ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದೆ. ‘ಮುಸ್ಲಿಂ ಕಪ್-2024’ ಪಂದ್ಯಾವಳಿಯು 2024ರ ಜನವರಿ 19ರಿಂದ 21ರವರೆಗೆ ವಿರಾಜಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಷಿಯೇಷನ್ ಅಧ್ಯಕ್ಷ ಪಿ.ಎ ಹನೀಫ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ನಡೆದ ಪಂದ್ಯಾವಳಿಯ ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲೆಯ ಮುಸ್ಲಿಂ ಜಮಾಅತ್ ತಂಡಗಳ ನಡುವೆ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. 60ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. 25 ಲಕ್ಷ ರೂಪಾಯಿ ವೆಚ್ಚದಲ್ಲಿ ಪಂದ್ಯಾವಳಿ ನಡೆಸಲು ರೂಪುರೇಷೆ ತಯಾರಾಗಿದೆ. ಜಿಲೆಯ ವಿವಿಧಡೆಯ ದಾನಿಗಳ ಮತ್ತು ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವ ಆಶಾಭಾವನೆ ಇದೆ” ಎಂದು ಹೇಳಿದ್ದಾರೆ.
“2009ರಿಂದ ಆರಂಭಿಸಲಾದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ 2019 ರವರೆಗೆ ನಿರಂತರವಾಗಿ ಜರುಗಿದೆ. ಬಳಿಕ ಎದುರಾದ ಕೋವಿಡ್ ತಲ್ಲಣ ಕಾಲಘಟ್ಟದಲ್ಲಿ ಪಂದ್ಯಾವಳಿಯನ್ನು ಅನಿವಾರ್ಯ ಕಾರಣಗಳಿಂದ ನಡೆಸಲು ಸಾಧ್ಯವಾಗಲಿಲ್ಲ. ಮೂರು ವರ್ಷದ ಬಳಿಕ ಮುಂದಿನ ಜನವರಿಯಲ್ಲಿ ನಡೆಯಲಿರುವ ಈ ಪಂದ್ಯಾವಳಿಯನ್ನು ಮತ್ತಷ್ಟು ಅದ್ದೂರಿಯಾಗಿ ಮತ್ತು ಯೋಜನಾಬದ್ಧವಾಗಿ ನಡೆಸಲು ತೀರ್ಮಾನಿಸಲಾಗಿದೆ. ಪಂದ್ಯಾವಳಿಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯ ಎಲ್ಲಾ ಜಮಾಅತ್ತುಗಳಿಗೆ ಮಾಹಿತಿ ರವಾನಿಸಲಾಗಿದೆ. ನಿಗಧಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ರೂ. 3000 ಪ್ರವೇಶ ಶುಲ್ಕದೊಂದಿಗೆ ತಂಡಗಳ ಹೆಸರನ್ನು ನೋಂದಾಯಿಸಲು ಮುಂದಿನ ಜ.12ರವರೆಗೆ ಅಂತಿಮ ಗಡುವು ನೀಡಲಾಗಿದೆ ಎಂದು ಮಾಹಿತಿ ನೀಡಿದ ಹನೀಫ್, ಪ್ರೇಕ್ಷಕರ ಅನುಕೂಲಕ್ಕಾಗಿ ವಿರಾಜಪೇಟೆ ತಾಲೂಕು ಮೈದಾನದ ಸುತ್ತಲೂ ಗ್ಯಾಲರಿ ನಿರ್ಮಿಸುವ ಕಾರ್ಯವನ್ನು ಜನವರಿ ಮೊದಲ ವಾರದಿಂದ ಕೈಗೆತ್ತಿಕೊಳ್ಳಲಾಗುವುದು” ಎಂದು ಹೇಳಿದರು.
ಸಭೆಯಲ್ಲಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಅವರು ಮಾತನಾಡಿ, “ಆಯಾ ಜಮಾಅತ್ ತಂಡಗಳನ್ನು ಹೊರತುಪಡಿಸಿ ಬರುವ ಬೇರೆ ಯಾವುದೇ ತಂಡಗಳಿಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶವಿರುವುದಿಲ್ಲ. ಸಂಬಂಧಿಸಿದ ಜಮಾಅತ್ ವ್ಯಾಪ್ತಿಯ ಸದಸ್ಯರು ಆಯಾ ಜಮಾಅತ್ತು ತಂಡದಲ್ಲಲ್ಲದೆ ಬೇರೆ ಜಮಾಅತ್ ತಂಡಗಳನ್ನು ಪ್ರತಿನಿಧಿಸುವಂತಿಲ್ಲ ಎಂದು ಪಂದ್ಯಾವಳಿಯ ನಿಯಮಗಳನ್ನು ವಿವರಿಸಿದರಲ್ಲದೆ, ಪಂದ್ಯಾವಳಿಯಲ್ಲಿ ವಿಜೇತರಾಗುವ ಪ್ರಥಮ, ದ್ವಿತೀಯ ಮತ್ತು ತೃತೀಯ ತಂಡಗಳಿಗೆ ಆಕರ್ಷಕ ನಗದು ಬಹುಮಾನದೊಂದಿಗೆ ಈ ಬಾರಿ ವಿಶೇಷವಾಗಿ ಮರದಿಂದ ಕೆತ್ತಲಾದ ವಿನೂತನ ಪಾರಿತೋಷಕವನ್ನು ನೀಡಲಾಗುವುದು. ಆಸಕ್ತರು ಪಂದ್ಯಾವಳಿಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9686395731/19945635158/ 94499 89018 ಅನ್ನು ಸಂಪರ್ಕಿಸಹುದು” ಎಂದು ತಿಳಿಸಿದರು.
ಸಭೆಯಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಹೆಚ್. ಎ. ಹಂಸ. ಕರೀಂ ಕಡಂಗ, ಮೊಹಮ್ಮದ್ ರಾಫಿ ಕೋಳುಮಂಡ ರಫೀಕ್, ಕೆ.ಎಸ್. ಸೂಫಿ, ಏಜಾಜ್ ಅಹಮದ್, ಜಲೀಲ್ ಮಂದಮಾಡ ಮುನೀರ್ ಮೊದಲಾದವರು ಉಪಸ್ಥಿತರಿದ್ದರು.