ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಹಾವೇರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿದರು.
ಕೃಷಿಗೆ ಬೇಕಾಗುವ ರಸಗೊಬ್ಬರ, ಬೀಜ, ಉಳಿಮೆ, ಕೂಲಿ, ಔಷಧಿಗಳ ಬೆಲೆ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಕೊಡುವುದರ ಮೂಲಕ ಕಾನೂನು ಮಾನ್ಯತೆ ನೀಡಬೇಕು. ಬೆಲೆ ಕುಸಿಯದಂತೆ ನೋಡಿಕೊಳ್ಳುವುದರ ಜತೆಗೆ ದೆಹಲಿ ಗಡಿ ಭಾಗದಲ್ಲಿ ರೈತ ಚಳುವಳಿ ಹತ್ತಿಕ್ಕಲು ರಸ್ತೆಗಳಿಗೆ ಕಂದಕ ಹೊಡೆಸುವುದು, ಜಲ ಫಿರಂಗಿ ಸಿಡಿಸುವುದು, ಅಶ್ರುವಾಯು ಪ್ರಯೋಗ ಮಾಡುವುದು, ಲಾಟಿಚಾರ್ಜ್ ಹಾಗೂ ಗುಂಡು ಹಾರಿಸಿ ಚಿತ್ರಹಿಂಸೆ ಕೊಡುವುದು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ನಾಲ್ಕು ಜನರಿಗೆ ಗುಂಡು ಹಾರಿಸಿ ಕೊಲೆ ಮಾಡಿರುವುದು ಖಂಡನೀಯ” ಎಂದು ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.
“ಎರಡು ವರ್ಷ ಅತಿವೃಷ್ಟಿ ಹಾಗೂ ಪ್ರಸ್ತುತ ವರ್ಷದಲ್ಲಿ ಕಂಡರಿಯದಂತಹ ಭೀಕರ ಬರಗಾಲಕ್ಕೆ ತುತ್ತಾಗಿ ಕೇಂದ್ರ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿ ಆರು ತಿಂಗಳು ಗತಿಸಿವೆ. ರೈತರು ಸಂಕಟದಲ್ಲಿರುವುದರಿಂದ ಪ್ರತಿ ಎಕರೆಗೆ ₹25,000 ಪರಿಹಾರ ಕೊಡಬೇಕು. ಕೇಂದ್ರ ಸರ್ಕಾರ ರೈತರ ಬೆಳೆಯನ್ನು ಕೃಷಿ ಖರ್ಚನ್ನು ಲೆಕ್ಕಹಾಕಿ ಕೃಷಿ ಲಾಭವಾಗಲು ₹100 ಖರ್ಚು ಮಾಡಿದರೆ ಅದಕ್ಕೆ ₹50 ಸರ್ಕಾರ ತುಂಬಿ ಕೊಡಬೇಕೆಂಬ ಸ್ವಾಮಿನಾಥನ್ ವರದಿಯನ್ನು ರೈತರ ಹಿತದೃಷ್ಟಿಯಿಂದ ಕೂಡಲೇ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
“ಹಾವೇರಿ ಜಿಲ್ಲೆ ಅತಿವೃಷ್ಟಿ ಹಾಗೂ ಬರಗಾಲವನ್ನು ಎದುರಿಸುತ್ತಿದ್ದು, ಹಾಕಿದ ಬಂಡವಾಳ ಬಾರದೆ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕೃಷಿ ಸಾಲ ಮನ್ನಾ ಮಾಡಬೇಕು. ಹೆಸ್ಕಾಂ ಕಂಪನಿಗೆ ಹೊಸದಾಗಿ ಹಾಕಿಸಿರುವ ಬೋರ್ವೆಲ್ಗಳಿಗೆ ಅರ್ಜಿ ತೆಗೆದುಕೊಳ್ಳುವುದನ್ನು ನಿಲ್ಲಿಸಿರುವುದರಿಂದ ತೊಂದರೆಯಾಗಿದ್ದು, ಕೂಡಲೇ ರೈತರಿಂದ ಅರ್ಜಿ ಪಡೆಯಬೇಕು. ಅಕ್ರಮ ಸಕ್ರಮದಲ್ಲಿ ಹಣ ತುಂಬಿದ ರೈತರಿಗೆ ಕಂಬ, ವೈರ್, ಟಿ.ಸಿಗಳನ್ನು ತಕ್ಷಣ ಕೊಡಬೇಕು” ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಚಳ್ಳೆರ ಮಾತನಾಡಿ, “ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಪ್ರಾರಂಭಿಸಬೇಕೆಂದು ಅನೇಕ ವರ್ಷಗಳಿಂದ ರೈತ ಸಂಘ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಬಹಳ ಅವಶ್ಯವಿರುವುದರಿಂದ ಕೂಡಲೇ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ಬೆಳೆ ವಿಮಾ ತುಂಬಿದ ರೈತರಿಗೆ ಮಧ್ಯಂತರ ಶೇ.25ರಷ್ಟು ಪರಿಹಾರ ಕೊಟ್ಟಿದ್ದು, ಉಳಿದ ಶೇ.75ರಷ್ಟು ಭಾಗದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ತುಂಗಭದ್ರಾ ವರದಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಟುತ್ತಾ ಸಾಗಿದ್ದು, ತ್ವರಿತವಾಗಿ ಕಾಮಗಾರಿ ಮುಗಿಸಿ ನೀರು ತುಂಬಿಸಬೇಕು” ಎಂದು ಆಗ್ರಹಿಸಿದರು.
“ಹನಿ ನೀರಾವರಿಗೆ ಬೇಕಾಗುವ ಡ್ರಿಪ್, ಸ್ಪ್ರಿಂಕ್ಲರ್, ಎಸ್ಸಿ/ಎಸ್ಟಿ ಜನಾಂಗಕ್ಕೆ ಮಾತ್ರ ಏಳು ವರ್ಷಕ್ಕೊಮ್ಮೆ ಕೊಡಲು ಆದೇಶ ಮಾಡಿ ಜನರಲ್ಗೆ ಸಂಪೂರ್ಣ ಈ ಯೋಜನೆಯಿಂದ ಹೊರತುಪಡಿಸಿರುವುದು ಯಾವ ನ್ಯಾಯ. ರೈತರ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುವುದು ಸರಿ ಇಲ್ಲ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪ್ರತಿ ಮೂರು ವರ್ಷಕ್ಕೊಮ್ಮೆ ಮಂಜೂರು ಮಾಡುವಂತೆ ಆದೇಶ ಮಾಡಬೇಕು. ಎಲ್ಲ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಬೇಕು” ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಿ: ಬಸನಗೌಡ ದದ್ದಲ್
ಜಿಲ್ಲಾಧ್ಯಕ್ಷ ರಾಮಣ್ಣ ಕೆಚಳ್ಳೆರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಎಲಿ, ಮಹಮದಗೌಸ ಪಾಟಿಲ್, ಮಾಲತೇಶ ಪೂಜಾರ, ಅಡಿವೆಪ್ಪ ಆಲದಕಟ್ಟಿ, ಶಂಕ್ರಣ್ಣ ಶಿರಗೂಂಬಿ, ರುದ್ರಗೌಡ ಕಾಡನಗೌಡ್ರ, ಶಿವಬಸಪ್ಪ ಗೋವಿ, ಶಿವಯೋಗಿ ಚ ಹೊಸಗೌಡ್ರ, ಅಡಿವೆಪ್ಪ ಆಲದಕಟ್ಟಿ, ರಾಜು ತರ್ಲಗಟ್ಟ, ಮರಿಗೌಡ್ರ ಪಾಟಿಲ್, ಸುರೇಶ್ ಹೊನ್ನಪ್ಪನವರ, ಮಾಲತೇಶ ಪರಪ್ಪನವರ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ, ಪ್ರಭುಗೌಡ ಪ್ಯಾಟಿ ಸೇರಿದಂತೆ ಇತರರು ಇದ್ದರು.