ಮಂಡ್ಯ ನಗರದಲ್ಲಿ ಮಾದಿಗ ಸಮುದಾಯದ ಸಹಸ್ರಾರು ಜನರು ಅ.16ರ ಬುಧವಾರ ಬೀದಿಗಿಳಿದು ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
2023ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಆರು ಗ್ಯಾರಂಟಿಗಳಲ್ಲಿ 6ನೇ ಗ್ಯಾರಂಟಿಯಾಗಿ ಒಳಮೀಸಲಾತಿಯನ್ನು ಜಾರಿಗೆ ತರಬೇಕೆಂದು ಸಮುದಾಯದವರು ಒತ್ತಾಯಿಸಿದರು.
ಪ್ರತಿಭಟನೆಯ ಮೆರವಣಿಗೆ ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಆರಂಭವಾಯಿತು. ಸಾವಿರಾರು ಜನ ತಮಟೆ, ನಗಾರಿಗಳೊಂದಿಗೆ ನೀಲಿ ಬಾವುಟಗಳನ್ನು ಹಿಡಿದು, ಘೋಷಣೆಗಳನ್ನು ಮೊಳಗಿಸಿದರು.
ಈ ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಿಂದ ಜನರು ಭಾಗವಹಿಸಿದ್ದರು. ಪ್ರತಿಭಟನಾಕಾರರು 6ನೇ ಗ್ಯಾರಂಟಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸುತ್ತಾ, ರಾಜ್ಯದಲ್ಲಿ ಆಗಲೇ ಬಾಕಿಯಿರುವ ಮೀಸಲಾತಿ ಹುದ್ದೆಗಳನ್ನು ಹಾಗು ಇತರೆ ನೇಮಕಾತಿಗಳನ್ನು ಕೂಡಲೇ ರದ್ದುಪಡಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಜಾತಿ ಜನಗಣತಿ ವರದಿಯನ್ನು ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುತ್ತಿರುವುದು ಸಂವಿಧಾನದ ವಿರುದ್ಧ ನಡೆಯುತ್ತಿರುವ ಅಪಚಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಾತಿ ಜನಗಣತಿ ವರದಿಯು ಎಸ್ ಸಿ ಒಳಮೀಸಲಾತಿ ವರ್ಗೀಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ, ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳಿಗೆ ಸಂಬಂಧಿಸಿದ ಮೂರು ಆಯೋಗಗಳ ವರದಿ ಮತ್ತು ಇತರ ಕಾನೂನಾತ್ಮಕ ದತ್ತಾಂಶಗಳು ಸರಕಾರದ ಕೈಯಲ್ಲಿವೆ. ಇವುಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠ ತೀರ್ಪನ್ನು ಅನುಸರಿಸಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್ ಹೆಚ್.ಸಿ, ಮುಖಂಡರಾದ ಅನ್ನದಾನಿ ಸಿ, ಎನ್.ಆರ್. ಚಂದ್ರಶೇಖರ್, ಸಿ.ಕೆ. ಪಾಪಯ್ಯ, ಕನ್ನಲಿ ಕೆಂಪಣ್ಣ, ನಂಜುಂಡ ಮೌರ್ಯ, ಅರಕೆರೆ ಸಿದ್ದರಾಜು, ಎಲೆಚಾಕನಹಳ್ಳಿ ಸ್ವಾಮಿ, ಕೃಷ್ಣ, ರಾಜು, ಶ್ರೀನಿವಾಸ್ ಬಸರಾಳು, ಅಂಬೂಜೀ, ಮಾರಸಿಂಗನಹಳ್ಳಿ ಬಸವರಾಜು, ಶಿವಕುಮಾರ್ ಹುನುಗನಹಳ್ಳಿ, ಸ್ವಾಮಿ ಹಟ್ನ್, ಎಲೆಚಾಲಕನಹಳ್ಳಿ ಗವಿ ಮತ್ತಿತರರು ಭಾಗವಹಿಸಿದ್ದರು.



ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.