ಮಂಗಳೂರಿನ ಪ್ರಸಿದ್ಧ ಉದ್ಯಮಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಹನಿಟ್ರ್ಯಾಪ್, ಬ್ಲ್ಯಾಕ್ಮೇಲ್ನಿಂದ ಕಂಗೆಟ್ಟು ಈ ಆತ್ಮಹತ್ಯೆ ಸಂಭವಿಸಿದೆ. ಪ್ರಕರಣದಲ್ಲಿ ಇನ್ನಷ್ಟು ನಿಗೂಢ ಅಂಶಗಳು, ಭಾಗೀದಾರಿಕೆಯ ಶಂಕೆ ಇದೆ. ಹಾಗಾಗಿ, ಆಳವಾದ ತನಿಖೆಯ ಅಗತ್ಯವಿದೆ ಎಂದು ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಈ ಪ್ರಕರಣ ಮಾತ್ರವಲ್ಲದೆ ಇನ್ನಷ್ಟು ಹನಿಟ್ರ್ಯಾಪ್, ಬ್ಲ್ಯಾಕ್ಮೇಲ್ ಪ್ರಕರಣಗಳು ಮಂಗಳೂರಿನ ಪ್ರತಿಷ್ಠಿತರು, ಉದ್ಯಮಿಗಳನ್ನು ಗುರಿಯಾಗಿಸಿ ನಡೆದಿರುವ ಸುದ್ದಿಗಳು ಹರಿದಾಡುತ್ತಿವೆ. ಸದ್ದಿಲ್ಲದೆ ಮುಗಿದು ಹೋಗಿರುವ ಇಂತಹ ಪ್ರಕರಣಗಳಲ್ಲಿ ಹಲವು ಕುಟುಂಬಗಳು ಛಿದ್ರವಾಗಿವೆ ಎಂಬ ಮಾತುಗಳಿವೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಷ್ಟಿತ ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ, ಬ್ಲ್ಯಾಕ್ಮೇಲ್ ಪ್ರಕರಣವನ್ನು ಆಳವಾದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಯನ್ನು ಬಳಸಿಕೊಂಡು ಹಣ ಹಾಗೂ ವೈಯಕ್ತಿಕ ದ್ವೇಷ ಸಾಧನೆ ಸಹಿತ ವಿವಿಧ ಉದ್ದೇಶ ಸಾಧನೆಗಾಗಿ ಮುಮ್ತಾಝ್ ಅಲಿಯವರನ್ನು ಹಾಗೂ ಕುಟುಂಬವನ್ನು ಗುರಿಯಾಗಿಸಿ ಪರಿಚಿತ ತಂಡ ಬ್ಲ್ಯಾಕ್ಮೇಲ್ ಮಾಡಿದೆ. ಅಸಾಧ್ಯ ಕಿರುಕುಳ ಕೂಡ ನೀಡಿದೆ. ಇದರಿಂದ ಉಂಟಾದ ಒತ್ತಡವನ್ನು ಭರಿಸಲಾಗದೆ ಮುಮ್ತಾಝ್ ಅಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.
ಬೆದರಿಕೆ, ಮಾನಸಿಕ ಕಿರುಕುಳ, ಪ್ರತಿಷ್ಠೆಗೆ ಕಳಂಕ ಹಚ್ಚುವ ಯತ್ನ, ಬ್ಲ್ಯಾಕ್ಮೇಲ್, ಸತತವಾಗಿ ಹಣ ಸುಲಿಗೆ… ಹೀಗೆ ಹಲವು ತಿಂಗಳುಗಳಷ್ಟು ದೀರ್ಘ ಕಾಲದ ವ್ಯಾಪ್ತಿಯನ್ನು ಈ ಪ್ರಕರಣ ಹೊಂದಿದೆ. ಕುಟುಂಬ ದೂರು ದಾಖಲಿಸಿದ ಆರು ಜನರಲ್ಲದೆ ಇನ್ನೂ ಹಲವರು ಈ ಕೃತ್ಯದಲ್ಲಿ ಕೈಯ್ಯಾಡಿಸಿರುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿದೆ ಎಂದು ನಾಗರಿಕ ಹೋರಾಟ ಸಮಿತಿ ತಿಳಿಸಿದೆ.

