- ಇಡೀ ಪಠ್ಯಪುಸ್ತಕ ಪರಿಷ್ಕರಣೆ ಸದ್ಯ ಮಾಡುವುದಿಲ್ಲ
- ‘ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ’
ಕೇಸರೀಕರಣಗೊಂಡ ಪಠ್ಯದಲ್ಲಿ ಹಲವು ಬದಲಾವಣೆ ತರಲು ನಿರ್ಧರಿಸಲಾಗಿದೆ. ಹೆಡ್ಗೆವಾರ್ ಪಠ್ಯ ತೆಗೆದಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಸೌದದಲ್ಲಿ ಗುರುವಾರ ಮಾತನಾಡಿದ ಅವರು, “ಇಡೀ ಪಠ್ಯಪುಸ್ತಕ ಪರಿಷ್ಕರಣೆ ಸದ್ಯ ಮಾಡುವುದಿಲ್ಲ. ಹೀಗಾಗಿ ಮಕ್ಕಳಿಗೆ ಏನನ್ನು ಹೇಳಿಕೊಡಬೇಕು? ಏನನ್ನು ತೆಗೆಯಬೇಕು? ಅದನ್ನು ತಿಳಿಸುತ್ತೇವೆ” ಎಂದಿದ್ದಾರೆ.
“ಸಿಎಂ ಮಾರ್ಗದರ್ಶನದ ಮೇಲೆ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಣಾಳಿಕೆಯಲ್ಲೂ ನಮ್ಮಕಮಿಟ್ ಮೆಂಟ್ ಇತ್ತು. ನಮ್ಮ ಸರ್ಕಾರ ಬರುವಾಗಲೇ ಪುಸ್ತಕ ಮಕ್ಕಳ ಕೈ ಸೇರಿದೆ. ವಾಪಸ್ ತರಿಸೋಕೆ ಕಷ್ಟ. ಯಾವುದು ಬೇಕು, ಬೇಡ ಅಂತ ಸಪ್ಲಿಮೆಂಟರಿ ಬುಕ್ ಮಾಡುತ್ತೇವೆ. 12 ಲಕ್ಷ ಇದಕ್ಕೆ ಖರ್ಚು ಬರಬಹುದು. 75 ಸಾವಿರ ಶಾಲೆಗಳಿಗೆ ಇದನ್ನು ಕಳುಹಿಸಿಕೊಡಲಾಗುವುದು” ಎಂದರು.
“ಸಾವಿತ್ರಿ ಫುಲೆ ವಿಚಾರ ತೆಗೆದಿದ್ದರು. ಅದನ್ನು ಸೇರಿಸುತ್ತಿದ್ದೇವೆ. ‘ನೀ ಹೋದ ಮರುದಿನ ಅಂಬೇಡ್ಕರ್’ ಕವನ ಬಿಟ್ಟಿದ್ದರು ಅದನ್ನ ನಾವು ಮರು ಸೇರಿಸಿದ್ದೇವೆ. ಸಾವರ್ಕರ್, ಸೂಲಿಬೆಲೆ ಪಾಠಗಳನ್ನ ತೆಗೆದಿದ್ದೇವೆ. ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ. 15 ಪೇಜುಗಳ ಪುಸ್ತಕ ಇರಬಹುದು. ಅದು ಸದ್ಯದಲ್ಲೇ ವಿದ್ಯಾರ್ಥಿಗಳ ಕೈ ಸೇರಲಿದೆ” ಎಂದರು.
ಐವರು ತಜ್ಞರ ಸಮಿತಿ ರಚಿಸಲಾಗಿದೆ. ಅದರಲ್ಲಿ ರಾಜಪ್ಪ ದಳವಾಯಿ, ಅಶ್ವಥ ನಾರಾಯಣ, ರಾಜೇಶ್ ಸೇರಿ ಐವರಿದ್ದಾರೆ. ಪದಗಳ ಬದಲಾವಣೆ, ವಾಕ್ಯ ಬದಲಾವಣೆ ಮಾಡಲಿದ್ದಾರೆ. 6 ರಿಂದ 10ನೇ ತರಗತಿ ವರೆಗೆ ಪಠ್ಯ ಬದಲಾವಣೆ ಮಾಡುತ್ತೇವೆ” ಎಂದು ಹೇಳಿದರು.