ಉಚಿತ ಪ್ರಯಾಣ ಯೋಜನೆಗಳ ಪ್ರಯೋಗಗಳು ವಿಶ್ವದ ನಾನಾ ನಗರಗಳಲ್ಲಿ ನಡೆದಿವೆ. ಉಚಿತದಿಂದಾಗಿ ಸೇವಾಗುಣಮಟ್ಟ ಕುಸಿದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆ ಹೆಚ್ಚದೆ ಹೋದದ್ದರಿಂದ ರೋಸಿ ಹೋಗಿ ಜನ ಮತ್ತೆ ಕಾರುಗಳ ಮೊರೆ ಹೋದ ಘಟನೆಗಳು ನಡೆದಿವೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನಮ್ಮಲ್ಲಿ ಒಂದು ಚುನಾವಣೆಯ ವಿಷಯ. ಆಳುವ ಪಕ್ಷಕ್ಕೆ ಇದೊಂದು ಜನಪ್ರಿಯತೆಯ ಯೋಜನೆಯಾದರೆ, ವಿರೋಧ ಪಕ್ಷಗಳಿಗೆ ‘ಇದು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ಯೋಜನೆ’.
ನಮ್ಮ ರಾಜಕೀಯ ಪಕ್ಷಗಳಿಗೆ ಈ ಎರಡೂ ಯೋಚನೆಗಳನ್ನು ಮೀರಿದ ಆಯಾಮಗಳತ್ತ ಗಮನವೇ ಇಲ್ಲ. ಈ ಉಚಿತ ಬಸ್ ಪ್ರಯಾಣ ಕೇವಲ ಲಾಭ-ಹಾನಿಯ ಲೆಕ್ಕಾಚಾರ ಹೊಂದಿಲ್ಲ. ನಗರಗಳ ವಾಹನ ಸಂದಣಿ, ಟ್ರಾಫಿಕ್ ಜಾಮ್, ಹೆಚ್ಚುತ್ತಿರುವ ವಾಯು-ಶಬ್ದ-ದೃಷ್ಟಿ ಮಾಲಿನ್ಯ, ರಸ್ತೆ ಅಪಘಾತಗಳಂಥ ಜ್ವಲಂತ ಸಮಸ್ಯೆಗಳನ್ನು ನಿಯಂತ್ರಿಸುವ ಶಕ್ತಿ ಈ ಯೋಜನೆಗಿದೆ. ದ್ವಿಪಥ, ಚತುಷ್ಪಥ, ದಶಪಥ ಹೆದ್ದಾರಿಗಳು, ಫ್ಲೈ-ಓವರ್, ಅಂಡರ್-ಪಾಸ್, ವಾಯುಮಾಲಿನ್ಯ ಮತ್ತು ಅಪಘಾತದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೂಡಬೇಕಾಗಿರುವ ಹಣಕ್ಕಿಂತ ಕಡಿಮೆ ಮೊತ್ತದಲ್ಲಿ ಉಚಿತ ಬಸ್ ಪ್ರಯಾಣ ಒದಗಿಸಲು ಸಾಧ್ಯವಿದೆ. ಆಡಳಿತಕ್ಕೆ ದೂರದೃಷ್ಟಿ ಬೇಕಷ್ಟೆ.
ಸಾರ್ವಜನಿಕ ಸಾರಿಗೆಯನ್ನು ಫೆಬ್ರವರಿ ೨೦೨೦ರಿಂದ ದರಮುಕ್ತಗೊಳಿಸಿದ ಜಗತ್ತಿನ ಮೊದಲ ದೇಶ ಲಕ್ಸಂಬರ್ಗ್ನ ಉದಾಹರಣೆ ನಮ್ಮ ಮುಂದಿದೆ. ಪ್ರತಿ ಸಾವಿರ ಜನಕ್ಕೆ 696 ಕಾರು ಸಾಂದ್ರತೆಯನ್ನು ಹೊಂದಿದ್ದ ಆ ದೇಶ, ಈಗ ಕಾರುಗಳ ಸಾಂದ್ರತೆಯನ್ನು ೬೮೧ಕ್ಕೆ ಇಳಿಸಿಕೊಂಡಿದೆ. ಇರುವಷ್ಟು ಕಾರುಗಳು ಮೊದಲಿನಂತೆ ಚಿಕ್ಕಪುಟ್ಟ ಕೆಲಸಕ್ಕೆಲ್ಲ ರಸ್ತೆಗೆ ಇಳಿಯುತ್ತಿಲ್ಲ. ಜಗತ್ತಿನಲ್ಲಿಯೇ ಅತಿ ಹೆಚ್ಚು ವೈಯಕ್ತಿಕ ಆದಾಯ (ಪರ್ ಕ್ಯಾಪಿಟಾ ಇನ್ಕಮ್) ಹೊಂದಿದ್ದ ಆ ದೇಶದ ೬.೪೦ ಲಕ್ಷ ಜನ ಶುದ್ಧ ಗಾಳಿ ಸಿಗದೇ ಪರದಾಡುತ್ತಿದ್ದರು. ಈಗ ಅವರಲ್ಲಿ ಆರೋಗ್ಯ ಸಂಬಂಧಿ ಖರ್ಚು ಕಡಿಮೆಯಾಗಿದೆ.
