ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪಿ ಎದುರು ಮಂಡ್ಯದ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರುನಾಡು ಸೇವಕರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯದಲ್ಲಿ ಬೀದಿಗಿಳಿದು ಹೋರಾಟ ನಡೆಸಿದ ಫಲವಾಗಿ, ಬೆಟ್ಟಿಂಗ್ ದಂಧೆಗೆ ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ ಮಳವಳ್ಳಿ ತಾಲೂಕು ಕಿರುಗಾವಲು ಹೋಬಳಿಯ ಟಿ.ಕಾಗೇಪುರದ ನಾಗೇಂದ್ರ ಕೆ.ಸಿ (29) ಎಂಬುವವನ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಮಳವಳ್ಳಿ ತಾಲೂಕಿನ ಕಿರುಗಾವಲು ಹೋಬಳಿಯ ಟಿ.ಕಾಗೇಪುರದ ರಾಜಣ್ಣ (64) ಎಂಬುವರು ದೂರು ನೀಡಿದ್ದು, ತಮ್ಮ ಮಗ ಪ್ರೀತಮ್ನನ್ನು ಬೆಟ್ಟಿಂಗ್ ಬುಕ್ಕಿಯಾದ ನಾಗೇಂದ್ರ ಅಕ್ರಮ ಬೆಟ್ಟಿಂಗ್ ದಂಧೆಗೆ ಇಳಿಸಿದ್ದ ಎಂದು ದೂರಿದ್ದಾರೆ.
ನನಗೆ ಇಬ್ಬರು ಮಕ್ಕಳು, ಅವರಲ್ಲಿ 2ನೇ ಮಗನಾದ ಪ್ರೀತಮ್ ಆರ್. ಗೌಡ (26) ನನ್ನ ಜೊತೆ ವ್ಯವಸಾಯ ಮಾಡಿಕೊಂಡು ಇರುತ್ತಾನೆ, ನಮ್ಮ ಊರಿನ ಕೆ.ಸಿ.ನಾಗೇಂದ್ರ ಬಿನ್ ಲೇಟ್ ಚಿಕ್ಕಲಿಂಗಯ್ಯ ಎಂಬುವನು ಕ್ರಿಕೆಟ್ಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುವ ಬುಕ್ಕಿ ಎಂದು ಪರಿಚಯ ಮಾಡಿಕೊಂಡಿದ್ದ. ಅವನು ನನ್ನ ಮಗನಿಗೆ ಡಿಜಿಟಲ್ ವೆಬ್ಸೈಟ್ ಗೇಮ್ ಆಫ್ ಚಾನ್ಸ್ನ ಮೂಲಕ ದಿಢೀರ್ ಶ್ರೀಮಂತಿಕೆಯ ಆಮಿಷ ಒಡ್ಡಿ ನನ್ನ ಮಗನ ತಲೆ ಕೆಡಿಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವುದರಲ್ಲಿ ತೊಡಗುವಂತೆ ಕುಮ್ಮಕ್ಕು ನೀಡಿದ್ದ ಎಂದು ರಾಜಣ್ಣ ಪ್ರಸ್ತಾಪಿಸಿದ್ದಾರೆ.
ಹಳ್ಳಿ, ಮುಗ್ಧ ವ್ಯವಸಾಯಗಾರನಾದ ನನ್ನ ಮಗನನ್ನು ಕ್ರಿಕೆಟ್ ಬೆಟ್ಟಿಂಗ್ಗೆ ದಾಸನಾಗುವಂತೆ ನಾಗೇಂದ್ರ ಮಾಡಿರುತ್ತಾನೆ. LORDS EXCH ಮತ್ತು ಇತ್ಯಾದಿ ಡಿಜಿಟಲ್ ವೆಬ್ಸೈಟ್ ಮೂಲಕ 2021 ಡಿಸೆಂಬರ್ ತಿಂಗಳಿನಿಂದ 2023 ಡಿಸೆಂಬರ್ ತಿಂಗಳಿನವರೆಗೆ ನನ್ನ ಮಗನಿಗೆ ವ್ಯಾಟ್ಸ್ ಆಪ್ ನಂಬರ್ 8971279038 ಮೂಲಕ ಪಾಸ್ವರ್ಡ್ ಪಿನ್ ನಂಬರ್ ನೀಡಿ, ನನ್ನ ಮಗನ ಸರಿ ಸುಮಾರು ರೂ 20,00,000/-(ಇಪ್ಪತ್ತು ಲಕ್ಷ) ಹಣವನ್ನು ಕ್ರಿಕೆಟ್ ಬೆಟ್ಟಿಂಗ್ನಡಿ ಆಡಿ ಹಣ ಕಳೆದುಕೊಳ್ಳುವಂತೆ ಮಾಡಿರುತ್ತಾನೆ ಎಂದು ದೂರಿದ್ದಾರೆ.
