ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಮುಚ್ಚಲು ಪಣತೊಟ್ಟು ನಿಂತಂತಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು, ಎಲ್ಲ ವರ್ಗದ ಮಕ್ಕಳ ಕಲಿಕೆಗೆ ಅನುಕೂಲವಾಗಬೇಕು ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಆದರೆ, ವರ್ಷದಿಂದ ವರ್ಷಕ್ಕೆ, ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನೂರಾರು ಶಾಲೆಗಳಿಗೆ ಬೀಗ ಬೀಳುತ್ತಿದೆ.
ರಾಮನಗರ ಜಿಲ್ಲೆಯಲ್ಲಿ ಮಂಜೂರಾದ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 3508 ಮಂಜೂರಾದ ಶಿಕ್ಷಕರ ಹುದ್ದೆಗಳು ಇವೆ. ಅವುಗಳಲ್ಲಿ ಬರೋಬ್ಬರಿ 1304 ಹುದ್ದೆಗಳು ಖಾಲಿ ಇವೆ. ಮಾಗಡಿ ತಾಲೂಕಿನಲ್ಲಿ 136, ರಾಮನಗರದಲ್ಲಿ 133, ಚನ್ನಪಟ್ಟಣದಲ್ಲಿ 221, ಕನಕಪುರದಲ್ಲಿ 514 ಹುದ್ದೆಗಳು ಖಾಲಿ ಇವೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಸುಮಾರು 130 ಶಾಲೆಗಳು ಶಿಕ್ಷಕ ರಹಿತ ಶಾಲೆಗಳಾಗಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಷೇತ್ರದಲ್ಲೇ 140 ಏಕ ಶಿಕ್ಷಕ ಶಾಲೆಗಳಿದ್ದು, ಈ ಪರಿಸ್ಥಿತಿ ರಾಜ್ಯಾದ್ಯಂತ ಶಿಕ್ಷಣದ ಸ್ಥಿತಿಗತಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಒಂದರಲ್ಲೇ 29 ಸರಕಾರಿ ಶಾಲೆಗಳಲ್ಲಿ ಈ ವರ್ಷ ಶೂನ್ಯ ದಾಖಲಾತಿ ಇದೆ. ಇನ್ನೂ ಮಂಡ್ಯ ಜಿಲ್ಲಾಮಟ್ಟದಲ್ಲಿನ ಅಂಕಿ-ಅಂಶ ತೆಗೆದುಕೊಂಡರೆ ಎಷ್ಟು ಶೂನ್ಯ ದಾಖಲಾತಿ ಶಾಲೆಗಳು ಸಿಗಬಹುದು. ಈ ಅಂಕಿ ಅಂಶಗಳ ಆಧಾರದ ಮೇಲೆ ಹೇಳುವುದಾದರೆ ವರ್ಷಕ್ಕೆ ನೂರಾರು ಶಾಲೆಗಳು ಮುಚ್ಚುವ ಸ್ಥಿತಿಗೆ ಬಂತು ನಿಂತಿವೆ ಎಂಬುದು ಖಾತ್ರಿಯಾಗುತ್ತದೆ.

ಜೊತೆಗೆ ಮುರಿದ, ಹಾಳುಬಿದ್ದ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ನೋಡಿದರೆ ಮಕ್ಕಳ ಭವಿಷ್ಯ ಗಾಬರಿ ಹುಟ್ಟಿಸುವಂತಿದೆ. ತುರ್ತಾಗಿ ಸರಕಾರ, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ, ಶಿಕ್ಷಕರು ಜೊತೆಗೂಡಿ ಜನ ಸಮುದಾಯ ಬೆಂಬಲದೊಂದಿಗೆ ಸರಿಪಡಿಸುವ ಕಡೆಗೆ ಕಾರ್ಯ ಪ್ರವೃತ್ತರಾಗಬೇಕಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಶಿಕ್ಷಣಾಸಕ್ತರಾದ ಮೆಣಸಗೆರೆ ಮಹೇಶ್, “ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಯಾವ ಬದಲಾವಣೆ ಬೇಕಾದರೂ ತರಬಹುದಾಗಿದೆ. ಇದಕ್ಕೆ ಮಾದರಿ ಕೆಆರ್ಪೇಟೆ ಶಾಲೆ, ಮಾರಗೌಡನಹಳ್ಳಿ ಶಾಲೆ, ಬನ್ನೂರು ಪಿಯು ಕಾಲೇಜು ಇತ್ಯಾದಿ. ಆ ಶಾಲೆಗಳಲ್ಲಿ ಇಂಜಿನಿಯರ್, ತಹಶೀಲ್ದಾರ್ ಅವರ ಮಕ್ಕಳನ್ನು ಸೇರಿಸಿದ್ದಾರೆ. ಅದಕ್ಕೆ ಹೆದರಿಕೊಂಡು ಶಿಕ್ಷಕರು ಪಾಠ ಮಾಡುತ್ತಾರೆ ಅಂತ ಸಾಮಾನ್ಯವಾಗಿ ಜನರು ಹೇಳುವ ಮಾತು. ಇದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಅಂದರೆ ಅಲ್ಲಿಯ ಶಿಕ್ಷಕರು ಕಡಿಮೆ ಐಕ್ಯೂ ಹೊಂದಿರುವ ಮಕ್ಕಳಿಗೂ ಕಲಿಸುತ್ತೇವೆ ಅಂತ ಸಾಬೀತು ಮಾಡಬೇಕು. ಹಾಗಾದಲ್ಲಿ, ಖಂಡಿತವಾಗಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರುತ್ತಾರೆ” ಎಂದು ತಮ್ಮ ಅನುಭವವನ್ನು ಹೇಳಿದರು.