ಉಚಿತ ಸಾರ್ವಜನಿಕ ಸಾರಿಗೆಯ ಚರ್ಚೆ-ಪ್ರಯೋಗಗಳು 1971ರಿಂದ ಪ್ರಾರಂಭವಾಗಿವೆ. ರೋಮ್ ನಗರದ ಮೊದಲ ಪ್ರಯೋಗದ ನಂತರ ವಿಶ್ವದ ಹಲವು ನಗರಗಳು ಆಗಾಗ ಪ್ರಯೋಗ ನಡೆಸುತ್ತಲೇ ಇವೆ. ಕೆಲವೆಡೆ ಇಂಥ ಉಚಿತ ಕೊಡುಗೆಯ ನಂತರ ಕಾರುಗಳ ಸಂಖ್ಯೆ ಹೆಚ್ಚಾಗಿ ಪರಿಸರ ಮಾಲಿನ್ಯ ಹೆಚ್ಚಿದ ಉದಾಹರಣೆಗಳೂ ಇವೆ. ಹೇಗೆಂದರೆ ಉಚಿತದಿಂದಾಗಿ ಸೇವಾಗುಣಮಟ್ಟ ಕುಸಿದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆ ಹೆಚ್ಚದೆ ಹೋದದ್ದರಿಂದ ರೋಸಿ ಹೋಗಿ ಜನ ಮತ್ತೆ ಕಾರುಗಳ ಮೊರೆ ಹೋದ ಘಟನೆಗಳು ನಡೆದಿವೆ.
ನಾವು ಉಚಿತ ಬಸ್ ಪ್ರಯಾಣವನ್ನು ಬಿಟ್ಟಿ ಯೋಜನೆ ಎಂದು ರಾಜಕೀಯವಾಗಿ ಜರೆಯುತ್ತಿರುವಾಗ, ವಿಶ್ವ ಈಗ ಸುಸ್ಥಿರ ಸಾರ್ವಜನಿಕ ಸಾರಿಗೆಯ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಹಾಗಾಗಿಯೇ ಸ್ಯಾನ್ಫ್ರಾಸಿಸ್ಕೋದಂಥ ನಗರಗಳು ಫ್ಲೈ-ಓವರ್ಗಳನ್ನೂ ಒಡೆದು ಹಾಕಿ ಸಾರ್ವಜನಿಕ ಸಾರಿಗೆಗೆ ಮಹತ್ವ ನೀಡುತ್ತಿವೆ. ಸ್ವಂತದ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಸುವುದರಿಂದ ಶೇ.45 ರಷ್ಟು ಕಾರ್ಬನ್ ಬಿಡುಗಡೆಯನ್ನು ತಪ್ಪಿಸಬಹುದು ಎನ್ನುತ್ತದೆ ಅಮೇರಿಕಾದ ಒಂದು ಸಂಶೋಧನೆ. ಭಾರತದ ರಸ್ತೆ ಸಾರಿಗೆ ಸಚಿವಾಲಯದ ಅಂಕಿ-ಸಂಖ್ಯೆಗಳೇ ಹೇಳುವಂತೆ ದೇಶದ ರಸ್ತೆಗಳ ಶೇ ೮೫ರಷ್ಟು ಜಾಗವನ್ನು ಶೇ. ೧೫ರಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಕಾರು-ಬೈಕ್ ಕಬಳಿಸಿದ್ದರೆ, ಶೇ. ೮೫ರಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಬಸ್ಸುಗಳು ಕೇವಲ ಶೇ. ೧೫ರಷ್ಟು ರಸ್ತೆಯ ಜಾಗದಲ್ಲಿ ಸಂಚರಿಸುತ್ತಿವೆ! ಅಂದರೆ ಸ್ವಂತದ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸಿದರೆ ನಮಗೆ ಈಗ ಇರುವ ರಸ್ತೆಗಳಲ್ಲೇ ಬಸ್ಸುಗಳಿಗೆ ಶೇ.85 ರಷ್ಟು ಹೆಚ್ಚುವರಿ ಜಾಗ ಸಿಗುತ್ತದೆ!
ಈ ಅಂಕಣ ಓದಿದ್ದೀರಾ?: ಬಡವರಿಗೆ ನೀಡಿದರೆ ‘ಬಿಟ್ಟಿ’, ಕೋಟ್ಯಾಧೀಶರಿಗೆ ನೀಡಿದರೆ ‘ಪ್ರೋತ್ಸಾಹಕ’…!
