ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಸುರ್ಜಿತ್ ಸಿಂಗ್ ಯಾದವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠವು, “ಕಾರ್ಯಾಂಗ ಮತ್ತು ರಾಷ್ಟ್ರಪತಿಯವರು ಈ ಸಮಸ್ಯೆಯನ್ನು ಪರಿಶೀಲಿಸಬೇಕು ಮತ್ತು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ” ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.
The Delhi High Court on Thursday rejected a PIL seeking the removal of Arvind Kejriwal, who has been arrested by the Enforcement Directorate (ED) in the liquor policy case, from the post of Chief Minister of Delhi.
Read more: https://t.co/Ze3atVgTOi#DelhiHighCourt… pic.twitter.com/wweJWEwyGL— Live Law (@LiveLawIndia) March 28, 2024
“ಈ ವಿಚಾರದಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿದೆಯೇ? ನಾವು ಇಂದಿನ ದಿನಪತ್ರಿಕೆಯಲ್ಲಿ ಗಮನಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿರುವುದನ್ನು ನೋಡಿದ್ದೇವೆ. ಆ ಬಳಿಕ ಅದು ರಾಷ್ಟ್ರಪತಿಗಳ ಬಳಿಗೆ ಹೋಗಬಹುದು. ಸಿಎಂ ಹುದ್ದೆಯಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಕೆಳಗಿಳಿಸಿ ಎಂದು ನಾವು ಯಾವುದೇ ಮಾರ್ಗದರ್ಶನ ನೀಡಬೇಕಾಗಿಲ್ಲ ಮತ್ತು ರಾಷ್ಟ್ರಪತಿಗಳಿಗೋ ಅಥವಾ ಎಲ್ಜಿಗೆ ಆದೇಶಿಸಲು ನಮ್ಮ ಕಾರ್ಯ ವ್ಯಾಪ್ತಿಯಲ್ಲಿಲ್ಲ” ನ್ಯಾಯಾಲಯ ಹೇಳಿದೆ.
ಇದೇ ವೇಳೆ ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಮುಂದುವರಿಯಲು ಯಾವುದೇ ಕಾನೂನು ಅಡ್ಡಿ ಇಲ್ಲ ಎಂದು ಇದೇ ವೇಳೆ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ.
ಅರ್ಜಿಯ ವಿಚಾರಣೆಯ ವೇಳೆ ಅರ್ಜಿದಾರನನ್ನು ತರಾಟೆಗೆ ತೆಗೆದುಕೊಂಡ ದ್ವಿಸದಸ್ಯ ಪೀಠವು, “ಕೇಜ್ರಿವಾಲ್ ಸಿಎಂ ಆಗಿ ಕಾರ್ಯ ನಿರ್ವಹಿಸದಂತೆ ಯಾವುದಾದರೂ ಕಾನೂನು ಅಥವಾ ನಿಷೇಧವಿರುವ ಬಗ್ಗೆ ಎಲ್ಲಿಯಾದರೂ ಉಲ್ಲೇಖವಿದೆಯೇ ಎಂಬುದನ್ನು ನೀವು ನಮಗೆ ತೋರಿಸಿ. ಯಾವುದೇ ಸಾಂವಿಧಾನಿಕ ವೈಫಲ್ಯವಿದ್ದರೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಅದರ ಬಗ್ಗೆ ಕ್ರಮ ವಹಿಸುತ್ತಾರೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಅವರು ಇದನ್ನು ನಿರ್ಧರಿಸುತ್ತಾರೆ ಎಂದು ನಮಗೆ ಖಾತ್ರಿಯಿದೆ. ಇಂದಿನ ಪರಿಸ್ಥಿತಿಯು ನಮ್ಮ ಕಲ್ಪನೆಗೂ ಮೀರಿದ ಸಂಗತಿಯಾಗಿದೆ. ಹಾಗಾಗಿ, ಇಂದು ನಾವು ಯಾವುದೇ ಆದೇಶ ಹೊರಡಿಸುವುದಿಲ್ಲ. ಕೇಜ್ರಿವಾಲ್ ಸಿಎಂ ಮುಂದುವರಿಯಲು ಯಾವುದೇ ಕಾನೂನು ಅಡ್ಡಿ ಇಲ್ಲ” ಎಂದು ಪೀಠವು ತಿಳಿಸಿತು.
“ನಾವು ರಾಜಕೀಯಕ್ಕೆ ಬರುವುದಿಲ್ಲ ಮತ್ತು ಅಂತಿಮವಾಗಿ ಈ ಸಮಸ್ಯೆಗಳನ್ನು ಜನರೇ ನಿರ್ಧರಿಸುತ್ತಾರೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತದಲ್ಲದೇ, ಸುರ್ಜಿತ್ ಸಿಂಗ್ ಯಾದವ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತು.
ಇದನ್ನು ಓದಿದ್ದೀರಾ? ನಾಮಪತ್ರ ಸಲ್ಲಿಕೆ | ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ ಕೆ ಸುರೇಶ್ ಗೆಲುವು ಶತಸಿದ್ದ: ಸಿದ್ದರಾಮಯ್ಯ ವಿಶ್ವಾಸ
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಇ ಡಿ ಅಧಿಕಾರಿಗಳು ಬಂಧಿಸಿದ್ದರು. ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ನ್ಯಾಯಾಲಯವು ಒಪ್ಪಿಸಿತ್ತು.