ಕಳೆದ ಬಾರಿ ಕೆಲ ತಪ್ಪುಗಳಿಂದ ಎಚ್.ಎಸ್. ಪ್ರಕಾಶ್ ಅವರಿಗೆ ಸೋಲಾಯಿತು. ಆದರೆ, ಈ ಬಾರಿ ಆ ತಪ್ಪು ಮರುಕಳಿಸಬಾರದು. ಮತದಾರರು ಸ್ವರೂಪ್ ಅವರನ್ನು ಗೆಲ್ಲಿಸುವ ಮೂಲಕ ಹಾಸನ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮನವಿ ಮಾಡಿದರು.
ಹಾಸನ ನಗರದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಕಳೆದ ಬಾರಿ ರಾಹುಲ್ಗಾಂಧಿ ಅವರು ನಮ್ಮನ್ನು ‘ಬಿಜೆಪಿಯ ಬಿ ಟೀಂ’ ಅಂತ ಹೇಳಿದ ಒಂದೇ ಒಂದು ಮಾತಿನಿಂದ ಒಂದು ಸಣ್ಣ ತಪ್ಪು ನಡೆಯಿತು. ನಿಮ್ಮಲ್ಲಿ ವಿನಂತಿ ಮಾಡ್ತೀನಿ, ನಮ್ಮ ಜಿಲ್ಲೆ ಇಡೀ ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ಬರಬೇಕು ಅನ್ನೋದು ರೇವಣ್ಣ ಅವರ ಕನಸು. ಅದಕ್ಕೆ ಸಹಕಾರ ನೀಡಿ” ಎಂದು ಮನವಿ ಮಾಡಿದರು.
“ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ತರಬೇಕು ಅಂತ 1,200 ಕೋಟಿ ರೂ. ಮಂಜೂರಾತಿ ನೀಡಿದೆವು. ಆದರೆ, ಆ ಜಾಗವನ್ನು ಸೈಟ್ ಮಾಡ್ತಾ ಇದ್ದಾರೆ. ತೀರ್ಮಾನ ಮಾಡೋರು ನೀವು. ರೇವಣ್ಣ ಅವರು ಹಾಸನ ಜಿಲ್ಲೆಯ ಜನತೆಗಾಗಿ ಅಭಿವೃದ್ಧಿ ಮಾಡುತ್ತಿದ್ದಾರೆಯೇ ಹೊರತು ರೇವಣ್ಣ ಅವರಿಗಾಗಿ ಅಲ್ಲ” ಎಂದು ತಿಳಿಸಿದರು.
“ನಮ್ಮ ರಾಜ್ಯದ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಬೇಕೆಂಬ ಚಿಂತನೆಯಿಂದ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ರೂಪಿಸಿದ್ದಾರೆ. ನಾನು ಮುಸ್ಲಿಮರಲ್ಲಿ ವಿನಂತಿ ಮಾಡ್ತೀನಿ, ನಾನು ಜಾತಿವಾದಿ ಅಲ್ಲ, ಈ ದೇಶದಲ್ಲಿ ನನ್ನ ಜಾತಿಗೆ ಕೊಟ್ಟ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಟ್ಟಿದ್ದೇನೆ” ಎಂದು ಹೇಳಿದರು.
“ಸ್ವರೂಪ್ ನನ್ನ ಮೂರನೇ ಮಗ ಅಂತ ಭವಾನಿ ಹೇಳಿದ್ದಾರೆ. ಯಾವುದೇ ಸಮಾಜದವರಿರಲಿ, ಒಂದೊಂದು ಮತ ಈ ಜಿಲ್ಲೆಯ ಸರ್ವನಾಶಕ್ಕೆ ಕಾರಣವಾಗಿರುವ ಯಾರೇ ಇರಲಿ ಅವರನ್ನು ತೆಗಿಲೇಬೇಕು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಶಪಥ ಮಾಡಿದರು.
“ನನಗೆ 92 ವರ್ಷ ವಯಸ್ಸಾಯಿತೆಂದು ನಾನು ಕುಳಿತುಕೊಳ್ಳಲ್ಲ. ಹುಟ್ಟು ಹೋರಾಟಗಾರ ನಾನು, ಪಂಜಾಬ್ನಲ್ಲಿ ಭತ್ತದ ತಳಿಗೆ ನನ್ನ ಹೆಸರು ಇಟ್ಟಿದ್ದಾರೆ. ನನಗೆ ಭಾರತರತ್ನಕ್ಕಿಂತ ಹೆಚ್ಚಿನ ಖುಷಿ ತಂದಿದೆ, ನಿಮ್ಮಲ್ಲಿ ಕೈ ಮುಗಿದು, ಕೈ ಚಾಚಿ ಕೇಳ್ತೀನಿ, ಈ ಬಾರಿ ಸ್ವರೂಪ್ನನ್ನು ಗೆಲ್ಲಿಸಿ” ಎಂದು ವಿನಂತಿ ಮಾಡಿದರು.
