ಕೇಂದ್ರ ಸರ್ಕಾರದಿಂದ ರೈತರ ಮೇಲೆ ನಡೆಸುತ್ತಿರುವ ನಿರಂತರ ದಾಳಿ, ಹಲ್ಲೆ, ದೌರ್ಜನ್ಯ ಖಂಡಿಸಿ ಕರ್ನಾಟಕದ ತೆರಿಗೆ ಪಾಲನ್ನು ಹಂಚಿಕೆಯಲ್ಲಿ ಮಾಡುತ್ತಿರುವ ದೊರಣೆ ವಿರೋಧಿಸಿ ಕಲಬುರಗಿ ಲೋಕಸಭಾ ಸದಸ್ಯರ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘ, ಕರ್ನಾಟಕ ರಾಜ್ಯ ಸಮಿತಿ ಖಾಲಿ ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರಧಾನ ಕಾರ್ಯದರ್ಶಿ ಸುನಿಲ್ ಮಾರುತಿ ಮಾನಪಡೆ ಮಾತನಾಡಿ, “ರೈತ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರದ ವಿಪರೀತ ದುರ್ಬಳಕೆ ಮಾಡಿಕೊಂಡು ಮೋದಿ ಸರ್ಕಾರ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಲಾಟಿ ಪ್ರಹಾರ, ರಬ್ಬರ ಬುಲೆಟ್, ಅಶ್ರುವಾಯು ಸಿಡಿಸಿ ಮತ್ತು ರೈತರ ಸಾಮೂಹಿಕ ಬಂಧನ ಮಾಡಿವುವುದು ಖಂಡಿನೀಯ” ಎಂದರು.
“ರೈತರ ಮೇಲೆ ಅಶ್ರುವಾಯು ಶೆಲ್ಗಳನ್ನು ಎಸೆಯಲು ಡ್ರೋನ್ಗಳನ್ನು ಬಳಸಿ ಪಂಜಾಬ ಮತ್ತು ಹರಿಯಾಣ ರೈತರ ಮೇಲೆ ನಡೆಸುತ್ತಿರುವ ಈ ಪೈಶಾಚಿಕ ದೌರ್ಜನ್ಯ ಕೃತ್ಯವು ಭಯೋತ್ಪಾದಕರ ವಿರುದ್ಧ, ಭಾರತದಲ್ಲಿ ನುಸುಳುಕೋರರ ವಿರುದ್ಧ ನಡೆಸುವಂತೆ ರೈತರ ಮೇಲೆ ದಾಳಿ ನಡೆಸುತ್ತಿರುವುದು ಅತ್ಯಂತ ಆಘಾತಕಾರಿಯಾಗಿದೆ” ಎಂದು ಹೇಳಿದರು.
“ರೈತರ ಪ್ರಮುಖ ಬೇಡಿಕೆಯಾದ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಸೇರಿಸಿದ ಶಾಸನಬದ್ಧ ಕನಿಷ್ಟ ಬೆಂಬಲ ಬೆಲೆ ಒದಗಿಸುವುದು, 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಮತ್ತು ಪ್ರಸ್ತುತ ಪ್ರಧಾನಿ ನೀಡಿದ ಭರವಸೆಯಾಗಿದೆ. 10 ವರ್ಷಗಳು ಕಳೆದರೂ ಈ ಭರವಸೆ ಈಡೇರಿಲ್ಲ” ಎಂದು ಆರೋಪಿಸಿದರು.
