ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಮೂಲಭೂತ ಹಕ್ಕುಗಳು ಹೋಗಲಿ ಕೊಡಗಿನ ಆದಿವಾಸಿಗಳು, ದಲಿತರನ್ನ ಮನುಷ್ಯರನ್ನಾಗಿ ಸಹ ಕಾಣದ ದುಸ್ಥಿತಿ. ನಾಗರಿಕತೆ ಎಸ್ಟೆ ಬೆಳೆದರು, ಆಧುನಿಕವಾಗಿ ಬದಲಾದರು ಕೊಡಗಿನಲ್ಲಿ ಆದೇ ಸಾಲು ಮನೆ ಜೀತಪದ್ಧತಿ.
ಬೆಳಿಗ್ಗೆಯಿಂದ ಸಂಜೆವರೆಗೆ ದುಡಿಯುವುದು ಬಿಟ್ಟರೆ ಬೇರೆ ಪ್ರಪಂಚ ಕಂಡಿಲ್ಲ. ಬಾಬಾ ಸಾಹೇಬರು ಎಲ್ಲರಿಗೂ ಮೂಲಭೂತ ಹಕ್ಕನ್ನು ಹೊಂದುವ ಅವಕಾಶ ಮಾಡಿಕೊಟ್ಟರು ಆದ್ರೆ ಕೊಡಗಿನ ಬಡ ಜನರಿಗೆ, ಆದಿವಾಸಿ, ದಲಿತರಿಗೆ ವಾಸಿಸಲು ಮನೆ, ಜಾಗ, ಶಿಕ್ಷಣ, ರಾಜಕೀಯ ಎಲ್ಲವು ಮರೀಚಿಕೆ, ಉಳ್ಳವರ ದರ್ಪ, ದೌರ್ಜನ್ಯ ಹೊರ ಜಗತ್ತನ್ನ ನೋಡಲು ಬಿಟ್ಟಿಲ್ಲ.
ರಾಜ್ಯ ಸರ್ಕಾರ ಉಳ್ಳವರ ಪರವಾಗಿ ಪ್ಲಾಂಟೇಶನ್ ಬೆಳೆಗಳ ಭೂ ಗುತ್ತಿಗೆ ನೀಡಲು ಹೊರಟಿದೆ. ಭೂ ಮಾಲೀಕರು ಈಗಾಗಲೇ ನೂರಾರು ಎಕರೆ ಇದ್ದವರು ಇದರ ಲಾಭ ಪಡೆಯುತ್ತಾರೆ. ಇರಲು ಮನೆ ಇಲ್ಲ, ಸತ್ತರೆ ಹೂಳಲು ಜಾಗ ಇರದ ಬಡ ಜನರ ಬಗ್ಗೆ ಸರ್ಕಾರ ಯೋಚಿಸಲೇ ಇಲ್ಲ.
ಭೂ ಮಾಲೀಕರು ಈಗಾಗಲೇ ಇರುವ ಭೂಮಿ ಅಲ್ಲದೆ ಸರ್ಕಾರದ ಆದೇಶದಂತೆ ಎಲ್ಲ ಜಮೀನನ್ನು ಗುತ್ತಿಗೆ ಪಡೆದರೆ ಆದಿವಾಸಿಗಳು, ದಲಿತರು, ಶೋಷಿತರು, ಬಡ ಜನ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು?
ಕೊಡಗಿನ ಬಡ ಜನ ಎಕರೆ ಗಟ್ಟಲೆ ಜಾಗ ಕೊಡಿ ಅಂತ ಎಂದು ಹೋರಾಟ ಮಾಡಿಲ್ಲ, ಇರಲು ಮನೆ, ಜಾಗ ಕೊಡಿ ಅದು 2ರಿಂದ 3 ಸೆಂಟ್ ಕೇಳಿದರು ಇದುವರೆಗೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರ ಜಾಗ ನೀಡಿಲ್ಲ.
