ವಿದ್ಯಾರ್ಥಿಗಳಿಗೆ ಲೇಖಕರೊಂದಿಗೆ ಬರಹಗಾರರೊಂದಿಗೆ ಪರಿಚಯ ಆಗಬೇಕು. ಆಗ ಅವರಿಗೆ ಕಾವ್ಯ ಹಾಗೂ ಕವಿ ಆಪ್ತತೆಯ ಭಾವ ಮೂಡುತ್ತದೆ. ಬದುಕಿನ ಅನುಭವ ಇಲ್ಲದೆ ಕವಿ ಆಗಲಾರ. ಲೇಖಕನಾಗಲು ತಪಸ್ಸು ಮಾಡಬೇಕಿಲ್ಲ. ಆಡುತ್ತಾ ನಗುತ್ತಾ ನಗುತ್ತಾ ಅನುಭವದಿಂದ ಕವಿತೆ ಹುಟ್ಟುತ್ತದೆ. ಬೇಂದ್ರೆಯವರ ವೇಷ ಭೂಷಣ ನೋಡಿದರೆ ಇವರೇನಾ ಅನಿಸುತ್ತದೆ. ಅವರ ಹತ್ತಿರ ಹೋಗಿ ಮಾತನಾಡಸಬೇಕು. ಆಗ ಅವರ ಕಾವ್ಯ ದಕ್ಕುತ್ತದೆ ಎಂದು ಪ್ರೊ. ಆರೀಫ್ ರಾಜಾ ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ವೀರಪ್ಪ ಸಂಕನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನಿಡಗುಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ, ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ- ೫೦ರ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಕಾಲೀನ ಕನ್ನಡ ಕಾವ್ಯ ಪರಂಪರೆ ವಿಷಯದ ಕುರಿತು ಪ್ರೊ. ಆರೀಫ್ ರಾಜಾ ಅವರು ವಿಷಯ ಮಂಡಿಸುತ್ತಾ, “ಪ್ರಪಂಚದಲ್ಲಿ ಶಾಶ್ವತವಾದಂತಹದ್ದು ಇದೆ. ಏನದು? ಎಂದು ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತಾ ಈ ಪ್ರಶ್ನೆ ಬುದ್ದನಿಗೂ ಕೂಡ ಕೇಳಿದ್ದು, “ನಿರಂತರವಾದ ಬದಲಾವಣೆ” ಎಲ್ಲಿ ಬದಲಾವಣೆ ಇದೆ ಅಲ್ಲಿ ಜೀವಂತಿಕೆ ಇದೆ. ಇದು ಬದುಕು ಮತ್ತು ಸಾಹಿತ್ಯ ನೋಡುವ ಒಳನೋಟವಾಗಿದೆ. ವರ್ತಮಾನದಲ್ಲಿ ಬದುಕುವುದು ತುರ್ತು ಈ ಮಾತಿನ ಅರ್ಥ. ಇದನ್ನು ಒಪ್ಪಿಕೊಳ್ಳುವವರು ಉಳಿಯುತ್ತಾರೆ. ಅದು ವಿಜ್ಞಾನವೂ ಕೂಡ ಹೌದು” ಎಂದರು.
“ಕನಸುಗಳಿಲ್ಲದ ವ್ಯಕ್ತಿಗಳಲ್ಲಿ ಡಾಕ್ಟರ್, ಎಂಜಿನಿಯರ್ ಇಷ್ಟಕ್ಕೆ ಕಾರಣವಾಗಿದೆ. ಇದಕ್ಕೆ ಶೈಕ್ಷಣಿಕತೆ ಹಾಗೂ ಪಾಲಕರು ಕಾರಣರಾಗಿದ್ದಾರೆ. ಇವುಗಳನ್ನು ಹೊರತಾಗಿಯೂ ಕನಸುಗಳಿರುತ್ತವೆ. ಅಂತ ಕನಸುಗಳನ್ನು ಕಾಣಬೇಕು. ಒಂದು ಹಂತಕ್ಕೆ ಕನಸುಗಳು ಮುಗಿಯುತ್ತವೆ. ಆದರೆ, ಜೀವನದುದ್ದಕ್ಕೂ ಕನಸುಗಳಿರಬೇಕು. ಅವು ಕಲೆ, ಸಾಹಿತ್ಯ, ಸಂಗೀತ ಮನಸ್ಸಿಗೆ ಪೋಷಕಾಂಶ ಕೊಡುವ ಮಾಧ್ಯಮ, ಕಲಾಭಿರುಚಿ ಇರುವುದರಿಂದ ಯಾವುದೇ ಕ್ಷೇತ್ರದಲ್ಲಿ ಖುಷಿ ಇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಕನಸು ಕಾಣಬೇಕು. ದುರಂತ ಎಂದರೆ ಅಧಿಕಾರ ಇದ್ದಲ್ಲಿ ಕನಸುಗಳಿಗೆ ಜಾಗವಿಲ್ಲ. ಕನಸುಗಳು ಇದಲ್ಲಿ ಅಧಿಕಾರವಿಲ್ಲ. ಇವೆರಡೂ ಇದ್ದರೆ ಈಡೀ ಸಮಾಜವೇ ಬದಲಾಗುತ್ತದೆ. ಇವೆರಡು ಮಾವೋತ್ಸೆ ತುಂಗ್ನಲ್ಲಿದ್ದುದರಿಂದ ಬದಲಾವಣೆ ತರಲು ಸಾಧ್ಯವಾಯಿತು” ಎಂದರು.