ಬೆಂಬಲ ಬೆಲೆ ಸೇರಿದಂತೆ ರೈತರ ಬೇಡಿಕೆ ಈಡೇರಿಸುವಂತೆ ಕಳೆದ ವರ್ಷ ರೈತರು ನಡೆಸಿದ ಬೃಹತ್ ಹೋರಾಟದ ಸಂದರ್ಭದಲ್ಲಿ 700ಕ್ಕೂ ಅಧಿಕ ಮಂದಿ ರೈತರು ವೀರ ಮರಣ ಹೊಂದಿದ್ದಾರೆ. ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡುವುದು ಮತ್ತು ರೈತರ ಮೇಲೆ ಹೂಡಿರುವ ಸಾವಿರಾರು ಕೇಸುಗಳು ಹಿಂಪಡೆಯಲು ಒಬ್ಬ ಮಂತ್ರಿಯ ಮಗ ರೈತರ ಮೇಲೆ ಕಾರನ್ನು ಹರಿಸಿ ಕೊಲೆ ಮಾಡಿರುವುದನ್ನು ವಿರೋಧಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಮೋದಿ ಸರ್ಕಾರವೇ ಮುಂದೆ ನಿಂತು ದಾಳಿ ನಡೆಸುತ್ತಿದೆ. ಇದನ್ನು ನೋಡಿದರೆ ಇವರು ರೈತ ವಿರೋದಿಗಳಾಗಿದ್ದು, ಕಾರ್ಪೊರೇಟ್ ಕಂಪನಿಯ ಏಜೆಂಟರು ಎಂಬುವುದು ಸ್ಪಷ್ಟವಾಗಿದೆ” ಎಂದರು.
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ದಬ್ಬಾಳಿಕೆ ದೌರ್ಜನ್ಯ ನೆಸುವುದನ್ನು ನಿಲ್ಲಿಸಿ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮೋದಿ ಸರ್ಕಾರದ ವಿರುದ್ದ ರೈತ ಸಂಘಟನೆಗಳು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
“ಕರ್ನಾಟಕ ರಾಜ್ಯಕ್ಕೆ ಅನುದಾನದಲ್ಲಿ ತಾರತಮ್ಯ, ಅನ್ಯಾಯ ದೋರಣೆ ಖಂಡನೀಯ. ಕಳೆದ 10 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನವನ್ನು ನೀಡದೆ ದೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರು ಸಂಸತ್ತಿನಲ್ಲಿ ರಾಜ್ಯಗಳ ತೆರಿಗೆ ವಿಚಾರವಾಗಿ ಮಾತನಾಡಿ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ, ದಾಖಲೆ ನೀಡಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಕನ್ನಡಿಗರಿಗೆ ಮಾಡಿದ ದ್ರೋಹವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಣಕಾಸು ಆಯೋಗಗಳು ಪರಿವರ್ಧಿಗೆ ಇರದೆ ಇರುವುದರಿಂದ ರಾಜ್ಯಗಳಿಗೆ ಆಗುವ ಅನ್ಯಾಯವನ್ನು ಹಣಕಾಸು ಆಯೋಗ ಹೇಗೆ ಸರಿಪರಿಸಬಲ್ಲದು ಎನ್ನುವ ಕನಿಷ್ಟ ಜ್ಞಾನವೂ ಇಲ್ಲದೆ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೀರಿ” ಎಂದು ಆರೋಪಿಸಿದರು.
“14ನೇ ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ಶೇ.4.71 ರಿಂದ ಶೇ.3.74ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ₹5,495 ಕೋಟಿ ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿದೆ. ಆದರೆ, ಈವರೆಗೆ ಈ ಹಣ ನಿಡದೆ ಕೇಂದ್ರ ಸರ್ಕಾರ ದ್ರೋಹ ಎಸಗಿದೆ” ಎಂದರು.
“15ನೇ ಹಣಕಾಸು ಆಯೋಗದ ನಂತರ ಕಡಿಮೆ ತೆರಿಗೆ ಹಂಚಿಕೆಯಿಂದ ಕರ್ನಾಟಕಕ್ಕೆ ಕಳೆದ 4 ವರ್ಷಗಳಲ್ಲಿ ₹45,000 ಕೋಟಿ ಅನುದಾನ ಕಡಿಮೆಯಾಗಿದ್ದು, ಅಂದಾಜಿನ ಪ್ರಕಾರ ಈ 5 ವರ್ಷಗಳಲ್ಲಿ ನಗದು ಹಂಚಿಕೆಯಲ್ಲಿ 62.098 ಕೋಟಿ ರೂಪಾಯಿಗಳು ಕರ್ನಾಟಕಕ್ಕೆ ಕಡಿಮೆಯಾಗಿದೆ. ಮುಂದುವರೆದು 2020 ರಿಂದ 2025ರವರೆಗೆ 15ನೇ ಹಣಕಾಸು ಆಯೋಗದ ಸಹಾಯಧನ ಮತ್ತು ಜಿಎಸ್ಟಿ ಪರಿಹಾರದ ಹಣ ಸೇರಿದಂತೆ ಒಟ್ಟು ₹73.593 ಕೋಟಿ ಬಾಕಿ ಉಳಿದಿದೆ” ಎಂದು ಹೇಳಿದರು.