“ಸರ್ಕಾರಿ ಶಾಲೆಯ ಶಿಕ್ಷಕರು ಟಿಇಟಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಆಯ್ಕೆಯಾಗಿರುತ್ತಾರೆ. ಇವತ್ತಿನ ಕಾಲಮಾನದಲ್ಲಿ ಪರೀಕ್ಷೆಗಳನ್ನು ಪಾಸು ಮಾಡಿ ಸರಕಾರಿ ಹುದ್ದೆಗೆ ಬರುವುದು ಸಾಮಾನ್ಯದ ಮಾತಲ್ಲ. ಅವರಿಗೆ ಆ ಸಾಮರ್ಥ್ಯ ಇದೆ ಅಂತಲೇ ಆ ಹುದ್ದೆಗೆ ಬಂದಿರುತ್ತಾರೆ. ಆದರೆ ಅನುಭವದ, ಇಚ್ಛಾಶಕ್ತಿಯ ಕೊರತೆ ಇರುತ್ತದೆ. ಇದನ್ನು ಹೋಗಲಾಡಿಸಲು ಅಧಿಕಾರಿ ವರ್ಗ ಒಳ್ಳೆಯ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸುವ ಕೆಲಸವಾದರೆ ಈ ಸಮಸ್ಯೆ ಸರಿ ಹೋಗುತ್ತದೆ” ಎಂದರು.
“ಬಹಳಷ್ಟು ಪೋಷಕರಲ್ಲಿ “ನಾವು ಇಷ್ಟು ಲಕ್ಷ ಕೊಟ್ಟು ಇಂತ ಪ್ರತಿಷ್ಠಿತ ಶಾಲೆಯಲ್ಲಿ ಸೇರಿಸಿದ್ದೇವೆ” ಎಂದು ಹೇಳಿಕೊಳ್ಳುವ, ತೋರಿಸಿಕೊಳ್ಳುವ ಸೋಶಿಯಲ್ ಸ್ಟೇಟಸ್ ಗೀಳಿಗಾಗಿಯೂ ಕೂಡ ಸರಕಾರಿ ಶಾಲೆಯಿಂದ ದೂರ ಸರಿದಿದ್ದಾರೆ. ಇವರು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಾರೆ. ಸರ್ಕಾರಿ ಶಾಲೆಗೆ ಸೇರಿಸುವುದು ಅಂದರೆ ಅವಮಾನ ಎಂದು ತಿಳಿದಿದ್ದಾರೆ” ಎಂದರು.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮಂಡ್ಯ ಡಿಡಿಪಿಐ ಶಿವರಾಮೇಗೌಡ ಹಾಗೂ ರಾಮನಗರ ಡಿಡಿಪಿಐ ಬಸವರಾಜೇಗೌಡ, “ಅತಿಥಿ ಶಿಕ್ಷಕರನ್ನು ನೇಮಿಸಿದ್ದೇವೆ. ಲಭ್ಯ ಅನುದಾನದಲ್ಲಿ ಆದ್ಯತೆಯ ಮೇರೆಗೆ ಶಾಲೆಗಳ ರಿಪೇರಿ ಮಾಡಿಸಿದ್ದೇವೆ. ನಮ್ಮ ಹಂತದಲ್ಲಿ ತೆಗೆದುಕೊಳ್ಳಬಹುದಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೆವೆ. ಇಲ್ಲಿನ ವಸ್ತುಸ್ಥಿತಿಯನ್ನು ಸರಕಾರಕ್ಕೆ ವರದಿ ಮಾಡಿದ್ದೇವೆ. ಸರಕಾರದಿಂದ ಬರುವ ಆದೇಶದಂತೆ ನಡೆಯುತ್ತೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ವರದಿ ಫಲಶೃತಿ | ವಡ್ಡರ ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸಿದ ಜೇವರ್ಗಿ ತಹಶೀಲ್ದಾರ್
“ಬದಲಾವಣೆಯ ಕಡೆಗೆ ಸಾಗುವ ದಾರಿ ಬಿಡಿಬಿಡಿಯಾಗಿ ಆಗ್ತಾ ಇದೆ. ಕೆಲವು ಶಿಕ್ಷಕರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋಗುತ್ತಿದ್ದಾರೆ. ಇದರಿಂದ ಹೇಳಿಕೊಳ್ಳುವಂತಹ ಬದಲಾವಣೆ ಆಗುತ್ತಿಲ್ಲ. ಇದಕ್ಕೆ ಸಂಘಟಿತವಾದ, ಯೋಜಿತವಾದ ಕ್ರಮಗಳು ಅಗತ್ಯ. ಇದನ್ನು ಮಾಡಲು ಶಿಕ್ಷಕರು ಮತ್ತು ಅಧಿಕಾರಿಗಳು ಮುಂದಾಗಿ ಒಟ್ಟಾಗಿ ಕೆಲಸ ಮಾಡಲಿಲ್ಲ ಅಂದರೆ ದೊಡ್ಡ ಮಟ್ಟದ ಬದಲಾವಣೆಗೆ ಕಾರಣ ಆಗುವುದಿಲ್ಲ. ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಇಲಾಖೆಯಲ್ಲಿ ಶಾಶ್ವತ ಬದಲಾವಣೆ ತರಲು ಜಾಗ್ರತೆಯಿಂದ ಪ್ರಯತ್ನಿಸಲೇಬೇಕು” ಎಂದು ಹೇಳಿದರು.

Nanu obba guest teacher idhini.. Aadre e govt kannada shalegala bagge yenu olavanna hondilla.. Yenu gottilde iroranna adhikarakke tandre hige aagodu.. Yella sarakari shalegalu muchhode aagutte.. Bitti bagya kodoke hana ide teacher na tagolodakke evara hatra duddilla