“ಕುಮಾರಸ್ವಾಮಿಯವರು ತಜ್ಞರಿಂದ ಮಾಹಿತಿ ಪಡೆದು ಚನ್ನಪಟ್ಟಣ ಕೆರೆಗೆ 144 ಕೋಟಿ ರೂ.ವೆಚ್ಚದಲ್ಲಿ ವಿನೂತನ ಉದ್ಯಾನ, ಪ್ರವಾಸಿ ತಾಣ ಮಾಡಲು ನಿರ್ಧರಿಸಿದ್ದರು. ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಜಿಲ್ಲೆಯ ಪ್ರಗತಿಗೆ ಮಾರಕವಾಗಿದ್ದಾರೆ, ಅದು ಅಂತ್ಯ ಆಗಬೇಕು. ಇದರಲ್ಲಿ ಯಾವುದೇ ದಯಾ, ದಾಕ್ಷಿಣ್ಯ ಇಲ್ಲ. ವಿಮಾನ ನಿಲ್ದಾಣಕ್ಕೆ 1200 ಕೋಟಿ ರೂ. ಮಂಜೂರಾತಿ ಮಾಡಿದರೆ, ಅದನ್ನು ನಿರ್ನಾಮ ಮಾಡಿ ಮಾರಾಟ ಮಾಡುವ ವ್ಯಕ್ತಿಯನ್ನು ಮತ್ತೆ ನೋಡಬಾರದು. ಇಂತಹವರನ್ನು ತೆಗೀರಿ, ದೇವೇಗೌಡ ಬದುಕಿದ್ದಾಗ ಈ ಶರೀರಕ್ಕೆ ನೋವು ಕೊಡಬೇಡಿ” ಎನ್ನುವ ಮೂಲಕ ಶಾಸಕ ಪ್ರೀತಂಗೌಡ ವಿರುದ್ಧ ದೇವೇಗೌಡರು ಗುಡುಗಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ದಲಿತರ ಸ್ವಾಭಿಮಾನ ಮಾರಾಟಕ್ಕಿಟ್ಟವರಿಗೆ ಪಾಠ ಕಲಿಸುತ್ತೇವೆ: ದಲಿತ ಮುಖಂಡ ನಾರಾಯಣಸ್ವಾಮಿ
ಹಾಸನದಲ್ಲಿ ಪ್ರೆಸ್ಟೀಜಿಯಸ್ ಐಐಟಿ ತರಬೇಕು ಅಂತ ಮೋದಿ ಮನೆ ಬಾಗಿಲಿಗೆ ಹೋಗಿದ್ದೆ. ಇವತ್ತಿನವರೆಗೂ ಆ ಮನುಷ್ಯನಿಗೆ ಮನಸ್ಸು ಬರಲಿಲ್ಲ. ಅವರಿಗೆ ಕಾಲೊಂದು ಕಟ್ಟಿಲ್ಲ. ಇನ್ನೆಲ್ಲಾ ರೀತಿಯಲ್ಲಿಯೂ ಮನವಿ ಮಾಡಿದ್ದೆ” ಎಂದು ಬೇಸರ ವ್ಯಕ್ತಪಡಿಸಿದರು. “ಒಂದೊಂದು ಹಳ್ಳಿ ಹಳ್ಳಿಗೆ ಹೋಗಿ, ಮನೆ ಮನೆಗೆ ಹೋಗಿ ಕಾಲಿಗೆ ಬಿದ್ದು ಸ್ವರೂಪ್ಗೆ ಮತ ಕೇಳಿ, ನನ್ನ ನಾಲಿಗೆಯಿಂದ ಇನ್ನೊಬ್ಬನ ಹೆಸರು ಹೇಳಲು ಸಾಧ್ಯವಿಲ್ಲ. ನನ್ನ ಮುಸಲ್ಮಾನ್ ಬಾಂಧವರ ಒಂದೇ ಒಂದು ಮತ ಬೇರೆಯವರಿಗೆ ಹೋಗಬಾರದು. ಯಾವ ವ್ಯಕ್ತಿ ನನ್ನ ಜಿಲ್ಲೆಯ ಅಭಿವೃದ್ಧಿ, ಪ್ರಗತಿಗೆ ಪ್ರಬಲವಾದ ಪೆಟ್ಟನ್ನು ಕೊಟ್ಟಿದ್ದಾನೆ ಅದು ಅಂತ್ಯವಾಗಲೇಬೇಕು” ಎಂದು ಕರೆ ನೀಡಿದರು.