ಬಡ ಜನರ ಮೇಲಿನ ತಾತ್ಸಾರ. ಉಳ್ಳವರಿಗೆ ಎಕರೆಗೆ 2 ಸಾವಿರ ಕಟ್ಟಿಸಿಕೊಂಡು ಭೂಮಿ ಗುತ್ತಿಗೆ ಕೊಡುವ ನೀವು, ಅದೇ ಬಡ ಜನರಿಗೆ 2 ಎಕರೆ ಕೊಡಿ ಅವರು ಇನ್ನು 2 ಸಾವಿರ ಹೆಚ್ಚಿಗೆ ನೀಡುತ್ತಾರೆ ಸರ್ಕಾರಕ್ಕೆ.
ಭೂ ಮಾಲೀಕರಿಗೆ ಒಂದು ಕಾನೂನು, ಬಡವರಿಗೆ ಇನ್ನೊಂದು ಕಾನೂನು. ಸಧ್ಯ ಪರಿಸ್ಥಿತಿಯಲ್ಲಿ ಇರುವ ಜಾಗಕ್ಕೆ, ವಸತಿಗೆ ಹೋರಾಟ ಮಾಡ್ತಾ ಇರುವ ಆದಿವಾಸಿ, ದಲಿತರು ಈ ಕಾನೂನಿನಿಂದ ಬೀದಿಪಾಲು. ಉಳ್ಳವರು ಇರಬರುವ ಎಲ್ಲ ಆಕ್ರಮಿಸಿದ ಭೂಮಿಯನ್ನು ಸರ್ಕಾರದ ಮೂಲಕವೇ ಗುತ್ತಿಗೆ ಪಡೆದರೆ ಇಲ್ಲಿ ಜಾಗವೇ ಇರಲ್ಲ, ವಾಸ ಮಾಡುವುದು ಹೋಗಲಿ ಓಡಾಡಲು ಜಾಗ ಕೂಡ ಇರಲ್ಲ. ಈಗಲೇ ಬದುಕಿದ್ದರು ಸತ್ತಂತೆ ಇರುವ ಸ್ಥಿತಿ ಕೊಡಗಿನಲ್ಲಿ ಹೇಳುವರು ಇಲ್ಲ, ಕೇಳುವವರು ಇಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು ಇಲ್ಲ. ಹೀಗಿರುವಾಗ ಭವಿಷ್ಯದಲ್ಲಿ ಬಡವರ ಗತಿ ಏನು.
ಬಡವರಿಗೆ ಜಾಗ ನೀಡದ ಸರ್ಕಾರ ಉಳ್ಳವರ ಪರ ನಿಂತಾಗ ಇರುವ ಜಾಗ ಕಳೆದುಕೊಂಡು ಸಾಯುವವರೆಗೂ ಸಾಲು ಮನೆ ಜೀತದಾಳುಗಳಾಗಿ ದುಡಿಯುತ್ತಲೇ ಸಾಯಬೇಕು, ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿವೆ. ಒಂದು ಕಡೆ ಅಸ್ಸಾಂ ವಲಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಿರುವಾಗ ವಾಸಕ್ಕೆ ಜಾಗ ಇಲ್ಲ ದುಡಿಯಲು ಕೆಲಸ ಇಲ್ಲ ಅಂದ್ರೆ ಬಡ ಜನರ ಬದುಕಿನ ಕಥೆ ಏನು?
ಕೊಡಗಿನಲ್ಲಿ ಬೇರೆ ರಾಜ್ಯಗಳ ರಾಜಕಾರಣಿಗಳು ನೂರಾರು ಎಕರೆ ಭೂಮಿ ಹೊಂದಿದ್ದಾರೆ, ನಮ್ಮ ರಾಜ್ಯದ ರಾಜಕಾರಣಿಗಳ ಭೂಮಿ ಕೂಡ ಸಾವಿರಾರು ಎಕರೆ ಇದೆ. ಇಲ್ಲೇ ಹುಟ್ಟಿ ಬೆಳೆದ ಮೂಲ ನಿವಾಸಿಗಳಿಗೆ ಬದುಕು ಇಲ್ಲ.
