- ʼಪ್ರೀತಂಗೌಡರ ಜೊತೆ ಇರುತ್ತೇವೆ. ವೋಟು ಹಾಕುತ್ತೇವೆ ಅಂತ ಮಾತು ಕೊಡಿʼ
- ʼದೇವಸ್ಥಾನದ ವಿಚಾರದಲ್ಲಿ ಯಾರೂ ಸುಳ್ಳು ಹೇಳುವಂತಿಲ್ಲʼ
ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ರಂಗು ಕಾವೇರುತ್ತಿದ್ದು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿಯೂ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಹಾಸನವನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಎಚ್ ಡಿ ರೇವಣ್ಣ ಕುಟುಂಬ ಟೊಂಕ ಕಟ್ಟಿ ನಿಂತರೆ, ಇತ್ತ ಹಾಲಿ ಶಾಸಕ ಪ್ರೀತಂ ಗೌಡ ತಾನು ಪುನಃ ಗೆಲ್ಲಲೇಬೇಕೆಂಬ ಹಠ ತೊಟ್ಟು ಕಸರತ್ತು ನಡೆಸುತ್ತಿದ್ದಾರೆ.
ಹಾಸನ ಶಾಸಕ ಪ್ರೀತಂ ಗೌಡ ಈ ನಡುವೆ ದೇವರ ಹೆಸರಿನಲ್ಲಿ ಮತದಾರರಿಂದ ಆಣೆ-ಪ್ರಮಾಣ ಮಾಡಿಕೊಂಡು ಮತ ಗಳಿಸಲು ಪ್ರಯತ್ನಿಸುತ್ತಿರುವ ಘಟನೆ ನಡೆದಿದೆ.
ಹಾಸನ ತಾಲೂಕಿನ ಮಲ್ಲನಾಯಕನಹಳ್ಳಿಯಲ್ಲಿ ರಾತ್ರಿ ವೇಳೆ ಪ್ರಚಾರಕ್ಕೆ ಹೋಗಿದ್ದ ಪ್ರೀತಂ ಗೌಡ, “ದೇವರ ಮುಂದೆ ಮಂಗಳಾರತಿ ಮಾಡಿ, ನನಗೆ ಮತ ನೀಡುವುದಾಗಿ ಮಾತು ಕೊಟ್ಟರೆ ದೇವಸ್ಥಾನ ಕಟ್ಟಿಸಿಕೊಡುತ್ತೇನೆ” ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಪ್ರೀತಂ ಗೌಡ ಪ್ರಚಾರಕ್ಕೆ ಬಂದಿದ್ದ ವೇಳೆ ಮಲ್ಲನಾಯಕನಹಳ್ಳಿ ಗ್ರಾಮಸ್ಥರು ದೇವಸ್ಥಾನ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಪ್ರೀತಂಗೌಡ, “ನಿಮ್ಮೂರಿನಲ್ಲಿ ಎಷ್ಟು ವೋಟು ಇದೆಯಣ್ಣ, ಬೂತ್ನಲ್ಲಿ ಬೇಡ, ಊರಿನಲ್ಲಿ ಎಷ್ಟು ಮತಗಳಿವೆ ಹೇಳಿ” ಎಂದು ಹೇಳಿದ್ದಾರೆ.
ಆಗ ಗ್ರಾಮದ ಯುವಕನೊಬ್ಬ 150 ವೋಟುಗಳಿವೆ ಎಂದು ಹೇಳಿದ್ದಾನೆ. ಆಗ ಶಾಸಕ “150 ಮತಗಳು ಇವೆ. ಆದರೆ, ವೋಟಿಂಗ್ ಆಗೋದು 120-130 ಅಲ್ವೇನಣ್ಣ. ಇದರಲ್ಲಿ ಎಷ್ಟು ಮತ ಹಾಕಿಸುತ್ತೀರಿ? ನನಗೆ ಒಂದು ಲೆಕ್ಕ ಇರಲಿ” ಎಂದು ಕೇಳಿದ್ದಾರೆ.
ಗ್ರಾಮಸ್ಥರು ಪ್ರತಿಕ್ರಿಯಿಸಿದ್ದು, ನಮ್ಮ ಊರಿನಲ್ಲಿ 65-70 ವೋಟ್ ಹಾಕಿಸುತ್ತೇವೆ ಎಂದಿದ್ದಾರೆ. “65- 70 ವೋಟು ಹಾಕಿಸುತ್ತೇವೆ ಅಂತ ನಮ್ಮ ಹಿರಿಯರು, ನಮ್ಮ ತಾಯಂದಿರು ಎಲ್ಲ ಸೇರಿ ಹೇಳುತ್ತಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಯಾರೂ ಸುಳ್ಳು ಹೇಳುವಂತಿಲ್ಲ. ಮತ ಹಾಕುವ 70 ಮಂದಿ ಮತದಾರರನ್ನು ಕರೆಸಿ ದೇವಸ್ಥಾನದ ಮುಂದೆ ಮಂಗಳಾರತಿ ಮಾಡಿಸಿ. ಪ್ರೀತಂಗೌಡರ ಜೊತೆ ಇರುತ್ತೇವೆ. ವೋಟು ಹಾಕುತ್ತೇವೆ ಅಂತ ಮಾತು ಕೊಡಿ. ಉಳಿದಿದ್ದು ಕೆಲಸ ನಾನು ಮಾಡ್ತೀನಿ ಆಗಬಹುದಾ?” ಎಂದು ಪ್ರೀತಂ ಗೌಡ ಆಮಿಷವೊಡ್ಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಅಭಿವೃದ್ಧಿ ಕಾಣದ ಕೋಲಾರ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ತ್ರೀಕೋನ ಸ್ಪರ್ಧೆ ಸಾಧ್ಯತೆ
“ಆ ಎಪ್ಪತ್ತು ಜನ ಯಾರು ಅಂತ ಈಗಲೇ ಕರೆಸಿ, ಪೂಜೆ ಮಾಡಿಸಿ ನನಗೆ ಮಾತು ಕೊಡಿ. ಏಕೆಂದರೆ ನನಗೆ ನೆಂಟಸ್ಥನದ್ದು ಕಾಟ ಜಾಸ್ತಿ ಇದೆ. ಊರಲ್ಲಿ ಇರ್ತಾರೆ, ಹಾಸನದಲ್ಲಿ ಇರ್ತಾರೆ. ಚುನಾವಣೆ ಬಂದ ತಕ್ಷಣ ಇಲ್ಲಿ ಬಂದು ನೆಂಟಸ್ಥನ ಮಾಡ್ಕಂಡು, ನಮ್ಮ ಅಣ್ಣ ತಮ್ಮ, ಅವರು ನನಗೆ ನೆಂಟರು, ಇವರು ನನಗೆ ನೆಂಟರು ಅಂತ ಅವರ ಕಡೆಗೆ ಮುಖ ಕೊಟ್ಟರೆ ನಾನು ಮಾಡಿದ ಕೆಲಸಕ್ಕೆ ಕೂಲಿ ಯಾರು ಕೊಡೋದು? ವೋಟು ಹಾಕೋ ಎಪ್ಪತ್ತು ಜನರನ್ನು ಸೇರಿಸ್ಕಳಿ ಅಣ್ಣಾ” ಎಂದು ಹೇಳಿದ್ದಾರೆ.