ಗ್ರಾಮೀಣ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಕೆಲಸವಿಲ್ಲದೇ ಗುಳೆ ಹೋಗುತ್ತಾರೆ. ಅದನ್ನು ತಪ್ಪಿಸಲು ಮನರೇಗಾ ಕಾಯಕ ಬಂಧುಗಳ ಸಹಕಾರ ಬಹಳ ಮುಖ್ಯ. ಪ್ರತಿ ಮನೆಗೆ ಹೋಗಿ ಮನರೇಗಾ ಅಡಿಯಲ್ಲಿ ಏಪ್ರಿಲ್ 1ರಿಂದ ಸಮುದಾಯ ಕಾಮಗಾರಿ ಪ್ರಾರಂಭವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ ಗುಳೆ ತಪ್ಪಿಸಿ ಎಂದು ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ವಿ.ಎಸ್ ಸಜ್ಜನ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯ ಕಾಯಕ ಬಂಧುಗಳ ಸಭೆ ಜರುಗಿಸಿದ ಬಳಿಕ ಮತದಾನ ಪ್ರತಿಜ್ಞಾವಿಧಿ ಭೋದಿಸಲಾಯಿತು.
ನಂತರ ಜಿಲ್ಲಾ ಮಾಹಿತಿ ಶಿಕ್ಷಣ & ಸಂವಹನ ಸಂಯೋಜಕ ವಿ.ಎಸ್. ಸಜ್ಜನ ಗ್ರಾಮ ಪಂಚಾಯತಿಯಲ್ಲಿ ʼವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿʼ ಅಭಿಯಾನದಡಿ ಕಾಯಕ ಬಂಧುಗಳ, ಸ್ವಸಹಾಯ ಸಂಘಗಳ ಸದಸ್ಯರ ಕೂಲಿಕಾರರ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಎಪ್ರಿಲ್ 1ರಿಂದ ನಿಮ್ಮ ಗ್ರಾಮದಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಜಿ.ಪಂ ಸಿಇo ಅವರು ತಿಳಿಸಿದ್ದಾರೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಲಸ ಪ್ರಾರಂಭವಾಗುತ್ತದೆ.
ಕಾಯಕ ಬಂಧುಗಳಾದ ತಾವೆಲ್ಲರೂ ಕೂಲಿಕಾರರ ಆರ್ಥಿಕ ಸಬಲತೆಗಾಗಿ ದುಡಿಯಬೇಕು. ಬಂಧು ಅಂದರೆ ಜನರಿಗೆ ಹತ್ತಿರ ಇದ್ದವರು ಅಂತಾ ಅರ್ಥ ಹಾಗಾಗಿ ದುಡಿಯುವ ವರ್ಗಕ್ಕೆ ಹತ್ತಿರ ಇರುವ ತಮಗೆ ಕಾಯಕ ಬಂಧುಗಳು ಎನ್ನಲಾಗುತ್ತದೆ. ಕೆಲಸದ ಸ್ಥಳದಲ್ಲಿ ನೀರು, ನೆರಳು ಸೇರಿದಂತೆ ಮಕ್ಕಳಿಗಾಗಿಯೇ ಗ್ರಾಮದಲ್ಲಿ ಕೂಸಿನ ಮನೆ ಸಹ ತೆರಯಲಾಗಿದ್ದು ಪಾಲಕರು ಮಕ್ಕಳನ್ನು ಅಲ್ಲಿ ಬಿಟ್ಟು ಹೋಗಬೇಕು ಅದನ್ನು ನೀವು ಜನರಿಗೆ ತಿಳಿಸಬೇಕು ಎಂದರು. ಮುಖ್ಯವಾಗಿ ಕೆಲಸಕ್ಕೆ ಬಂದವರಿಗೆ ಅಳತೆ ತಕ್ಕ ಹಾಗೆ ಕಡೆಯುವದು ಕಡ್ಡಾಯ, ಒಬ್ಬರಿಗೆ ಒಂದು ಅಳತೆ ಮತ್ತೊಬ್ಬರಿಗೆ ಒಂದು ಅಳತೆ ಹೀಗೆ ತಾರತಮ್ಯ ಮಾಡದ ಹಾಗೆ ಕೆಲಸ ಮಾಡುವದು ತಮ್ಮ ಕರ್ತವ್ಯ ದಯವಿಟ್ಟು ಪಾಲಿಸಿ ಅಂತಾ ಮನವಿ ಮಾಡಿದರು.
ಕೊನೆಯಲ್ಲಿ ಕಡ್ಡಾಯವಾಗಿ ಈಬಾರಿ ಗ್ರಾಮ ಪಂಚಾಯತಿ ಯಿಂದ ನೊಂದಾಯಿಸಲ್ಪಟ್ಟ ಕುಟುಂಬ ಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಲ್ಲದ ಇರುವವರನ್ನು ಗುರುತಿಸಿ ಸದರಿಯವರನ್ನು ಪಾಲ್ಗೊಳ್ಳುವಂತೆ ಮಾಡಲು ಮನೆ ಮನೆಗೆ ತೆರಳಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಶೃಂಗೇರಿ, ತಾಲೂಕ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ಮಂಜುನಾಥ, ಬಿಎಫ್ಟಿ ಈರಣ್ಣ ಬೆಲೇರಿ, ಜಿಕೆಎಮ್ ಚಾಂದಬಿ ಕರ್ನಾಚಿ ಗ್ರಾಮ ಪಂಚಾಯತಿ ಸದಸ್ಯರು, DIEC, IEC, BFT, GKM ಸೇರಿದಂತೆ ಕಾಯಕ ಬಂಧುಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.