ತದನಂತರ ಹಣವನ್ನು ವಸೂಲಿ ಮಾಡಲು ಬ್ಲಾಕ್ ಮೇಲ್ ಮೂಲಕ ಅಕ್ರಮವಾಗಿ ಹಣ ಸುಲಿಗೆ ಮಾಡಿರುತ್ತಾನೆ ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಪ್ರೀತಮ್.ಆರ್.ಗೌಡನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುತ್ತಾನೆ ಎಂದು ರಾಜಣ್ಣ ತಿಳಿಸಿದ್ದಾರೆ.
ನಾನು ಅನಕ್ಷರಸ್ಥನೂ ವ್ಯವಸಾಯಗಾರನು ಆಗಿದ್ದು, ಹಲವು ಬಾರಿ ನಾಗೇಂದ್ರನಿಗೆ ಈ ಜೂಜಾಟದಲ್ಲಿ ನನ್ನ ಮಗನನ್ನು ತೊಡಗಿಸಬೇಡ ಎಂದು ಎಚ್ಚರಿಕೆ ನೀಡಿದ್ದೆ. ಕೇಳದೇ ಲಕ್ಷಾಂತರ ಹಣವನ್ನು ಕಮಿಷನ್ ಆಸೆಗಾಗಿ ಜೂಜಿನಲ್ಲಿ ತೊಡಗಿಸುವಂತೆ ಮಾಡಿರುತ್ತಾನೆ. ಕೆ.ಸಿ.ನಾಗೇಂದ್ರ ಎಂಬುವನು ನನ್ನ ಮಗನಿಂದ ಕರ್ನಾಟಕ ಬ್ಯಾಂಕ್ ಮಳವಳ್ಳಿ ಶಾಖೆಗೆ ಸೇರಿದ ಚೆಕ್ ನಂ.553071 ಖಾಲಿ ಚೆಕ್ ಮತ್ತು ಆನ್ ಡಿಮಾಂಡ್ ಪತ್ರ ಒಂದಕ್ಕೆ ಬಲವಂತವಾಗಿ ಸಹಿ ಪಡೆದಿರುತ್ತಾನೆ, ಆದ್ದರಿಂದ ನಮ್ಮ ಕುಟುಂಬದವರು ದಿನವೂ ಜೀವ ಕೈಯಲ್ಲಿ ಹಿಡಿದು ಬದುಕುವಂತೆ ಮಾಡಿರುತ್ತಾನೆ, ಮೌಖಿಕವಾಗಿ ನಾನು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿರುತ್ತೇನೆ, ದಿನಾಂಕ: 04-11-2024 ರಂದು ಬೆಳಿಗ್ಗೆ 8.30 ರಲ್ಲಿ, ಮತ್ತೆ ನನ್ನ ಮಗನಿಗೆ ಬೆಟ್ಟಿಂಗ್ ಬಾಕಿ ಹಣ ಕೊಡುವಂತೆ ಕೇಳಿರುತ್ತಾನೆ. ಆ ಸಂದರ್ಭ, ಸುತ್ತಮುತ್ತಲಿನವರು ನನ್ನ ಮಗನನ್ನು ಬಿಡಿಸಿ ಕಳುಹಿಸಿರುತ್ತಾರೆ ಎಂದು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಅಕ್ರಮವಾಗಿ ವ್ಯಾಪಿಸಿರುವ ಜೂಜು ಅಡ್ಡೆ ತಡೆಗೆ ಪ್ರಗತಿಪರ ಸಂಘಟನೆಗಳ ಆಗ್ರಹ
ಕ್ರಿಕೆಟ್ ಬುಕ್ಕಿಯಾಗಿ ಜೂಜಾಟ ಆಡಿಸುತ್ತಿರುವ ಅಕ್ರಮ ಹಣ ಸಂಪಾದನೆ ದಂಧೆಯಲ್ಲಿ ತೊಡಗಿರುವ ಅಕ್ರಮವಾಗಿ ಪುಸಲಾಯಿಸಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಕೆ.ಸಿ.ನಾಗೇಂದ್ರ ಎಂಬುವವರ ಎದುರು ಕಾನೂನು ರೀತ್ಯಾ ಕ್ರಮ ಜರುಗಿಸಿ ನನ್ನ ಮಗನಿಗೆ ಆಗಿರುವ ಆನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
