ಮಂಡ್ಯ ಜಿಲ್ಲೆಯಲ್ಲಿ ಮೂವತ್ತು ವರ್ಷಗಳ ಬಳಿಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದಶಕಗಳ ಚರಿತ್ರೆ ಇರುವ ಈ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಆದರೆ ಇಲ್ಲೊಂದಷ್ಟು ತೊಡಕುಗಳು ಉಂಟಾಗಿವೆ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಎಲ್ಲಾ ಸಾಹಿತ್ಯಾಸಕ್ತರು ಗಾಂಧಿ ಮಾರ್ಗದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುವ ನಿರ್ಧಾರವನ್ನು ಕೈಗೊಂಡಿದೆ ಎಂದು ಎಂ ಬಿ ನಾಗಣ್ಣಗೌಡ ಹೇಳಿದರು.
ಸಾಹಿತ್ಯೇತರರನ್ನು 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಮಾಡಬಾರದು ಎಂದು ಸಾಹಿತ್ಯಾಸಕ್ತರ ಬಳಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಪತ್ರ ಸಲ್ಲಿಸಿತು. ಆ ಸಂದರ್ಭದಲ್ಲಿ ಮಾತನಾಡಿ, ಹಾಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನಿಧನರಾಗಿರುವ ಕಾರಣ ಆ ಜಾಗಕ್ಕೆ ಪ್ರಭಾರಿ ಅಧ್ಯಕ್ಷರ ಆಯ್ಕೆ ಮಾಡದಿರುವುದನ್ನು ಖಂಡಿಸಿದರು.
ಸಿಪಿಐಎಂನ ಟಿ.ಎಲ್. ಕೃಷ್ಣೇಗೌಡ ಮಾತನಾಡಿ, ಮಂಡ್ಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಮ್ಮೇಳನ ನಡೆಸುತ್ತಿದ್ದಾರೆ. ಈ ಸಮ್ಮೇಳನವು ಸಂಪೂರ್ಣವಾಗಿ ಬೆಂಗಳೂರು ಕೇಂದ್ರಿತವಾಗಿದ್ದು, ಸದರಿ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಏಕಪಕ್ಷೀಯವಾಗಿ ವರ್ತಿಸುತ್ತಿರುವುದು ಈಗಾಗಲೇ ಸಾರ್ವಜನಿಕರ ಗಮನಕ್ಕೆ ಬಂದಿದೆ. ಸಮ್ಮೇಳನ ನಡೆಸುವ ಜಾಗ, ಅಧ್ಯಕ್ಷತೆ, ಇತ್ಯಾದಿಯಾಗಿ ಎಲ್ಲದರಲ್ಲೂ ಬೆಂಗಳೂರಿನ ಕೇಂದ್ರಸ್ಥಾನವೇ ಆಕ್ರಮಿಸಿಕೊಂಡು ಕೂತಿದೆ. ಆತಿಥೇಯ ಮಂಡ್ಯವು ಸಮರ್ಥ ಪ್ರತಿನಿಧಿಗಳಿಲ್ಲದೇ ನಗಣ್ಯವಾಗಿದೆ. ಕೂಡಲೇ, ಈ ಕುರಿತು ಕ್ರಮವಹಿಸಿ ಸಮ್ಮೇಳನದ ಜವಾಬ್ದಾರಿಗಳು ಮತ್ತು ಅಧಿಕಾರಗಳು ವಿಕೇಂದ್ರೀಕರಣಗೊಳ್ಳಬೇಕು ಎಂದು ಒತ್ತಾಯಿಸಿದರು.