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಪ್ರಕಾರ ಕರ್ನಾಟಕದಲ್ಲಿ ಶೇ.9.10 ಮನೆಗಳಲ್ಲಿ ಕಾರುಗಳಿವೆ. ಇದು ರಾಷ್ಟ್ರೀಯ ಸರಾಸರಿ ಶೇ.7.50ಕ್ಕಿಂತ ಹೆಚ್ಚಿರುವುದು ಚಿಂತನೀಯ ಸಂಗತಿ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಉಚಿತ ಬಸ್ ಪ್ರಯಾಣವನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ಕರ್ನಾಟಕ ಸರಕಾರದ ಕ್ರಮ ಇಡೀ ದೇಶಕ್ಕೇ ಮಾದರಿಯಾಗಬಲ್ಲದು. ಉಚಿತ ಬಸ್ ಪ್ರಯಾಣವೆಂದರೆ ತಾನು ಕೊಡುವ ದಾನ ಎಂದು ಭಾವಿಸದೇ, ಪರಿಸರ, ಟ್ರಾಫಿಕ್ ಜಾಮ್, ಅಪಘಾತಗಳ ಹಿನ್ನೆಲೆಯಲ್ಲಿ ಇದೊಂದು ಪವಿತ್ರ ಕರ್ತವ್ಯ ಎಂದು ರಾಜ್ಯ ಸರಕಾರದ ಭಾವಿಸಬೇಕಿದೆ. ಆಗ ಮಾತ್ರ ಬಡವರಲ್ಲದೆ ಬೈಕ್-ಕಾರುಗಳಲ್ಲಿ ಸಂಚರಿಸುವ ಮಾಧ್ಯಮ ಮತ್ತು ಶ್ರೀಮಂತ ವರ್ಗದವರೂ ಬಸ್ ಹತ್ತಬಹುದು.
ಅತ್ತ ಸಾರಿಗೆ ಸಂಸ್ಥೆಗಳು ಹಾನಿಗೊಳಗಾಗದಂತೆ, ನೌಕರರೂ ಸಂಕಷ್ಟಕ್ಕೀಡಾಗದಂತೆ, ಪ್ರಯಾಣಿಕರೂ ಬೇಸರಗೊಳ್ಳದಂತೆ ಉಚಿತ ಬಸ್ ಪ್ರಯಾಣವನ್ನು ಖಚಿಗೊಳಿಸಬೇಕಿದೆ. ಮಹಿಳೆಯರಿಗೆ ಉಚಿತ ಸೇವೆ ಒದಗಿಸುವುದುರ ಜೊತೆಗೆ ಪುರುಷರಿಗೂ ಸರಕಾರಿ ಆಸ್ಪತ್ರೆಗಳ ಮಾದರಿಯಲ್ಲಿ ಸಾಂಕೇತಿಕ ಶುಲ್ಕ ವಿಧಿಸಿ ಪ್ರಯಾಣ ಸೇವೆ ಒದಗಿಸಿದರೆ, ಹೆಚ್ಚಿನ ರಸ್ತೆ ನಿರ್ಮಾಣ, ಅಗಲಿಕರಣ, ಫ್ಲೈಓವರ್, ಅಂಡರ್-ಪಾಸ್ ಗಳಿಗೆ ಕೋಟಿಗಟ್ಟಲೇ ಹಣ ವ್ಯಯಿಸಬೇಕಿಲ್ಲ, ರೈತರ ಭೂಮಿಯನ್ನು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಬೇಕಿಲ್ಲ.
Nice article. The govt must provide free buses to the Railway station and inter- state bus stands . Many countries have adopted such a system to free the roads from traffic jams and reduce pollution. I think if busses are made senior citizen friendly more people will use public transport.
Very good analysis. But our political people never think in that angle.
ಪರಿಸರ ಕಾಳಜಿಯನ್ನೂಳಗೊಂಡಂತೆ ಹಲವಾರು ವಿಷಯಗಳ ಒಳನೋಟದ ಲೇಖನ.
ಉತ್ತಮ ಲೇಖನ ಸರ್ ಉತ್ತಮ ರೀತಿಯಲ್ಲಿ ಅಂಕಿ ಅಂಶದೊಂದಿಗೆ ವಿಶ್ಲೇಷಣೆ ಮಾಡಿರೋದು ಶ್ಲಾಘನಿಯ
Enthaha vishayagalana nagarikarige arivu mudisuva agathya ide Bengaluru antha maha nagaragalige e yojane agathya ide anisuthide
ಪ್ರಬುದ್ಧ ಲೇಖನವನ್ನು ಬರೆದಿದ್ದೀರಿ.ಸರಕಾರ ಇದನ್ನು ಗಂಭೀರವಾಗಿ ಪರಿಶೀಲಿಸಬೇಕು.👍
Hi I’m mahammad Ashfak Bankapur I’m studing in 9th standard I had problem to study we have no good Facility in Our village
Okay, what do you expect from us? If you can give your phone number one of our coordinators will call you.