“ಕರ್ನಾಟಕ ಏಕೀಕರಣವಾಗಿ ಇಷ್ಟು ವರ್ಷಗಳಾದರೂ ಕನ್ನಡದಲ್ಲಿ ವಿಜ್ಞಾನ ಕಲಿಸುವ ಪ್ರಯತ್ನ ಆಗಿಲ್ಲ. ಆದರೆ ಕೆಲವೊಂದು ಭಾಷೆಗಳಲ್ಲಿ ಸಾಧ್ಯವಾಗಿದೆ. ನಮ್ಮ ಭಾಷೆ ಮೂಲಕ ಜ್ಞಾನ ಅಳೆಯುತ್ತಾರೆ. ಆದರೆ ಭಾಷೆ ಮತ್ತು ಜ್ಞಾನ ಎರಡಕ್ಕೂ ಸಂಬಂಧವೇ ಇಲ್ಲ. ಇಂಗ್ಲೀಷ್ ಬಂದರೆ ಅಷ್ಟೇ ಜ್ಞಾನಿ ಅಂತ ಹೇಳಿದರೆ ಅತಿಯಾದ ಭ್ರಮೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ನಾವು ಎರಡು ಭಾಷೆಗಳನ್ನು ನೋಡುತ್ತೇವೆ. ಒಂದು ಅಂತಃಕರಣ ಭಾಷೆ ಇನ್ನೊಂದು ಅಧಿಕಾರ ಭಾಷೆ. ಅಂತಃಕರಣ ಭಾಷೆ ತಾಯಿ ಭಾಷೆ, ವಿಶ್ವಾಸ ಭಾಷೆ. ಜನರನ್ನು ಬೆಸೆಯುವಂತಹದ್ದು, ಜಾನಪದ, ತತ್ವಪದ, ವಚನಗಳಲ್ಲಿ ಈ ಭಾಷೆಯ ಬಗ್ಗೆ ಸಾಕಷ್ಟು ದಾರ್ಶನಿಕರು ಹೇಳಿದ್ದಾರೆ. ಆದರೆ ಅಧಿಕಾರ ಭಾಷೆ ದರ್ಪದ ಭಾಷೆ. ಮಾಧ್ಯಮಗಳಲ್ಲಿ ನಮಗೆ ನಾವೇ ಅನ್ನುವುದನ್ನು ಕಾಣುತ್ತೇವೆ. ಇದು ವಸ್ತುವಿನ ಹಾಗೆ ಆಗುತ್ತದೆ. ಇವೆರಡರಲ್ಲಿ ವಿದ್ಯಾರ್ಥಿಗಳು ಅಂತಃಕರಣದ ಭಾಷೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯ ಕಲೆ ಭಾಷೆ ಇನ್ನೊಬ್ಬರಿಗೆ ಸ್ಪರ್ಶಿಸಲು ಸಾಧ್ಯ. ಕುವೆಂಪು ಬೇಂದ್ರೆ ಅವರ ಸಾಹಿತ್ಯದಲ್ಲಿ ಈ ಭಾಷೆಯ ಮುಖ ಅನಿಯಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬರ ಪರಿಹಾರ ಹೆಚ್ಚಳಕ್ಕೆ ಎಎಪಿ ಆಗ್ರಹ
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಅಮರೇಶ ಗಾಣಪೀರ, ಮುಖ್ಯ ಅತಿಥಿಗಳಾದ ಶರಣಪ್ಪ ಅರಮನಿ, ಸಂದೇಶ ದೊಡ್ಡಮನಿ, ವಿ ಆರ್ ಗೆದಗೇರಿ, ಎಮ್ ಬಿ ಕೊಪ್ಪದ, ಎಚ್ ಬಿ ಕಟ್ಟಿಮನಿ, ಕಸಾಪ ಸಂಚಾಲಕ ಆರ್ ಕೆ ಬಾಗವಾನ್ , ಶರ್ ಜಿ ಮ್ಯಾಕಲ್, ಕಥೆಗಾರ ಟಿ ಎಸ್ ಗೊರವರ್, ಚಿತ್ರ ಕಲಾವಿದರು ಪುಡಂಲಿಕ ಕಲ್ಲಿಗನೂರು ಹಾಗೂ ವಿದ್ಯಾರ್ಥಿಗಳು ಇದ್ದರು.