- ಅಧಿಕಾರ ಸಿಗಲಿಲ್ಲ ಎಂದು ಮನೆ ಧ್ವಂಸ ಮಾಡುವ ಪ್ರವೃತ್ತಿಯೂ ನನ್ನದಲ್ಲ
- ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ: ಬಿ ಕೆ ಹರಿಪ್ರಸಾದ್
ಮೊದಲಿನಿಂದಲೂ ಸ್ವಂತ ಮನೆಯಲ್ಲೇ ಇದ್ದವನು. ಬಾಡಿಗೆ ಮನೆ ತಗೊಂಡು ಬಂದವ ನಾನಲ್ಲ. ಅಧಿಕಾರ ಸಿಗಲಿಲ್ಲ ಎಂದು ಮನೆ ಧ್ವಂಸ ಮಾಡುವ ಪ್ರವೃತ್ತಿಯೂ ನನ್ನದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಮಾರ್ಮಿಕವಾಗಿ ನುಡಿದರು.
ಸಚಿವ ಸ್ಥಾನ ತಪ್ಪಿದ್ದಕ್ಕೆ ಬಿ ಕೆ ಹರಿಪ್ರಸಾದ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಸಚಿವ ಸಂಪುಟ ರಚನೆಯಾದ ನಂತರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ತಮ್ಮ ರಾಜೀನಾಮೆ ವಿಚಾರವನ್ನು ತಳ್ಳಿಹಾಕಿದರು.
“ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ. ಅದೆಲ್ಲ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದಂತಹ ವಿಷಯ. ನನ್ನ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿಯವರು ನನ್ನ ಮೇಲೆ ಜವಾಬ್ದಾರಿ ಕೊಟ್ಟು ಪರಿಷತ್ ಸದಸ್ಯತ್ವ ಸ್ಥಾನ ನೀಡಿದ್ದಾರೆ. ಅದನ್ನ ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಸೋನಿಯಾಗಾಂಧಿ ಹಾಗೂ ಸಭಾಪತಿಯವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ ನಾನು ಪರಿಷತ್ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆ” ಎಂದರು.
“ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನ ಮಾಡೊದು ಸಂಪ್ರದಾಯ, ಪದ್ದತಿ ಹಿಂದಿನಿಂದಲೂ ಇತ್ತು. ಆ ಸಂಪ್ರದಾಯ ಮುರಿದಿದ್ದಾರೆ. ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್ನಲ್ಲಿ ಸಭಾನಾಯಕರನ್ನಾಗಿ ಯಾರನ್ನು ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೇಳುತ್ತಾರೆ” ಎಂದು ಹೇಳಿದರು.
ಅಹಿಂದ ತರ ಯೋಚನೆ ನನ್ನದಲ್ಲ
“ನನ್ನ ಸಾಮಾಜಿಕ ನ್ಯಾಯಕ್ಕೂ ಅಹಿಂದಕ್ಕೂ ಬಹಳ ವ್ಯತ್ಯಾಸವಿದೆ. ನನ್ನ ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ಸಿಗಬೇಕು ಎಂಬುದು. ಅಹಿಂದ ತರ ಯೋಚನೆ ಮಾಡುವ ಪ್ರವೃತ್ತಿ ನನ್ನದಲ್ಲ. ಸರ್ವ ಧರ್ಮ ಸಮಪಾಲು ಎಂಬುದರಲ್ಲಿ ನಾನು ನಂಬಿಕೆ ಇಟ್ಟವನು. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರ್ತಿನಿ” ಎಂದರು.
ಹೊಸ ಸಚಿವರು ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಇರುತ್ತಾರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಐದೇನು ಐದು ನೂರು ವರ್ಷ ಬೇಕಾದರೂ ಇರಬಹುದು. ಯಾರಿಗೆ ಗೊತ್ತು. ಬಿಜೆಪಿ ಅವರು ಹೀಗೆ ಕನಸು ಕಂಡಿದ್ದರು. ನಾವೂ ಕನಸು ಕಾಣೋಣ” ಎಂದು ವ್ಯಂಗ್ಯವಾಗಿ ನುಡಿದರು.
“ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಮಾಡಿದ್ದೇವೆ. ಇನ್ನೊಂದು ಹೆಜ್ಜೆ ಬಾಕಿ ಇದೆ ಅಷ್ಟೇ. ಸಮಯ ಬಂದಾಗ ಉಳಿದಿದ್ದು ಹೇಳೋಣ. ಈಗ ಡಿಸಿಎಂ ಆಗಿದ್ದಾರೆ. ವಾಟ್ಸಾಪ್ ಯುನಿವರ್ಸಿಟಿ ಮತ್ತು ಟೆಲಿವಿಷನ್ ಚೆನ್ನಾಗಿದ್ದರೆ ಸುಸೂತ್ರವಾಗಿ ಈ ಸರ್ಕಾರ ನಡೆಯುತ್ತದೆ. ಅಧಿಕಾರ ಹಂಚಿಕೆ ಕೇವಲ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲಾ ಮತ್ತು ವೇಣುಗೋಪಾಲ ಹಾಗೂ ಈ ಇಬ್ಬರು ನಾಯಕರಿಗೆ ಅಷ್ಟೇ ಗೊತ್ತಿದೆ. ಬಾಕಿ ಮಂದಿ ಹೇಳುವುದು ಯಾರನ್ನೋ ಸಂತೋಷಪಡಿಸಲು ಅಷ್ಟೇ” ಎಂದರು.
ಈ ಸುದ್ದಿ ಓದಿದ್ದೀರಾ? ಮೊದಲ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಎಂಟು ಮಂದಿ
“ರಾಹುಲ್ ಗಾಂಧಿ ಅವರನ್ನು ಸದಾ ಭೇಟಿ ಮಾಡುವೆ. ಆದರೆ, ಅದನ್ನು ಮಾಡಿ, ಇದನ್ನು ಮಾಡಿ ಎಂದು ಬೇಡಿಕೊಳ್ಳುವ ಕೆಳಮಟ್ಟದ ರಾಜಕಾರಣಿ ನಾನು ಅಲ್ಲ. ಅವರಿಗೆ ಅನಿಸಿದ್ದು ಅವರು ಮಾಡಬೇಕು. ಕಾಲಬಂದಾಗ ಎಲ್ಲ ಹೇಳುವೆ. ಟೈಮ್ ಇಸ್ ಮೆಡಿಸನ್” ಸೂಚ್ಯವಾಗಿ ಹೇಳಿದರು.
“ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ನೇತ್ವತ್ವದಲ್ಲಿ ಆ ಸಮುದಾಯ, ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆಲ್ಲಿಸಿದೆ. ಕುಮಾರಸ್ವಾಮಿ ಹೇಳುವುದು ಸುಳ್ಳು. ಕುಮಾರಸ್ವಾಮಿ ಈಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆ ಸಮುದಾಯ ಹೊಸ ನಾಯಕನಿಗೆ ಮಣೆ ಹಾಕಿ ಕಾಂಗ್ರೆಸ್ ಕೈಹಿಡಿದಿದೆ” ಎಂದು ತಿಳಿಸಿದರು.
“ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡೋಕೆ ಅದು ಎಪಿಎಂಸಿ ಮಾರ್ಕೆಟ್ ಅಲ್ಲ. ನೀತಿ ನಿಯಮ ರೂಪಿಸಿ ಜಾರಿಗೆ ತರುತ್ತೇವೆ. ಪ್ರಜಾಪ್ರಭುತ್ವದಲ್ಲಿ ಜನರ ಯೋಗಕ್ಷೇಮ ಮುಖ್ಯ. ನಾವು ಕಾಪಾಡುತ್ತೇವೆ” ಎಂದರು.
“ನೂತನ ಸಚಿವ ಸಂಪುಟದಲ್ಲಿ ಕೆಲವು ಜಿಲ್ಲೆಯ ಪ್ರಾತಿನಿಧ್ಯ ಬಿಟ್ಟು ಹೋಗಿದೆ. ನೋಡೋಣ ಹೇಗೆ ಸರಿದೂಗಿಸುತ್ತಾರೆ? ಲೋಕಸಭೆ ಚುನಾವಣೆಗೆ ಈ ಅಸಮಾಧಾನ ಕಾರಣವಾಗಲ್ಲ. ಲೋಕಸಭೆ ಚುನಾವಣೆ ನಡೆಯುವ ರೀತಿಯೇ ಬೇರೆ. ವಿಧಾನ ಸಭೆ ಚುನಾವಣೆ ನಡೆಯುವ ರೀತಿಯೇ ಬೇರೆ” ಎಂದು ಹೇಳಿದರು.