ಬರಪೀಡಿತವೆಂದು ಘೋಷಣೆಯಾದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಮೇವು ಸೇರಿದಂತೆ ಗ್ರಾಮಸ್ಥರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ನೀರಸಾಗರ ಹಾಗೂ ಬೆಣಚಿ ಕೆರೆ ವೀಕ್ಷಣೆ ಸೇರಿದಂತೆ ಬೆಲವಂತರ, ಸೋಮನಕೊಪ್ಪ, ಮುಕ್ಕಲ ಗ್ರಾಮಗಳಿಗೆ ಭೇಟಿ ನೀಡಿ ನೀರು, ಮೇವು ಸ್ಥಿತಿಗತಿ ಬಗ್ಗೆ ಪರಿಶೀಲಿಸಿದ ವೇಳೆ ಮಾತನಾಡಿದರು.
“ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳಿಗೆ ಖಾಸಗಿ ಮಾಲೀಕರಿಂದ ಬೋರ್ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದ್ದು, 9 ಗ್ರಾಮ ಪಂಚಾಯಿತಿಯ 13 ಗ್ರಾಮಗಳಿಗೆ ಒಟ್ಟು 27 ಖಾಸಗಿ ಕೊಳವೆ ಬಾವಿಗಳ ಮೂಲಕ ಅಗತ್ಯ ನೀರು ಪೂರೈಸಲಾಗುತ್ತಿದೆ” ಎಂದರು.
ಜಿಲ್ಲಾಧಿಕಾರಿಯವರು ಬೆಣಚಿ ಕೆರೆಗೆ ಭೇಟಿ ನೀಡಿದ್ದು, “ಕಲಘಟಗಿ ಪಟ್ಟಣಕ್ಕೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು” ಎಂದು ಕಲಘಟಗಿ ಪಟ್ಟಣ ಪಂಚಾಯತ್ ಎಂಜಿನಿಯರ್ ಅಕ್ಕಮಹಾದೇವಿ ತಡಸ ಅವರಿಗೆ ತಿಳಿಸಿದರು.
24*7 ಯೋಜನೆಯಡಿ ಇನ್ನೂ ಎರಡು ಎತ್ತರದ ಟ್ಯಾಂಕ್ಗಳನ್ನು ನಿರ್ಮಿಸಲು ಟೆಂಡರ್ ಮಾಡಲಾಗಿದ್ದು, ಕಾಮಗಾರಿ ಪೂರ್ಣಗೊಂಡಲ್ಲಿ ಕಲಘಟಗಿ ಪಟ್ಟಣದ 17 ವಾರ್ಡಗಳಿಗೆ ಪ್ರತಿದಿನ ನೀರು ಸರಬರಾಜು ಮಾಡಲಾಗುವುದೆಂದು ತಡಸ ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹುಬ್ಬಳ್ಳಿ ಹಾಗೂ ಕುಂದಗೋಳಕ್ಕೆ ಕುಡಿಯುವ ನೀರಿನ ಮೂಲವಾಗಿರುವ ನೀರಸಾಗರ ಜಲಾಶಯಕ್ಕೆ ಭೇಟಿ ನೀಡಿ, “ನೀರಿನ ಮಟ್ಟದ ಬಗ್ಗೆ ಜಲಮಂಡಳಿ ಹಾಗೂ ಕೆಯುಐಡಿಎಫ್ಸಿ ಸೂಪರಿಂಟೆಂಡೆಂಟ್ ಎಂಜಿನಿಯರ್ ತಿಮ್ಮಪ್ಪ ಅವರಿಂದ ಮಾಹಿತಿ ಪಡೆದುಕೊಂಡರು.
ಜಲಾಶಯದ ಒಟ್ಟು ಸಾಮರ್ಥ್ಯ 1.25 ಟಿಎಂಸಿ ಇದ್ದು, ಒಮ್ಮೆ ಸಂಪೂರ್ಣ ಭರ್ತಿಗೊಂಡರೆ 2 ವರ್ಷದವರೆಗೆ ನೀರು ಸರಬರಾಜು ಮಾಡಬಹುದು. ಸದ್ಯ ಜಲಾಶಯದಲ್ಲಿ 0.28 ಟಿಎಂಸಿ ನೀರು ಸಂಗ್ರಹವಿದ್ದು, ಜೂನ್- ಜುಲೈವರೆಗೆ ಯಾವುದೇ ಸಮಸ್ಯೆ ಇಲ್ಲವೆಂದು ಜಲಮಂಡಳಿ ಅಧಿಕಾರಿಗಳು ಜಿಲ್ಲಾಧಿಕಾರಿಗೆ ತಿಳಿಸಿದರು.
ಜಲಾಶಯದ ಸುತ್ತಲಿನ ಕೃಷಿಕರು ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ನಿಗಾವಹಿಸತಕ್ಕದ್ದು ಹಾಗೂ ಗ್ರಾಮಗಳಲ್ಲಿ ಡಂಗೂರ ಸಾರುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿ : ಜಿಲ್ಲಾಧಿಕಾರಿ
ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಹಂತದಲ್ಲೇ ಪರಿಹರಿಸಲು ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಕಲಘಟಗಿಯ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಅವರು ಇ-ಆಫೀಸ್, ಚುನಾವಣೆ ವಿಭಾಗ ಹಾಗೂ ಇತರೆ ವಿಭಾಗಗಳನ್ನು ಪರಿಶೀಲಿಸಿದ ಅವರು ಸಾರ್ವಜನಿಕರ ಅಹವಾಲುಗಳನ್ನು ವಿಳಂಬ ಮಾಡದೆ 15-20 ದಿನಗಳಲ್ಲಿ ಇತ್ಯರ್ಥಗೊಳಿಸಬೇಕು. ಚಿಕ್ಕ-ಚಿಕ್ಕ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಅಲೆಯದಂತೆ ಕಾರ್ಯನಿರ್ವಹಿಸಬೇಕು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಧ್ಯಪ್ರದೇಶದ ಕಳ್ಳರ ತಂಡದಲ್ಲಿದ್ದ ಬಾಲಕ ಪೊಲೀಸ್ ವಶಕ್ಕೆ
ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗೆ ಟ್ಯಾಬ್ ನೀಡುವ ಬಗ್ಗೆ ಯೋಚಿಸಲಾಗಿದೆ. ನೌಕರರು ಆಸಕ್ತಿಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ತಹಶೀಲ್ದಾರ್ ಕಚೇರಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸುವಂತೆ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಇವರಿಗೆ ತಿಳಿಸಿದರು.