ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯಲ್ಲಿ 17 ಎಕರೆ ವಿಸ್ತಾರದಲ್ಲಿ ಎರಡು ಕೆರೆಗಳಿವೆ. ಅವುಗಳ ಒಟ್ಟು 10 ಎಕರೆ ಕೆರೆ ಅಂಗಳ ಪಾಳು ಬಿದ್ದಿತ್ತು. ಸದ್ಯ ಗ್ರಾಮದ ದೊಡ್ಡಕೆರೆ ಮತ್ತು ಸಣ್ಣಕೆರೆಗಳು ಮತ್ತೆ ಜೀವ ಕಳೆ ಪಡೆದುಕೊಳ್ಳುತ್ತಿದೆ.
ಗ್ರಾಮಸ್ಥರ ನೆರವಿನಿಂದ ಗ್ರಾಮ ಪಂಚಾಯತಿಯವರು 13.85 ಲಕ್ಷ ರೂ. ವೆಚ್ಚದಲ್ಲಿ ಬ್ಯಾಹಟ್ಟಿಯ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹೂಳು ತೆಗೆದಿದ್ದಾರೆ ಎಂದು ಬ್ಯಾಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಮತ್ತು ಉಪಾಧ್ಯಕ್ಷೆ ಮಧು ಕಲ್ಲಪ್ಪ ಮಾದ್ಯಮದವರಿಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸ ಆರಂಭವಾದ ಬಳಿಕ ಗ್ರಾಮದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, ಗ್ರಾಮದಲ್ಲಿನ ಟ್ರ್ಯಾಕ್ಟರ್ಗಳನ್ನು ಬಳಸಲಾಗುತ್ತಿದೆ.
ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಟ್ರ್ಯಾಕ್ಟರ್ಗಳ ಮೂಲಕ ರೈತರು ತಮ್ಮ ಜಮೀನುಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಒಂದೂವರೆ ತಿಂಗಳಲ್ಲಿ ಒಟ್ಟು 24 ಸಾವಿರ ಟ್ರ್ಯಾಕ್ಟರ್ ಮಣ್ಣು ಕೆರೆ ಅಂಗಳದಿಂದ ಎತ್ತಲಾಗಿದೆ. ಇದಕ್ಕಾಗಿ ರೈತರಿಂದ ಆಗಿರುವ ವೆಚ್ಚ 12 ಲಕ್ಷ ರೂ. ಎಂದು ಅವರು ತಿಳಿಸಿದರು.
ಸುಮಾರು 200ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ರಾತ್ರಿಯಿಂದಲೇ ಸರದಿ ನಿಂತುಕೊಂಡು ಮಣ್ಣು ತೆಗೆದುಕೊಂಡು ಹೋಗಿವೆ. 2023 ಡಿಸೆಂಬರ್ 5ರಿಂದ ಕೆರೆಗಳ ಹೂಳು ಎತ್ತುವ ಕೆಲಸ ಆರಂಭಿಸಲಾಗಿತ್ತು. 38 ದಿನಗಳಲ್ಲಿ ನಾಲ್ಕು ಅಡಿ ಹೂಳೆತ್ತಲಾಗಿದೆ. ದೊಡ್ಡ ಕೆರೆ ತುಂಬಿದ ಬಳಿಕ ಸಣ್ಣ ಕೆರೆಗೆ ಮಳೆನೀರು ಹಳ್ಳದ ಮೂಲಕ ಹರಿದು ಬರುವ ವ್ಯವಸ್ಥೆ ಮಾಡಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿ ಮಾಡುವ ಮೊದಲು ಬ್ಯಾಹಟ್ಟಯಲ್ಲಿ 18 ರೈತರು ಒಳಗೊಂಡ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಗಿತ್ತು. ನಂತರ ಗ್ರಾಮ ಪಂಚಾಯಿತಿಯಿಂದ ಅನುಮೋದನೆ, ಸಹಕಾರ ಪಡೆದು, ಕೆರೆ ಹೂಳೆತ್ತಲು ಮಾತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ಮಾಡುವ ಬಗ್ಗೆ ತಿಳಿಸಿ, ಮಣ್ಣಿನ ಸಾಗಣೆ ಸ್ವಂತ ಖರ್ಚಿನಲ್ಲಿ ನಡೆಯಬೇಕು ಎಂದು ಹೇಳಿ, ಎಲ್ಲರ ಒಪ್ಪಿಗೆಯ ನಂತರ ಕಾರ್ಯಾರಂಭಿಸಿದ್ದರು ಗ್ರಾಮಸ್ಥರು.