ತಾವು ಕಲಿತಾ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಿಸಿಕೊಂಡು ಆರು ವರ್ಷಗಳೇ ಕಳೆದಿವೆ. ಆದರೆ, ಆ ಶಾಲೆಯ ಅಭಿವೃದ್ಧಿಗೆ ಸರ್ಕಾರ ಮುಂದಾಗುತ್ತಿಲ್ಲ. ಶಾಲೆಯೂ ಮೂಲಭೂತ ಸೌಲಭ್ಯಗಳಿಂದ ಕೊರಗುತ್ತಿದೆ. ಶಾಲೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಯುವ ಗುಂಪು ಶಾಲೆಗೆ ಹೊಸ ಸ್ಪರ್ಶ ನೀಡಿ ಮಾದರಿಯಾಗಿದೆ. ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಸರ್ಕಾರಿ ಶಾಲೆ ಕಥನ.
ಕೃಷ್ಣ ನದಿ ತೀರದಲ್ಲಿರುವ ಹಿಪ್ಪರಗಿ ಗ್ರಾಮದಕ್ಕೆ 1918ರಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಶಾಲೆ, ಆಗ್ಗಾಗೆ ನದಿಯ ಪ್ರವಾಹಕ್ಕೆ ತುತ್ತಾಗಿ, ಶಿಥಿಲಗೊಂಡಿತ್ತು. 2018ರಲ್ಲಿ ಶಾಲೆ ಶತಮಾನೋತ್ಸವವನ್ನು ಆಚರಿಸಿಕೊಂಡಿತ್ತು. ಆದರೆ, ಶಾಲೆಗೆ ಸರ್ಕಾರ ಯಾವುದೇ ಅನುದಾನ ನೀಡದೆ, ಸೊರಗುತ್ತಿತ್ತು. ಇದೀಗ, ಗ್ರಾಮದ ಉತ್ಸಾಹಿ ಯುವಕರ ಗುಂಪು ಶಾಲೆಯ ಗತವೈಭವವನ್ನು ಮರಳಿ ತಂದಿದ್ದಾರೆ. ಅವರ ಪ್ರಯತ್ನದಿಂದಾಗಿ ಶಾಲೆಗೆ ಹೊಸ ಕಳೆ ಬಂದಿದೆ.
16 ಕೊಠಡಿಗಳಿರುವ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಪಾಠ ಮಾಡಲಾಗುತ್ತಿದೆ. ಶಾಲೆಯ ಚಾವಣಿಗಳು ಕುಸಿದಿದ್ದವು, ಗೋಡೆಗಳಿಂದ ಸಿಮೆಂಟ್ ಧೂಳು ಉದುರುತ್ತಿತ್ತು. ಕಿಟಕಿ, ಬಾಗಿಲುಗಳು ಹಾಗೂ ಗೂಡೆಗಳು ಸುಣ್ಣ-ಬಣ್ಣ ಕಾಣದೆ, ಪಾಳು ಕೊಂಪೆಯಂತೆ ಬಾಸವಾಗುತ್ತಿತ್ತು. ಕಾಂಪೌಂಡ್, ಕುಡಿಯುವ ನೀರು, ಡೆಸ್ಕ್, ಶೌಚಾಲಯ, ಕ್ರೀಡಾಂಗಣ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಲ್ಲದೆ ನರಳುತ್ತಿತ್ತು. ಶಾಲೆಯ 16 ಕೊಠಡಿಗಳ ಪೈಕಿ ಪ್ರವಾಹದ ಪರಿಣಾಮ 13 ಕೊಠಡಿಗಳು ಶಿಥಿಲಗೊಂಡಿದ್ದವು.
ಶಾಲೆಯ ದುಸ್ಥಿತಿ ಕಂಡ ಯುವಕರ ಗುಂಪು, ಮೊದಲಿಗೆ 10 ಮಂದಿಯಿಂದ ಒಟ್ಟು 1.20 ಲಕ್ಷ ರೂ. ಸಂಗ್ರಹಿಸಿ, ಮೂಲ ಸೌಕರ್ಯಗಳನ್ನು ಒದಗಿಸಿತ್ತು. ಬಳಿಕ, ಹಂತ ಹಂತವಾಗಿ ಹಣ ಸಂಗ್ರಹಿಸಿ, ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಮ್ಮೂರಿನ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿರುವುದು ಹೆಮ್ಮೆಯ ಸಂಗತಿ. ಶಾಲೆಗೆ ಹಲವರು ನಾನಾ ರೀತಿಯ ಸೌಕರ್ಯಗಳನ್ನು ಒದಗಿಸಿದ್ದಾರೆ. ಹೀಗಾಗಿ, ಶಾಲೆಯ ವಾತಾವರಣ ಹಿಮ್ಮಡಿಗೊಂಡಿದೆ ಎಂದು ಗ್ರಾಮದ ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಗ್ರಾಮಸ್ಥರೇ ಶಿಕ್ಷಕರು
ಶಾಲಾ ಸಮಯದಲ್ಲಿ ಯಾರಾದರೂ ಶಿಕ್ಷಕರು ರಜೆ ಇದ್ದಾಗ ಮತ್ತು ಸರ್ಕಾರದ ‘ವಾರದ ಅತಿಥಿ’ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳುತ್ತಿರುವ ಗ್ರಾಮಸ್ಥರು, ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಸ್ಥಳೀಯ ಸಂಪನ್ಮೂಲಗಳ ಬಳಸಿಕೊಂಡು ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ವಿಶೇಷವಾಗಿ ಕಂಪ್ಯೂಟರ್ ಟೀಚರ್ಗಳು ಇಲ್ಲದಿದ್ದಾಗ ಕಂಪ್ಯೂಟರ್ ತರಬೇತಿ ನೀಡುವುದರ ಜೊತೆಗೆ,
ಇತರ ವಿಷಯಗಳನ್ನು ಮಕ್ಕಳಿಗೆ ಉತ್ಸಾಹದಿಂದ ಕಲಿಸುತ್ತಿದ್ದಾರೆ.
“ನಮ್ಮ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಲಭಿಸಿದಂತಾಗಿದೆ. ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳ ಕೆಲಸದಿಂದಾಗಿ ಶಾಲೆಯ ಕೀರ್ತಿ ಹೆಚ್ಚಾಗಿದೆ” ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕುಂಬಾರ ಹೇಳಿದ್ದಾರೆ.
“ಹಿಪ್ಪರಗಿ ಸರ್ಕಾರಿ ಶಾಲೆಯು ಗ್ರಾಮದ ಯುವಕರು ಹೊಸ ಪ್ರಯತ್ನದಿಂದ ರಾಜ್ಯದ ಗಮನ ಸೆಳೆಯುತ್ತಿದೆ.
ಶಿಥಿಲಾವಸ್ಥೆಗೆ ತಲುಪಿದ್ದ ಶಾಲೆಯಲ್ಲಿ ದುರಸ್ತಿ ಕಾಮಗಾರಿ ನಡೆಸಿ, ಶಾಲೆಯ ಅಂದ ಚಂದವನ್ನು ಹೆಚ್ಚಿಸಿದ್ದಾರೆ. ಶತಮಾನದ ಶಾಲೆಯನ್ನು ಮಾದರಿಯಾಗಿ ಮಾಡುವ ಪ್ರಯತ್ನ ನಡೆದಿದೆ. ಇಲಾಖೆಯ ಪರವಾಗಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಈ ಹಿಂದೆ ಜಮಖಂಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸಿ.ಎಂ ನ್ಯಾಮಗೌಡ ಹೇಳಿದ್ದಾರೆ.