ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅನೇಕ ಗ್ರಾಮಗಳು, ತಾಂಡಾಗಳಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನವಿಲ್ಲದೇ ಜನರು ಪರದಾಡುವಂತಾಗಿದ್ದು, ಅರಣ್ಯ ಪ್ರದೇಶ, ಕೆರೆ ದಂಡೆ, ಕಾಡಿನ ಬದಿ, ತಮ್ಮ ಜಮೀನುಗಳಲ್ಲಿ ಜನರು ಶವ ಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ರಾವುತನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಂಗಾಜಲ, ಗೋವಿಂದ ಬಡಾವಣೆ, ಸಿದ್ದಾಪುರ ಮತ್ತು ಬಸಲೀಕಟ್ಟಿ ನಾಲ್ಕು ತಾಂಡಾಗಳಲ್ಲಿ, 16 ಜನರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇಲ್ಲಿ ವಾಸವಿರುವವರು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದು ಕೂಲಿ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಪ್ರತ್ಯೇಕ ಜಾಗವಿಲ್ಲ.
ಸ್ವಂತ ಜಮೀನು ಇದ್ದವರು ತಮ್ಮ ಜಮೀನಿನಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದ ಬಡವರ ಸ್ಥಿತಿ ಹೇಳತೀರದು. ತಾಂಡಾಗಳಿಂದ ಎರಡು ಮೂರು ಕಿ.ಮೀ ದೂರ ಶವ ಹೊತ್ತು ಸಾಗಬೇಕು. ನಮಗೆ ಬುದ್ಧಿ ಬಂದಾಗಿನಿಂದಲೂ ನಮ್ಮ ತಾಂಡಾಗಳಿಗೆ ಸ್ಮಶಾನ ಜಾಗವೇ ಇಲ್ಲ. ಕಾಡಿನ ಬದಿಗೆ ಅಥವಾ ನಮ್ಮ ಹೊಲಗದ್ದೆಗಳಲ್ಲಿ ಶವಸಂಸ್ಕಾರ ಮಾಡುತ್ತೇವೆ ಎನ್ನುತ್ತಾರೆ ಬಸಲೀಕಟ್ಟಿ ತಾಂಡಾದ ಜನರು.
ಗಂಗಾಜಲ ತಾಂಡಾ ಮತ್ತು ಗೋವಿಂದ ಬಡಾವಣೆಯವರು ಮೇಡ್ಲೇರಿ ರಸ್ತೆ ಅರಣ್ಯ ಪ್ರದೇಶ ಸೊಸೈಟಿ ನಿವೇಶನದಲ್ಲಿ ಮತ್ತು ಹೊಲಗದ್ದೆಗಳ ಬದಿಗೆ, ಸಿದ್ದಾಪುರದ ಮತ್ತು ಬಸಲೀಕಟ್ಟಿ ತಾಂಡಾದವರು ಕಾಡಿನ ಬದಿಗೆ ಇರುವ ಜಾಗದಲ್ಲಿ ಅನೇಕ ವರ್ಷಗಳಿಂದ ಶವಸಂಸ್ಕಾರ ಮಾಡುತ್ತಿದ್ದಾರೆ. ಮೇಡ್ಲೇರಿ ಮುಖ್ಯ ರಸ್ತೆ ಬದಿಗೆ ಶವ ಸಂಸ್ಕಾರ ಮಾಡುತ್ತಿರುವ ಸ್ಮಶಾನದಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಮುಳ್ಳು ಕಂಠಿಗಳು ಬೆಳೆದು ಪಾಳು ಬಿದ್ದಿದೆ. ಸ್ಮಶಾನದಲ್ಲಿ ಕಸದ ದೊಡ್ಡ ದೊಡ್ಡ ರಾಶಿಗಳು ಬಿದ್ದಿವೆ. ಕಸದ ರಾಶಿಯಿಂದ ರಸ್ತೆಗಳು ಕಿರಿದಾಗಿದ್ದು ಸ್ಮಶಾನಕ್ಕೆ ಹೋಗಲು ಕಲ್ಲು ಮುಳ್ಳು ತುಳಿದುಕೊಂಡು ಹೋಗುವಂತಾಗಿದ್ದು, ಕೆರೆಗಳಲ್ಲಿ ನೀರು ತುಂಬಿದ್ದರೆ ಕಾಡಿನ ಬದಿಗೆ ಶವಸಂಸ್ಕಾರ ಮಾಡುತ್ತೇವೆ ಎನ್ನುತ್ತಾರೆ ಸ್ಥಳೀಯರು.
ರಾಣೇಬೆನ್ನೂರಿನಿಂದ ಮೇಡ್ಲೇರಿ ರಸ್ತೆಯ ಸ್ಮಶಾನಕ್ಕೆ ಹೋಗುವ ರಸ್ತೆ ಬದಿಗೆ ಹಳೇ ಕಟ್ಟಡ ಸಾಮಗ್ರಿ, ತೆಂಗಿನ ಮರಗಳ ದಿಮ್ಮಿ, ಕಲ್ಲು, ಮಣ್ಣು, ಇಟ್ಟಿಗೆ, ಸೀಮೆಂಟ್ ಕಾಲಿ ಚೀಲಗಳ ಗಂಟುಗಳು, ಆಸ್ಪತ್ರೆ ತ್ಯಾಜ್ಯ, ಹಳೇ ಬಟ್ಟೆ ಗಂಟುಗಳನ್ನು ಟ್ರ್ಯಾಕ್ಟರ್ನಲ್ಲಿ ತಂದು ಎಸೆಯುತ್ತಾರೆ. ಶವಯಾತ್ರೆ ಹೊತ್ತು ಸ್ಮಶಾನಕ್ಕೆ ತೆರಳುವಾಗ ತೊಂದರೆಯಾಗುತ್ತದೆ. ಇಲ್ಲಿನ ನೀರಿನ ತೊಟ್ಟಿಯಲ್ಲಿ ಕಸ ತುಂಬಿ, ನೀರು ಪಾಚಿಗಟ್ಟಿದ್ದರಿಂದ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ ಎನ್ನುವುದು ಸ್ಥಳೀಯರ ದೂರು.
ಸ್ಮಶಾನಕ್ಕೆ ಜಾಗ ನೀಡಬೇಕೆಂದು ತಹಸೀಲ್ದಾರ್ ಮತ್ತು ಜನ ಪ್ರತಿನಿಧಿಗಳಿಗೆ ತಾಂಡಾದ ಯುವಕರು ಅನೇಕ ಬಾರಿ ಮನವಿ ಮಾಡಿದ್ದಾರೆ ಆದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಚುನಾವಣೆ ಬಂದಾಗ ಭರವಸೆ ಕೊಟ್ಟು ಹೋಗುತ್ತಾರೆ. ಚುನಾವಣೆ ಮುಗಿದ ಮೇಲೆ ಯಾರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಇಲ್ಲಿನ ಯುವಕರು.
ಸರ್ಕಾರ ಕೂಡಲೇ ನಾಲ್ಕು ತಾಂಡಾಗಳಿಗೆ ಸರ್ಕಾರಿ, ಅರಣ್ಯ ಇಲಾಖೆ ಅಥವಾ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಜಮೀನನ್ನು ತೆಗೆದುಕೊಂಡು ತಾಂಡಾಗಳ ಹೆಸರಿಗೆ ಸ್ಮಶಾನಕ್ಕೆ ಜಮೀನನ್ನು ನೀಡಬೇಕೆಂಬುದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.