“ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝೀಕಾ ವೈರಾಣು ಸೋಂಕು, ಚಿಕೂನ್ ಗುನ್ಯಾ ರಾಜ್ಯದಲ್ಲಿ ಸದ್ದು ಮಾಡುತ್ತಿವೆ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು” ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಆಗ್ರಹಿಸಿದ್ದಾರೆ.
“ಮಾಧ್ಯಮಗಳ ವರದಿಯ ಪ್ರಕಾರ ಈಗಾಗಲೇ ಡೆಂಗ್ಯೂ ಪೀಡಿತರ ಸಂಖ್ಯೆ 7164ಕ್ಕೆ ಏರಿಕೆಯಾಗಿದೆ. ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕಾಗಿದೆ” ಎಂದು ತಿಳಿಸಿದ್ದಾರೆ.
ಹಾಗೆಯೇ ಝೀಕಾ ಸೋಂಕು, ಚಿಕೂನ್ ಗುನ್ಯಾ ಮುಂತಾದ ರೋಗಗಳು ಹರಡುವ ಸೂಚನೆಗಳು ಕೂಡ ಕಂಡುಬರುತ್ತಿದೆ. ಈ ರೋಗಗಳು ವ್ಯಾಪಕವಾಗಿ ಹರಡುವ ಮೊದಲೇ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯಲು ಅವಕಾಶ ಮಾಡಿಕೊಡಬೇಕಾಗಿದೆ. ಅದರಲ್ಲೂ ಝೀಕಾ ವೈರಾಣು ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿರದ ಕಾರಣ ಸರ್ಕಾರ ಈ ರೋಗ ನಿಯಂತ್ರಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತಿದೆ ಎಂದು ಮುಬೀನ್ ಅಹ್ಮದ್ ತಿಳಿಸಿದ್ದಾರೆ.