ಮುಮ್ತಾಝ್ ಅಲಿ ಮುಸ್ಲಿಂ ಸಾಮಾಜಿಕ ರಂಗದಲ್ಲಿ ಮಾತ್ರವಲ್ಲದೆ, ಧಾರ್ಮಿಕ ವಲಯದಲ್ಲಿಯೂ ಪ್ರಭಾವಶಾಲಿ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದರು. ಅಲಿ ಕುಟುಂಬ ರಾಜಕೀಯವಾಗಿಯೂ, ಉದ್ಯಮ ವಲಯದಲ್ಲಿಯೂ ಪ್ರತಿಷ್ಟಿತ ಸ್ಥಾನಮಾನ ಹೊಂದಿದೆ. ಈ ಎಲ್ಲಾ ಅಂಶಗಳು, ಆರೋಪಿತರಲ್ಲಿ ಕೆಲವರ ಹಿನ್ನೆಲೆಗಳು ಸಾಮಾನ್ಯ ಒಂದು ಹನಿ ಟ್ರಾಪ್ ಅಲ್ಲ ಎಂಬ ಸಾರ್ವಜನಿಕ ವಲಯದ ಅನುಮಾನಗಳನ್ನು ಪುಷ್ಟಿಗೊಳಿಸುವಂತಿದೆ. ಮಮ್ತಾಜ್ ಅಲಿಯವರನ್ನು ಹಣಕಾಸಿನ ಬ್ಲಾಕ್ ಮೇಲ್ ಗೆ ಒಳಪಡಿಸಿದ ಸಂದರ್ಭ ದೊಡ್ಡ ಮೊತ್ತ ಪಾವತಿಯಾಗಿರುವ ಕುರಿತು ಕುಟಂಬವೇ ದೂರಿನಲ್ಲಿ ಒಪ್ಪಿಕೊಂಡಿದೆ. ಹಣ ಪಾವತಿಯ ತರುವಾಯವೂ ಬ್ಲ್ಯಾಕ್ಮೇಲ್ ಮುಂದುವರಿದದ್ದು, ಆಪ್ತ ಮಾತುಕತೆಗಳ ಆಡಿಯೋಗಳು ಆಯ್ದ ಕೆಲವು ಪ್ರತಿಷ್ಠಿತರಿಗೆ ತಲುಪಿರುವುದು ಪ್ರಕರಣ ಮೇಲ್ಕಂಡಷ್ಟು ಸರಳ ಅಲ್ಲ. ಹಣದ ಸುಲಿಗೆ ಮಾತ್ರ ಇವರ ಉದ್ದೇಶ ಆಗಿರಲಿಲ್ಲ ಎಂಬಂತೆ ಗೋಚರಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಪ್ರಕರಣದ ತನಿಖೆಯನ್ನು ವಿಶೇಷವಾಗಿ ಪರಿಗಣಿಸಬೇಕು. ಒತ್ತಡಗಳಿಗೆ ಮಣಿಯದ ದಕ್ಷ ಅಧಿಕಾರಿಗಳಿಗೆ ತನಿಖೆಯ ಹೊಣೆಗಾರಿಕೆ ನೀಡಬೇಕು ಎಂದು ಹೋರಾಟ ಸಮಿತಿ ಹೇಳಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಹಿಂದೂ ಮಾಲೀಕತ್ವದ ಶಾಲೆಗಳಿಗೆ ಮಾತ್ರ ಮಕ್ಕಳನ್ನು ಕಳುಹಿಸಬೇಕು; ದ್ವೇಷ ಬಿತ್ತಿದ ಪ್ರೊಫೆಸರ್!
ಹನಿಟ್ರ್ಯಾಪ್ ಪ್ರಕರಣಗಳು ಮಂಗಳೂರಿನಲ್ಲಿ ಸಾಮಾನ್ಯವಾಗುತ್ತಿದೆ. ಹಲವಾರು ಉದ್ಯಮಿಗಳು, ಪ್ರತಿಷ್ಠಿತರು ಇದರ ಬಲಿಪಶುಗಳಾಗಿದ್ದಾರೆ. ಲಕ್ಷ, ಕೋಟಿಗಳ ಲೆಕ್ಕದಲ್ಲಿ ಹಣ ಪಾವತಿಸಿ “ಸೆಟಲ್ ಮೆಂಟ್” ಮಾಡಿಕೊಂಡಿದ್ದಾರೆ. ಪೊಲೀಸ್ ದೂರುಗಳು ದಾಖಲಾಗದೆ ಪ್ರಕರಣಗಳು ಮುಚ್ಚಿಹೋಗಿವೆ. ಇದರಿಂದ ಹಲವು ಕುಟುಂಬಗಳು ನೆಮ್ಮದಿ ಕಳೆದು ಕೊಂಡು ಛಿದ್ರವಾಗಿವೆ ಎಂಬ ಪಿಸು ಮಾತುಗಳು ವರ್ಷಗಳಿಂದ ಚರ್ಚೆಯಲ್ಲಿವೆ. “ವೈಟ್ ಕಾಲರ್” ಸೋಗಿನ, ರಾಜಕೀಯ ಒಡನಾಟದ ಕೆಲವರು ಇಂತಹ ಪ್ರಕರಣಗಳ ಸೂತ್ರಧಾರರು ಎಂದು ಆರೋಪಗಳಿವೆ. ಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ಉಂಟು ಮಾಡಿರುವ ತಲ್ಲಣಗಳನ್ನು ಗಮನಿಸಿಯಾದರೂ ಇಂತಹ ಜಾಲಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
