- 23 ವರ್ಷಗಳಿಂದ ಕೊಡಗು ವಿದ್ಯಾರ್ಥಿಗಳ ವಿಶೇಷ ಆಯ್ಕೆ ನಡೆಯುತ್ತಿದೆ
- ಮೂವರು ಬಾಲಕಿಯರು ಸೇರಿ 18 ವಿದ್ಯಾರ್ಥಿಗಳ ಆಯ್ಕೆ ರದ್ದು ಮಾಡಲಾಗಿದೆ
ರಾಜ್ಯ ಮಟ್ಟದ ತಂಡಗಳಿಗೆ ಕೊಡಗು ಕ್ರೀಡಾಪಟುಗಳ ವಿಶೇಷ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸುವ ನಿರ್ಧರಿಸಲಾಗಿದೆ. ಇದರಿಂದಾಗಿ ಆಯ್ಕೆಯಾದ ಮೂವರು ಬಾಲಕಿಯರು ಸೇರಿದಂತೆ 18 ವಿದ್ಯಾರ್ಥಿಗಳನ್ನು ತೆಗೆದುಹಾಕಿರುವುದರಿಂದ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಕಿಡಿಕಾರಿದ್ದಾರೆ.
“ಕೊಡಗು ಜಿಲ್ಲೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಟಗಾರರನ್ನು ಹೊಂದಿದ್ದು, ಅವರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದಾರೆ. ಪೊನ್ನಂಪೇಟೆಯಲ್ಲಿ ಕಳೆದ 23 ವರ್ಷಗಳಿಂದ ಕೊಡಗು ವಿದ್ಯಾರ್ಥಿಗಳ ವಿಶೇಷ ಆಯ್ಕೆ ನಡೆಯುತ್ತಿದೆ. ಆಯ್ಕೆಯನ್ನು ರದ್ದುಗೊಳಿಸುವ ನಿರ್ಧಾರದ ಹಿಂದೆ ಹಿರಿಯ ಅಧಿಕಾರಿಗಳ ಕೈವಾಡವಿದೆ” ಎಂದು ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಆರೋಪಿಸಿದ್ದಾರೆ.
“ರಾಷ್ಟ್ರ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಗಳು ಒಗ್ಗೂಡಿದಾಗ ಕೊಡಗಿನ ಕ್ರೀಡಾಪಟುಗಳಿಗೆ ಅವಕಾಶಗಳು ಕಡಿಮೆಯಾಗುವ ಸಾಧ್ಯತೆಯಿದೆ. ಪೊನ್ನಂಪೇಟೆ ಶಾಲೆಯಲ್ಲಿ ರಾಜ್ಯ ತಂಡಗಳಿಗೆ ಕೊಡಗು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲು ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಂಡಿದ್ದನ್ನು 2001ರಲ್ಲಿ ಕರ್ನಾಟಕ ಸರ್ಕಾರ ಅನುಮೋದಿಸಿತ್ತು” ಎಂದು ಅರುಣ್ ಮಾಚಯ್ಯ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸುವರ್ಣಾವತಿ ಜಲಾಶಯದಲ್ಲಿ ಟ್ರಯಲ್ ಬೋಟಿಂಗ್
“ಕೂಡಿಗೆಯಲ್ಲಿ ರಾಜ್ಯಮಟ್ಟದ ಕ್ರೀಡಾ ಶಾಲೆ ನಡೆಯುತ್ತಿದ್ದು, ರಾಜ್ಯಮಟ್ಟದಲ್ಲಿ ಆಡುವ ಕ್ರೀಡಾಪಟುಗಳನ್ನು ಅಲ್ಲಿಂದಲೇ ಆಯ್ಕೆ ಮಾಡಲಾಗುತ್ತದೆ. ಮಡಿಕೇರಿಯ ಸಾಯಿ ಸ್ಪೋರ್ಟ್ಸ್ ರೆಸಿಡೆನ್ಷಿಯಲ್ ಶಾಲೆಯಿಂದ ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿಥಿರ ಧರ್ಮಜ ಉತ್ತಪ್ಪ ಮತ್ತು ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಕೂಡ ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ತೆಗೆದುಕೊಂಡ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದರು.