ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಜ್ಯ ಸಮಿತಿ ಏರ್ಪಡಿಸಿದ್ದ ರಾಜ್ಯ ವಿದ್ಯಾರ್ಥಿನಿಯರ ಸಮಾವೇಶವು ಕಲಬುರಗಿಯಲ್ಲಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯಿಂದ ಎಸ್ಎಫ್ಐ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
“ಗ್ರಾಮೀಣ ಪ್ರದೇಶದಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರು ಅನೇಕ ಸಮಸ್ಯೆ ಮತ್ತು ಕೊರತೆಗಳನ್ನು ಅನುಭವಿಸುತ್ತಿದ್ದಾರೆ. ಶಿಕ್ಷಣ ಕೇಂದ್ರಗಳಿರುವ ಕಡೆಗೆ ಬಸ್ಗಳು ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ಓದುವ ಶಾಲಾ ಕಾಲೇಜುಗಳಲ್ಲಿ ಶೌಚಾಲಯ, ನೀರು, ಆಟದ ಮೈದಾನ ಇರುವುದಿಲ್ಲ. ಹಸಿವೆಯಲ್ಲಿ ಬಂದು ಅವ್ಯವಸ್ಥೆಯಲ್ಲಿ ಓದಿ ಮನೆಗೆ ಹೋಗಿ ತಲುಪುವುದರೊಳಗಾಗಿ ಎಲ್ಲದರಲ್ಲಿ ನಿರಾಸಕ್ತಿ ಉಂಟಾಗಿ ಶರೀರದ ಮೇಲೂ ಮನಸಿನ ಮೇಲೂ ದುಷ್ಪರಿಣಾಮವಾಗುತ್ತಿದೆ” ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ತಿಳಿಸಿದರು
“ತೀವ್ರ ಬಡತನದ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಕಾರ್ಮಿಕರಾಗಿ ದುಡಿಯಬೇಕಾಗಿದೆ. ಉದ್ಯೋಗ ಖಾತ್ರಿಯಲ್ಲಿ ದುಡಿಯುವ ವಿದ್ಯಾರ್ಥಿನಿಯರ ಸಂಖ್ಯೆಯು ಹೆಚ್ಚುತ್ತಿದೆ. ದಲಿತ, ಹಿಂದುಳಿದ ವಿದ್ಯಾರ್ಥಿನಿಯರಂತೂ ಒಂದಲ್ಲ ಒಂದು ದುಡಿಮೆಗೆ ಒಳಗಾಗುತ್ತಿದ್ದಾರೆ” ಎಂದರು.
“ಪ್ರತಿನಿಧಿಗಳ ಅಧಿವೇಶನವು ಎರಡು ದಿನಗಳ ಕಾಲ ಕಲಬುರಗಿಯ ಕನ್ನಡ ಭವನದಲ್ಲಿ ನಡೆಯುತ್ತಿದೆ. ಈ ಸಮಾವೇಶದಲ್ಲಿ ಈ ಮೇಲಿನ ವಿಚಾರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಕಷ್ಟು ಪಾಠಗಳು, ಚರ್ಚೆಗಳು ನಡೆಯಲಿವೆ. ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಆಯ್ದ ವಿದ್ಯಾರ್ಥಿನಿಯರ ಪ್ರತಿನಿಧಿಗಳು, ನಾಡಿನ ಖ್ಯಾತರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಜೆಎನ್ಯು ಸಂಶೋಧನಾ ವಿದ್ಯಾರ್ಥಿ ಹಾಗೂ ಎಸ್ಎಫ್ಐ ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ದೀಪ್ಸಿತಾ ಧರ್ ಮುಖ್ಯ ಅತಿಥಿಯಾಗಿ ಬರಲಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಡಿ.23, 24ರಂದು ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ
ಸಮಾವೇಶಕ್ಕೆ ಜಿಲ್ಲೆಯಿಂದ ಮಲ್ಲಿಗೆ ಜೆಟ್ಟೆಣ್ಣನವರ, ಲಕ್ಷ್ಮೀ ಕೊಡಿಕೊಪ್ಪ, ಪೂರ್ಣಿಮಾ ಡವಗಿ, ಸಂಗೀತಾ ಆರ್ , ಜಯಮ್ಮ ಮದ್ದಿ, ಕಾವ್ಯ , ಲಕ್ಷ್ಮೀ .ಡಿ, ಸಹಾನ, ವನಿತಾ ಮದ್ದೆರ್, ಎಸ್ಎಫ್ಐ ಶಿಗ್ಗಾಂವಿ ತಾಲೂಕು ಕಾರ್ಯದರ್ಶಿ ಅರ್ಜುನ ರಜಪೂತ ವಿದ್ಯಾರ್ಥಿ ಪ್ರತಿನಿಧಿ ಅಧಿವೇಶನದಲ್ಲಿ ಭಾಗವಹಿಸಿಲಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ತಿಳಿಸಿದರು.