- ʼಎಲ್ಲ ನದಿ ನೀರು ಹರಿಯೋದು ಸಮುದ್ರಕ್ಕೇನೆ, ಜೆಡಿಎಸ್ನವರು ಬರೋದು ನಮ್ಮತ್ರನೆʼ
- ಬೇಜವಾಬ್ದಾರಿ ಹೇಳಿಕೆಗಳು ಖಂಡನೀಯ ಎಂದ ಅಶ್ವತ್ಥನಾರಾಯಣ
ಹಾಸನ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರೀತಂ ಗೌಡ ಪ್ರಚಾರದ ವೇಳೆ ಹೊಸ ಬಾಂಬ್ ಸಿಡಿಸಿದ್ದು, ಜೆಡಿಎಸ್ಗೆ ಮತ ಹಾಕಿದ್ರೆ ನಮಗೇ ಮತ ಹಾಕಿದಂತೆ ಎಂದಿದ್ದಾರೆ.
“ಜನತಾದಳಕ್ಕೆ ಮತ ಹಾಕಿದರೂ ಬಿಜೆಪಿಗೆ ಮತ ಹಾಕಿದ ಲೆಕ್ಕಾನೆ. ದೇವೇಗೌಡರು, ಮೋದಿ ಸಾಹೇಬ್ರು ಮಾತನಾಡಿಕೊಂಡಿದ್ದಾರೆ. ಏಕೆಂದರೆ, ಜೆಡಿಎಸ್ 20 ಇಲ್ಲ 25 ಸೀಟು ಅಷ್ಟೇ ಪಡೆಯೋದು. ಎಲ್ಲ ನದಿ ನೀರು ಹರಿಯೋದು ಸಮುದ್ರಕ್ಕೇನೆ. ಹಾಗೆಯೇ ಜೆಡಿಎಸ್ ಅವರು ಬರೋದು ನಮ್ಮತ್ರಕ್ಕೆ. ನೀವು ಜೆಡಿಎಸ್ಗೆ ವೋಟು ಹಾಕಿದರೂ ನನ್ನ ಹತ್ರಕ್ಕೇ ಬರಬೇಕು” ಎನ್ನುವ ಮೂಲಕ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಒಪ್ಪಂದ ನಡೆಯುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಶಾಸಕರ ಮಾತಿನ ವಿಡೀಯೊ ಎಲ್ಲಡೆ ಹರಿದಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮತ ನೀಡುವುದಾಗಿ ಮಾತು ಕೊಡಿ; ಪ್ರೀತಂ ಗೌಡ ಒತ್ತಾಯ
ಪ್ರೀತಂ ಗೌಡರ ಮಾತುಗಳಿಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದು, “ಬೇಜವಾಬ್ದಾರಿ ಹೇಳಿಕೆಗಳು ಖಂಡನೀಯ. ಇವೆಲ್ಲ ಸುಳ್ಳು ಹೇಳಿಕೆಗಳು, ಯಾರೂ ಕೂಡ ಯಾರೊಂದಿಗೂ ಮಾತನಾಡಿಲ್ಲ. ಜೆಡಿಎಸ್ ನಮ್ಮ ಪ್ರತಿಸ್ಪರ್ಧಿ, ಇದರಲ್ಲಿ ಯಾವುದೇ ಒಪ್ಪಂದ ಇಲ್ಲ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಯ ಪ್ರತಿಸ್ಪರ್ಧಿಗಳು. ಅವುಗಳನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಯಾವುದೇ ಪಕ್ಷಗಳೊಂದಿಗೂ ಅಡ್ಜಸ್ಟ್ಮೆಂಟ್ ಇಲ್ಲ. ಯಾವುದೇ ಒಪ್ಪಂದ ಇಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ಎಲ್ಲಿಯೂ ನೀಡಬಾರದು” ಎಂದಿದ್ದಾರೆ.