ವಿದ್ಯುತ್ ಬಳಕೆದಾರರು ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು. ಹೆಸ್ಕಾಂ ನೀಡುವ ಗ್ರಾಹಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಗ್ರಾಹಕರ ಜಾಗೃತಿಗಾಗಿ ಹೆಸ್ಕಾಂ ಹಲವು ರೀತಿಯ ಕಾರ್ಯಕ್ರಮಗಳನ್ನು, ಕುಂದುಕೊರೆತೆಗಳ ಸೇವೆಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತಿದೆ ಎಂದು ಧಾರವಾಡ ನಗರ ಹೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಎಂ ನದಾಫ್ ಹೇಳಿದರು.
ಧಾರವಾಡ ಮಾಳಮಡ್ಡಿಯ ಕೆಇ ಬೋರ್ಡ್ ಸೆಂಟ್ರಲ್ ಸ್ಕೂಲ್ನಲ್ಲಿ ಹೆಸ್ಕಾಂ ನಗರ ವಿಭಾಗದಿಂದ ಆಯೋಜಿಸಿದ್ದ, ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಲು ನಗರದ ಎಲ್ಲ ಹೆಸ್ಕಾಂ ಉಪವಿಭಾಗಗಳಲ್ಲಿ ಗ್ರಾಹಕರ ಸಭೆಗಳನ್ನು ಸಂಘಟಿಸಲಾಗುತ್ತಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ವಿದ್ಯುತ್ ಅವಘಡಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಮಾಹಿತಿ ನೀಡಿದರೆ ಹೆಸ್ಕಾಂ ಸೂಕ್ತ ಕ್ರಮ ವಹಿಸುತ್ತದೆ” ಎಂದು ಹೇಳಿದರು.
“ವಿದ್ಯುತ್ ಬಳಕೆಯಲ್ಲಿ ಪಾಲಕರು, ಮಕ್ಕಳು ಜಾಗೃತಿ ವಹಿಸಬೇಕು. ಹಳೆಯ ಮತ್ತು ದುರಸ್ತಿ ಇರುವ ವಿದ್ಯುತ್ ಪರಿಕರಗಳನ್ನು ಬದಲಾಯಿಸಬೇಕು. ಕಾಲಕಾಲಕ್ಕೆ ವಿದ್ಯುತ್ ಬಿಲ್ ತುಂಬಬೇಕು. ಡಿಜಿಟಲ್ ಮೂಲಕ ಹೆಸ್ಕಾಂ ಬಿಲ್ ಪಾವತಿಸಲು ಆಸಕ್ತಿ ವಹಿಸಬೇಕು” ಎಂದು ಸಲಹೆ ನೀಡಿದರು.
“ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ ಯೋಜನೆಯನ್ನು ಗ್ರಾಹಕರು ಸಮಪರ್ಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದುಪಯೋಗ ಮಾಡಿಕೊಳ್ಳಬೇಕು. ಅನಗತ್ಯವಾಗಿ ವಿದ್ಯುತ್ ಬಳಕೆಯನ್ನು ನಿಲ್ಲಿಸಬೇಕು. ವಿದ್ಯುತ್ ಸರಬರಾಜು ದುರುಪಯೋಗವಾಗದಂತೆ ವಿದ್ಯುತ್ ಜಾಗೃತ ದಳವು ನಿರಂತರ ನಿಗಾವಹಿಸಿದೆ ಎಂದು ಕಾರ್ಯಪಾಲಕ ಅಭಿಯಂತರ ಎಂ.ಎಂ.ನದಾಫ್ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮನಲ್ಲ, ಭಾರತೀಯ ರಾಮ: ವಿಶ್ವನಾಥ್
ಕೆಇ ಬೋರ್ಡ್ ಸೆಂಟ್ರಲ್ ಸ್ಕೂಲ್ನ ಉಪ ಪ್ರಾಚಾರ್ಯ ಅಶ್ವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ನಗರ ಹೆಸ್ಕಾಂ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಟಿಂಗರಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮಮತಾ ದಾವಣಗೆರೆ ಸ್ವಾಗತಿಸಿದರು. ಹೆಸ್ಕಾಂ ಶಾಖಾಧಿಕಾರಿ ಮಹೇಶ ನಾಗನೂರ ವಂದಿಸಿದರು. ಪ್ರಾಣೇಶ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಮುಖಾಂತರ ಮನಮುಟ್ಟುವಂತೆ ಕಾರ್ಯಕ್ರಮ ನಡೆಸಿದರು. ಜತೆಗೆ ವಿದ್ಯುತ್ ಸುರಕ್ಷತಾ ಕ್ರಮದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿ, ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಕೆ ಇ ಬೋರ್ಡ ಸೆಂಟ್ರಲ್ ಸ್ಕೂಲ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಇದ್ದರು.