ಕವಿ ಸತೀಶ್ ಜವರೇಗೌಡ ಮಾತನಾಡಿ, “ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿಯೇ ವಹಿಸಬೇಕೇ ಹೊರತು ಅನ್ಯರಲ್ಲ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಈ ವಿಚಾರದಲ್ಲಿ ಅನಗತ್ಯ ವಿವಾದಗಳನ್ನು ಉಂಟು ಮಾಡುತ್ತಿದ್ದಾರೆ. ಆದರೆ ಮಂಡ್ಯದ ಜನರು, ಸಾಹಿತಿಗಳು, ಸಹೃದಯರ ಪರವಾಗಿ ನಾವು “ಸಾಹಿತ್ಯೇತರರು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಮತ್ತು ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದು ನಮ್ಮಊರಿನ ಸಾಹಿತ್ಯ ಸಮ್ಮೇಳನ. ಅದು ಸಾಹಿತ್ಯ ಸಮ್ಮೇಳನವಾಗಿಯೇ ನಡೆಯಬೇಕು” ಎಂದು ಒತ್ತಾಯಿಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸರ್ಕಾರಿ ಅನುದಾನಿತ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಇದರಲ್ಲಿ ಎಲ್ಲ ಜಾತಿ, ಲಿಂಗ, ವರ್ಗಗಳಿಗೆ ಸೇರಿದ ಜನರಿಗೆ ಮತ್ತು ಮಂಡ್ಯದ ಕಲೆ, ಸಾಹಿತ್ಯ, ಸಂಗೀತ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಾತಿನಿಧ್ಯ ಒದಗಿಸುವುದು ಕ.ಸಾ.ಪ ದ ಸಂವಿಧಾನ ಬದ್ಧವಾದ ಕರ್ತವ್ಯವಾಗಿದೆ ಎಂಬುದನ್ನ ನೆನೆಪಿಸ ಬಯಸುತ್ತೇವೆ. ಕ.ಸಾ.ಪ. ಅಧ್ಯಕ್ಷರು ಸಮಾಲೋಚನಾ ಸಭೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಬಳಸುತ್ತಿರುವ ಭಾಷೆ, ಧೋರಣೆ ಮತ್ತು ನಡವಳಿಕೆಗಳು ಆಕ್ಷೇಪಾರ್ಹವಾಗಿವೆ. ಅದನ್ನ ಸರಿಪಡಿಸಿಕೊಳ್ಳಲು ಆಗ್ರಹಿಸುತ್ತಿದ್ದೇವೆ ಎಂದರು.

ಕವಿ ರಾಜೇಂದ್ರ ಪ್ರಸಾದ್ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ವ್ಯವಹಾರಗಳು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಇರಬೇಕೆಂಬ ಕಾರಣದಿಂದ ಸಮ್ಮೇಳನದ ಸಮಸ್ತ ಖರ್ಚು ವೆಚ್ಚಗಳ ಸೋಷಿಯಲ್ ಆಡಿಟ್ ಅನ್ನು ಕಡ್ಡಾಯವಾಗಿಸಬೇಕೆಂದು ಬೇಡಿಕೆ ಇಡುತ್ತಿದ್ದೇವೆ ಎಂದರು.
ಚಿತ್ರಕೂಟ ಬಳಗದ ಅರವಿಂದ ಪ್ರಬು ಮಾತನಾಡಿ, ಬಹುಮುಖ್ಯವಾಗಿ ಸಾಹಿತ್ಯೇತರ ವ್ಯಕ್ತಿಯನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಅಂತಹ ಪ್ರಕ್ರಿಯೆ ನಡೆದಲ್ಲಿ ಬಹುದೊಡ್ಡ ಪ್ರತಿರೋಧವನ್ನು ಮಂಡ್ಯ ಜನರು ಕ.ಸಾ.ಪ. ಅಧ್ಯಕ್ಷರಿಗೆ ತೋರಲಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಪ್ರೊ. ಜೆಪಿ, ಡಾ. ಲತಾ, ಸತೀಶ್ ಜವರೇಗೌಡ ಆಯ್ಕೆ
ಈ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಮಾ ರಾಮಕೃಷ್ಣ, ನಾರಾಯಣಗೌಡ, ಭಗವಾನ್ ಚಕ್ರವರ್ತಿ, ಪ್ರೊ. ಹುಲ್ಲೇಕೆರೆ ಮಹದೇವ್, ಪ್ರೊ. ತಿಮ್ಮಪ್ಪ ಪಿ ಡಿ ಪಾಲಹಳ್ಳಿ, ಕುಮಾರಿ ಸಿ, ಮಹಿಳಾ ಮುನ್ನಡೆಯ ಪೂರ್ಣಿಮಾ, ಹರವು ದೇವೇಗೌಡ, ನುಡಿ ಕರ್ನಾಟಕ ಸಂತೋಷ್, ರಾಜೇಂದ್ರ ಬಾಬು, ಧನುಷ್ ಗೌಡ, ಹಾಗೂ ಇನ್ನಿತರರು ಭಾಗವಹಿಸಿದ್ದರು.