ವಕೀಲರಾದ ಸುನಿಲ್ ಈದಿನ.ಕಾಮ್ ಜೊತೆ ಮಾತನಾಡಿ ಕೊಡಗಿನಲ್ಲಿ ಈಗಾಗಲೇ ಬೇರೆ ರಾಜ್ಯದಿಂದ ಬಂದವರು, ರಾಜಕಾರಣಿಗಳು ಭೂ ಕಬಳಿಕೆ ಮಾಡುತ್ತಾ ಇದ್ದಾರೆ, ನೂರಾರು ಎಕರೆ ಈಗಾಗಲೇ ಅವರದ್ದಾಗಿದೆ.
ಸರ್ಕಾರ ಬಡ ಜನರ ಬಗ್ಗೆ ಯೋಚಿಸದೆ ಕೆ.ಜಿ. ಬೋಪಯ್ಯ ಬಿಜೆಪಿ ಸರ್ಕಾರ ಇರುವಾಗ ನಡೆಸಿದ ಪ್ರಯತ್ನವನ್ನು ಇಂದು ಕಾಂಗ್ರೆಸ್ ಜಾರಿಗೆ ತಂದಿದೆ. ಕಾಂಗ್ರೆಸ್ ನಂಬಿಕೆ ದ್ರೋಹ ಮಾಡಿದೆ, ದಲಿತರಿಗೆ, ಆದಿವಾಸಿಗಳ ಬದುಕನ್ನ ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಿರಿಯ ಮುಖಂಡರಾದ ಕೃಷ್ಣಪ್ಪ ಮಾತನಾಡಿ ಸ್ಥಳೀಯ ಶಾಸಕರಾದ ಎ.ಎಸ್. ಪೊನ್ನಣ್ಣ ಕೊಟ್ಟ ಮಾತಿನಂತೆ ನಡೆದಿಲ್ಲ, ಬಡವರಿಗೆ ಅನ್ಯಾಯ ಮಾಡಿದ್ದಾರೆ. ಭೂ ಮಾಲೀಕರ ಪರವಾಗಿ ಆದೇಶ ಬರಲು ಶಾಸಕರೇ ನೇರ ಕಾರಣ, ಇವರೇ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗಿ ಭೂ ಮಾಲೀಕರ ಪರವಾಗಿ ಆದೇಶ ಬರುವಂತೆ ಮಾಡಿದ್ದು ಎಂದು ಆರೋಪ ಮಾಡಿದರು.
ಕಾಮ್ರೇಡ್ ರಮೇಶ್ ಮಾತನಾಡಿ ಚಿಕ್ಕ ಮಗಳೂರು, ಉಡುಪಿ, ಹಾಸನ, ಕೊಡಗು ಗಾಡ್ಗಿಲ್, ಕಸ್ತೂರಿ ರಂಗನ್ ವರದಿಯ ತೂಗುಗತ್ತಿಯ ಹಲಗಿನ ಮೇಲೆ ನಿಂತಿವೆ, ವರದಿ ಜಾರಿ. ಆದರೆ, ಹಳ್ಳಿ ಹಳ್ಳಿಗಳೇ ನಾಶವಾಗಿ ಅರಣ್ಯ ಹಕ್ಕಿಗೆ ಸೇರ್ಪಡೆ ಆಗುವ ಅಪಾಯ ಇರುವಾಗ ಸರ್ಕಾರ ಯಾವುದೆ ಪೂರ್ವಾಪರ ಯೋಚಿಸದೆ ಮಾಲೀಕರ ಪರವಾಗಿ ಭೂಮಿಯನ್ನು 30 ವರ್ಷಗಳಿಗೆ ಗುತ್ತಿಗೆ ನೀಡಿದ್ದು ಖಂಡನೀಯ. ಭೂ ಮಾಲೀಕರು, ಕೆರೆಕಟ್ಟೆ, ಅರಣ್ಯ ಎಲ್ಲವನ್ನು ಬಿಡದೆ ನಮ್ಮದೆ ಎನ್ನುವಂತೆ ಈ ಕಾನೂನಿನ ನೆರವು ಪಡೆಯುತ್ತಾ ಹೋದರೆ ಕೊಡಗಿನಲ್ಲಿ ಬಡವರಿಗೆ ಉಳಿಗಾಲವಿಲ್ಲ ಎಂದು ವಿಷಾದಿಸಿದರು.