಗೆ ಮಾಡಿದರೆ ಕಷ್ಟಪಟ್ಟು ಕೃಷಿ ಮಾಡುತ್ತಿರುವ ಸುಮಾರು 40 ಲಕ್ಷ ರೈತರ ಬದುಕಿಗೆ ತಣ್ಣೀರೆರಚಿದಂತಾಗುತ್ತದೆ” ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರೂ ಆಗಿರುವ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
“ಪಂಪ್ಸೆಟ್ಗಳಿಗೆ ಆಧಾರ್ ಲಿಂಕ್ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೆಆರ್ಇಸಿಗೆ ನಿರ್ದೇಶನ ನೀಡಿ, ರದ್ದುಗೊಳಿಸಬೇಕು. ಎಂದು ಒತ್ತಾಯಿಸಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ” ಎಂದು ಹೇಳಿದರು.
“ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಬೇಕು ಮತ್ತು ಶಾಸನವನ್ನು ತರಬೇಕು. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗಲೆಲ್ಲಾ ಉತ್ಪನ್ನಗಳನ್ನು ಎಂಎಸ್ಪಿಗೆ ಖರೀದಿಸಬೇಕು. ಆಸ್ಪತ್ರೆಗಳು, ವಸತಿ ನಿಲಯಗಳು, ಕಾರಾಗೃಹಗಳು ಮತ್ತು ಅಂಗನವಾಡಿಗಳು ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಸಂಘಗಳಿಂದ ನೇರವಾಗಿ ಖರೀದಿಸಿ, ಈ ಸಂಘಗಳನ್ನು ಬಲಪಡಿಸಬೇಕು. ಜೊತೆಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವಂತೆ ಮಾಡಬೇಕು” ಎಂದು ಒಕ್ಕೂಟವು ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ರದ್ದು; ಕ್ರೀಡಾಪಟುಗಳ ಆಕ್ರೋಶ
“ರೈತರಿಗೆ ಬ್ಯಾಂಕ್ ಸಾಲ ನೀಡುವಾಗ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್(ಸಿಬಿಲ್) ಅಂಕವನ್ನು ಪರಿಗಣಿಸುವ ವ್ಯವಸ್ಥೆಯನ್ನು ತೆಗೆದುಹಾಕುವುದು, ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ರದ್ದುಪಡಿಸುವುದು, ರೈತರು ಅರಣ್ಯ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿಯನ್ನು ಕ್ರಮಬದ್ಧಗೊಳಿಸುವುದು ಮತ್ತು ಕಳಸಾ – ಬಂಡೂರಿ ನಾಲಾ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು ಸೇರಿದಂತೆ ರೈತರ ಇತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಶಾಂತಕುಮಾರ್ ಪಟ್ಟಿ ಮಾಡಿದರು.