“ಹಣಕಾಸು ಆಯೋಗ ಶಿಫಾರಸಿನಂತೆ ರಾಜ್ಯದಿಂದ ಸಂಗ್ರಹವಾದ ಸುಮಾರು ₹4 ಲಕ್ಷ ಕೋಟಿಯಲ್ಲಿ ನಮ್ಮ ರಾಜ್ಯದ ತೆರಿಗೆ ಪಾಲನ್ನು ಸಕಾಲಕ್ಕೆ ನೀಡದಿರುವುದು, ಹಾಗೂ ಪ್ರತಿ ವರ್ಷ ನಮ್ಮ ರಾಜ್ಯದ ತೆರಿಗೆ ಪಾಲನ್ನು ಕಡಿಮೆ ಮಾಡುತ್ತಿರುವುದು, ಒಟ್ಟು ತೆರಿಗೆ ಸಂಗ್ರಹದಲ್ಲಿ ಏರಿಕೆಯಾದರೂ ರಾಜ್ಯದ ತೆರಿಗೆ ಪಾಲಿನಲ್ಲಿ ಇಳಿಕೆ ಆಗುತ್ತಿರುವುದರಿಂದ ಪ್ರಸ್ತುತ ವರ್ಷದಲ್ಲಿ ಸುಮಾರು ₹60,000 ಕೋಟಿ ತೆರಿಗೆ ಪಾಲಿನಲ್ಲಿ ನಮಗೆ ವಂಚನೆಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ನೈಜ ಹೋರಾಟಗಾರರ ವೇದಿಕೆ ದೂರು; 5 ದಶಕಗಳ ಬಳಿಕ ಗಂಗಸಂದ್ರಕ್ಕೆ ಬಂತು ಕುಡಿಯುವ ನೀರು
ಬಿಜೆಪಿ ಕೇಂದ್ರ ಸರ್ಕಾರವು ಹತ್ತು ವರ್ಷದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಧಮನ ಮಾಡುವ ರಾಜ್ಯಗಳ ಅಧಿಕಾರಗಳು ಕಸಿದುಕೊಳ್ಳುವ, ಒತ್ತಡ ಹೇರುವ ಪ್ರವೃತ್ತಿಯನ್ನು ಅನುಸರಿಸಿ ಕಾನೂನುಬದ್ಧ ದಬ್ಬಾಳಿಕೆ ನಡೆಸುತ್ತಿರುವುದು ಹಾಗೂ ಪ್ರಶ್ನಿಸುವವರನ್ನು ದೇಶ ವಿರೋಧಿಗಳೆಂದು ಬಿಂಬಿಸುವುದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
ಈ ವೇಳೆ ಚಂದು ಜಾಧವ, ಶಾಂತಪ್ಪ ಪಾಟಿಲ್, ಸೋಮಶೇಖರ ಸಿಂಗೆ, ಜಲೀಲ ಸಾಬ ಮಡಕಿ, ಸುರೇಶ ಹೊಡಲ್, ಅನಿಲ್ ಕೊಳ್ಳೂರೆ, ಬಂಡಯ್ಯ ಸ್ವಾಮಿ, ಸಿದ್ದಲಿಂಗ ಪಾಳಾ, ಹನಮಂತ ಚವ್ಹಾಣ, ಸಂಗಮೇಶ, ಕಿರಣ ಬಣಗಾರ ಸೇರಿದಂತೆ ಇತರರು ಇದ್ದರು.