ಕಳೆದ 4 ತಿಂಗಳ ಹಿಂದೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಜಣ್ಣ ದೂರು ದಾಖಲಿಸಿ, ತಮ್ಮ ಮಗ ಪ್ರೀತಂನನ್ನು ನಾಗೇಂದ್ರ ಬೆಟ್ಟಿಂಗ್ ದಂಧೆಗೆ ಇಳಿಸಿದ್ದಾನೆ ಎಂದು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಮಳವಳ್ಳಿ ಪೊಲೀಸರು ಕೇವಲ ಎನ್.ಸಿ.ಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು.
ನವೆಂಬರ್ 4ರ ಸೋಮವಾರ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ತುರ್ತು ಸಭೆ ನಡೆಸಿದಾಗ ಸ್ವತಃ ದೂರುದಾರ ರಾಜಣ್ಣ, ಈ ಘಟನೆಯ ಬಗ್ಗೆ ವಿವರಿಸಿ, ಎಫ್ಐಆರ್ ದಾಖಲಿಸದ ಪೊಲೀಸರ ಎದುರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿ ಎಫ್ಐಆರ್ ದಾಖಲಿಸಿದ್ದಾರೆ.
ಮಂಡ್ಯ ಜಿಲ್ಲಾಡಳಿತವು ಬೆಟ್ಟಿಂಗ್ ಬಾಧಿತರಿಗೆ ಮತ್ತು ಬೆಟ್ಟಿಂಗ್ ದಂಧೆ ಮಾಡುತ್ತಿರುವವರ ಬಗ್ಗೆ ಮಾಹಿತಿ ನೀಡಲು ಹೆಲ್ಸ್ಲೈನ್ ಶುರು ಮಾಡಿದರೆ ಮಂಡ್ಯ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರ ಒತ್ತಾಯವಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜೂಜು ದಂಧೆಯಿಂದ ನೊಂದವರು ಆತ್ಮಹತ್ಯೆ ದಾರಿ ಹಿಡಿಯಬೇಕಿಲ್ಲ, ಧೈರ್ಯವಾಗಿ ದೂರು ನೀಡಿ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ಬೂದನೂರು ಯುವಕನ ಆತ್ಮಹತ್ಯೆ ಪ್ರಕರಣದ ನಂತರ ಮಂಡ್ಯ ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಸುವವರ, ಪ್ರಚೋದಿಸುವವರ ಎದುರು ದೊಡ್ಡ ಹೋರಾಟವೇ ಶುರುವಾಗಿದ್ದು, ಪ್ರಗತಿಪರ ಸಂಘಟನೆಗಳು ಬೀದಿಗಿಳಿದಿವೆ. ಇನ್ನೂ 15 ದಿನಗಳಲ್ಲಿ ಪೋಲಿಸ್ ವ್ಯವಸ್ಥೆ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕದಿದ್ದರೆ, ಇಸ್ಪೀಟ್ ಅಡ್ಡಗಳು, ಹುಕ್ಕಾ, ಡ್ರಗ್, ಬೆಟ್ಟಿಂಗ್ ಮಾಡುತ್ತಿರುವ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತೇವೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಈ ದಿನ.ಕಾಮ್ಗೆ ತಿಳಿಸಿದ್ದಾರೆ.
